ಹೊಸಪೇಟೆ: ಸ್ವಾಮೀಜಿಗಳು, ಯೋಗಿಗಳು ಸೇರಿದಂತೆ ಕೆಲವರ ಸ್ವತ್ತಾಗಿದ್ದ ಯೋಗಾಭ್ಯಾಸವನ್ನು ಸಾರ್ವಜನಿಕರ ಸ್ವತ್ತಾಗಿ ರೂಪಿಸಿದ ಕೀರ್ತಿ ಯೋಗ ಗುರು ಬಾಬಾ ರಾಮದೇವ ಅವರಿಗೆ ಸಲ್ಲುತ್ತದೆ ಎಂದು ಹರಿಹರ ಪಂಚಮಸಾಲಿ ಪೀಠಾಧಿಪತಿ ಹಾಗೂ ಯೋಗಗುರು ವಚನಾನಂದ ಸ್ವಾಮಿಜಿ ಹೇಳಿದರು.
ವಿಜಯನಗರ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪ್ರವಾಸೋದ್ಯಮ ಇಲಾಖೆ ವತಿಯಿಂದ ಹಂಪಿ ಉತ್ಸವದ ಪ್ರಯುಕ್ತ ವಿಜಯ ವಿಠಲ ದೇವಾಲಯ ಆವರಣದಲ್ಲಿ ಶನಿವಾರ ಮುಂಜಾನೆ ಹಮ್ಮಿಕೊಂಡಿದ್ದ ಸಾಮೂಹಿಕ ಯೋಗಾಸನದಲ್ಲಿ ಮಾತನಾಡಿದ ಅವರು, ಇಂದು ಪತಂಜಲಿ ಪರಿವಾರ ದೇಶ ವಿದೇಶಗಳಲ್ಲಿ ಯೋಗವನ್ನು ಉಚಿತವಾಗಿ ತರಬೇತಿಗೊಳಿಸುವ ಮೂಲಕ ಸೇವೆ ಮಾಡುತ್ತಿದೆ ಎಂದರು. ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ಅವರು ಮೊದಲ ಬಾರಿ ಸಾಮೂಹಿಕ ಯೋಗಕ್ಕೆ ಚಾಲನೆ ನೀಡಿದ್ದು, ಒಂದು ಸಾಧನೆ. ಇದು ನಿಜವಾಗಿಯೂ ಆಗಬೇಕಾದ ಕಾರ್ಯವೂ ಹೌದು. ಮುಂದೆ ಪ್ರಮುಖ ಕಾರ್ಯಕ್ರಮವಾಗಿ ರೂಪುಗೊಳಬೇಕು ಎಂದರು.
ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಮಾತನಾಡಿ ಕಠಿಣವಾದದನ್ನು ಮಾಡುವುದು, ಮನಸ್ಸು ಹಾಗೂ ದೇಹ ನಿಗ್ರಹಿಸಲು ಮಾಡವ ದಂಡನೆ ಯೋಗವಾಗಿದೆ. ಯೋಗ ನಮ್ಮ ಜೀವನದ ಭಾಗ ಹಾಗೂ ನಿತ್ಯಕ್ರಿಯೆಯಾಗಬೇಕು ಎಂದರು.
ಹಂಪಿ ಉತ್ಸವದಲ್ಲಿ ಇದೇ ಮೊದಲಬಾರಿಗೆ ಯೋಗವನ್ನು ಪರಿಚಯಿಸುವ ಮೂಲಕ ನಡೆಸಿದ ಮೊದಲ ಯೋಗಾಭ್ಯಾಸದಲ್ಲಿ ಪತಂಜಲಿ ಯೋಗ ಪೀಠದ ಯೋಗಗುರು ಭವರ್ ಲಾಲ್ ಆರ್ಯ ಜೊತೆಗೆ ಯೋಗಾಭ್ಯಾಸಕ್ಕೆ ಮಾರ್ಗದರ್ಶನ ನೀಡಿದರು. ಯೋಗಾಭ್ಯಾಸದ ಜೊತೆ ಯೋಗದ ಮಹತ್ವ, ಯೋಗ ಮಾಡುವ ವಿಧಾನ ಸೇರಿದಂತೆ ಅದರಿಂದ ಆಗುವ ಪ್ರಯೋಜನಗಳ ಕುರಿತು ಮಾಹಿತಿಯನ್ನು ನೀಡಿದರು. ಈ ಸಂದರ್ಭದಲ್ಲಿ ಪತಂಜಲಿ ಯೋಗಪೀಠ ಭವರ್ ಲಾಲ್ ಆರ್ಯ, ಆಯುಷ್ ಇಲಾಖೆಯ ಡಾ.ಸರಳಾ, ಪತಂಜಲಿ ಯೋಗಸಾಧಕರು, ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿದ್ಯಾಲಯದ ಸಾಧಕರು ಸೇರಿದಂತೆ ನೂರಾರು ಯೋಗಾಸಕ್ತರು ಯೋಗಾಭ್ಯಾಸದಲ್ಲಿ ಪಾಲ್ಗೊಂಡಿದ್ದರು.