ಬೆಂಗಳೂರು: ಭಾರತದಲ್ಲಿ ಅತಿ ಹೆಚ್ಚು ಭೇಟಿ ನೀಡುವ ಪವಿತ್ರ ಸ್ಥಳಗಳಲ್ಲಿ ಒಂದಾದ ಪುರಿಯ ಜಗನ್ನಾಥ ದೇವಾಲಯಕ್ಕೆ ಬಸ್ ಸೇವೆ ಆರಂಭಿಸುವಂತೆ ಕೆಎಸ್ಆರ್ಟಿಸಿ ಮುಂದಾಗಿದೆ. ಹೌದು..ಬೆಂಗಳೂರಿನಿಂದ ಒಡಿಶಾ ರಾಜ್ಯದ ಮೂರು ನಗರಗಳಿಗೆ ಶೀಘ್ರವೇ KSRTC ಬಸ್ ಸಂಚಾರ ಆರಂಭವಾಗಲಿದೆ.
ಈ ಬಸ್ ಸೇವೆಗಳಿಗೆ ಇರುವ ಬೇಡಿಕೆ ಗಮನಿಸಿರುವ ನಿಗಮ, ಪ್ರಾಯೋಗಿಕವಾಗಿ ಬಸ್ ಸಂಚಾರ ಆರಂಭಿಸಲು ಮುಂದಾಗಿದೆ. ಇದಕ್ಕಾಗಿ ಐಷಾರಾಮಿ ಅಂಬಾರಿ ಉತ್ಸವ ಮಾದರಿಯ ಸ್ಲೀಪರ್ ಬಸ್ಗಳನ್ನು ಬಳಕೆ ಮಾಡಲಾಗುತ್ತದೆ.
ಸುಮಾರು 1,500 ಕಿ. ಮೀ. ಉದ್ದದ ಬಸ್ ಮಾರ್ಗ ಇದಾಗಿದ್ದು, ಐಷಾರಾಮಿ ಅಂಬಾರಿ ಉತ್ಸವ ಮಾದರಿಯ ಬಸ್ನಲ್ಲಿಯೇ 18 ಗಂಟೆಗಳ ಕಾಲ ಪ್ರಯಾಣ ಮಾಡಬೇಕಿದೆ. ಈ ಪ್ರಯೋಗ ಯಶಸ್ವಿಯಾದರೆ ಗುಜರಾತ್ ರಾಜ್ಯದ ಕೆಲವು ನಗರಗಳಿಗೆ ಸಹ ಬಸ್ ಸಂಪರ್ಕವನ್ನು ಕಲ್ಪಿಸಲು ಕೆಎಸ್ಆರ್ಟಿಸಿ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ.
ಸದ್ಯ ಕೆಎಸ್ಆರ್ಟಿಸಿ ಬೆಂಗಳೂರು-ಮುಂಬೈ, ಬೆಂಗಳೂರು-ಶಿರಡಿ ನಡುವೆ ಐಷಾರಾಮಿ ಬಸ್ ಸೇವೆ ಒದಗಿಸುತ್ತಿದೆ. ಈ ಮಾರ್ಗದ ಬಸ್ಗಳು ಸುಮಾರು 1000 ಕಿ. ಮೀ. ಸಂಚಾರ ನಡೆಸುತ್ತಿವೆ. ಆದರೆ ಒಡಿಶಾ ರಾಜ್ಯದ ಮೂರು ಪ್ರಮುಖ ನಗರಗಳು ಇದಕ್ಕಿಂತ ದೂರ ಇದೆ. ಆದರೆ ಈ ಮಾರ್ಗದಲ್ಲಿ ಬಸ್ ಸಂಚಾರವನ್ನು ಆರಂಭಿಸುವಂತೆ ಬೇಡಿಕೆ ಹೆಚ್ಚಾಗಿದೆ.