ಬೆಂಗಳೂರು: ಕೋಲಾರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಘೋಷಣೆ ಗೊಂದಲದ ಹಿನ್ನೆಲೆ ಯಾವುದೇ ಅಭ್ಯರ್ಥಿಯ ಹೆಸರನ್ನು ಅಧಿಕೃತವಾಗಿ ಪ್ರಕಟಿಸಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ತಿಳಿಸಿದರು.
ನಗರದಲ್ಲಿ ಮಾದ್ಯಮದವರೊಂದಿಗೆ ಮಾತನಾಡಿದ ಅವರು, ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಟಿಕೆಟ್ ಗೊಂದಲ ಉಂಟಾಗಿರುವ ಬಗ್ಗೆ ಮಾಹಿತಿ ಬಂದಿದೆ, ಯಾರೂ ಕೂಡ ಗಾಬರಿಯಾಗುವುದು ಬೇಡ, ಕಾಂಗ್ರೆಸ್ ಪಕ್ಷದಲ್ಲಿ ಶಿಸ್ತು ಮುಖ್ಯ, ಲಕ್ಷ್ಮಣ ರೇಖೆಯಲ್ಲಿ ಯಾರೂ ಶಿಸ್ತು ಮುರಿಯಬಾರದು, ಪಕ್ಷ ಇದ್ರೆ ನಾವೆಲ್ಲ, ಪಕ್ಷ ಇಲ್ಲಾಂದ್ರೆ ನಾವ್ಯಾರು ಇಲ್ಲ.
ಇಂದು ನಾನು ಮತ್ತು ಮುಖ್ಯಮಂತ್ರಿಗಳು ಇಬ್ಬರು ಸೇರಿ ಮುಖಂಡರೊಂದಿಗೆ ಚರ್ಚೆ ಮಾಡುತ್ತೇವೆ, ಯಾವುದೇ ಸಮಸ್ಯೆ ಇದ್ದರು ನಾವು ಬಗೆಹರಿಸುತ್ತೇವೆ, ಇದರಲ್ಲಿ ರಾಜ್ಯದ ಹಿತ ಮತ್ತು ಪಕ್ಷದ ಹಿತವನ್ನು ನೋಡಬೇಕಾಗುತ್ತದೆ. ಪಕ್ಷಕ್ಕೆ ಆತಂಕ ತರುವ ಕೆಲಸ ಯಾರು ಮಾಡಬಾರದು. ಕೋಲಾರಕ್ಕೆ ಸಂಬಂಧಿಸಿದಂತೆ ಇದುವರೆಗೂ ಯಾವುದೇ ಟಿಕೆಟ್ ಘೋಷಣೆಯಾಗಿಲ್ಲ ಇದು ತಪ್ಪು ಗ್ರಹಿಕೆ ಎಂದು ಅವರು ಹೇಳಿದರು.