ವಿಜಯಪುರ:- ಗ್ಯಾರಂಟಿ ತೆಗೆದರೆ ಝೀರೋ ಆಗುತ್ತೇವೆಂದು ತೈಲ ದರ ಏರಿಕೆ ಮಾಡುತ್ತಿದ್ದಾರೆ ಎಂದು ಶಾಸಕ ಯತ್ನಾಳ್ ಹೇಳಿದ್ದಾರೆ.
ಪಕ್ಷದ ಮುಂದಿನ ಹೋರಾಟಗಳ ಕುರಿತು ಎನ್ ರವಿಕುಮಾರ್, ವೀರಣ್ಣ ಚರಂತಿಮಠ, ಅಭಯ ಪಾಟೀಲರೊಂದಿಗೆ ಚರ್ಚಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು. ಕಾಂಗ್ರೆಸ್ನ ದುರಾಡಳಿತದ ವಿಚಾರವಾಗಿ ಅಧಿವೇಶನದಲ್ಲಿ ಚರ್ಚೆ ಮಾಡುವುದು ಸೇರಿದಂತೆ, ನಾವೆಲ್ಲರೂ ಒಂದಾಗಿ ಪಕ್ಷದ ಚೌಕಟ್ಟಿನಲ್ಲಿ ಕೆಲಸ ಮಾಡುವ ವಿಚಾರವಾಗಿ ಚರ್ಚೆ ಆಗಿದೆ ಎಂದರು. ಗ್ಯಾರಂಟಿ ತೆಗೆದರೆ ಝೀರೋ ಆಗುತ್ತೇವೆ ಎಂಬ ಕಾರಣದಿಂದ ತೈಲದ ದರವನ್ನು ಏರಿಕೆ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಅವರಿಗೆ ನೈತಿಕ ಹಕ್ಕಿಲ್ಲ, ಗ್ಯಾರಂಟಿ ಸಂಪೂರ್ಣವಾಗಿ ವಿಫಲವಾಗಿದೆ ಎಂದರು.
ಸಾರಿಗೆ ಬಸ್ಗಳು ಲಾಭದಲ್ಲಿ ಇವೆ ಎಂದು ಹೇಳುವ ನೀವು ಗಂಡಸರಿಗೂ ಫ್ರೀ ಮಾಡಿ. ನಾನು ಎಂಎಲ್ಎ ಇದ್ದೇನೆ. ಈ ಒಂದು ವರ್ಷದಲ್ಲಿ ಒಂದೇ ಒಂದು ಭೂಮಿ ಪೂಜೆಯನ್ನು ನಾನು ಮಾಡಿಲ್ಲ. ಸಚಿವ ಚಲುವರಾಯಸ್ವಾಮಿ ಗ್ಯಾರಂಟಿ ಯೋಜನೆ ಕೈಬಿಟ್ಟು ಅಭಿವೃದ್ಧಿಗೆ ಹಣ ಕೊಡಿ ಎಂದಿದ್ದಾರೆ. ಇನ್ನೊಂದು ತಿಂಗಳಲ್ಲಿ ಕಾಂಗ್ರೆಸ್ನ ಶಾಸಕರೇ ಬಂಡಾಯ ಏಳುತ್ತಾರೆ. ರಾಜ್ಯದಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಮನೆಗಳ ನಿರ್ಮಾಣ ಕಾಮಗಾರಿಗಳು ಸ್ಥಗಿತವಾಗಿವೆ. ಇನ್ನೂ ಮೂರು ತಿಂಗಳಲ್ಲಿ ಕಾಂಗ್ರೆಸ್ನವರು ಬಂಡಾಯ ಏಳುತ್ತಾರೆ ಎಂದರು.
ಅಭಿವೃದ್ಧಿಗೆ ಹಣ ಬರುತ್ತಿಲ್ಲ ಎಂದು ನನ್ನ ಮುಂದೆ ಮೂವರು ಶಾಸಕರು ಅಸಮಾಧಾನ ತೋಡಿಕೊಂಡಿದ್ದಾರೆ. ವಿಜಯಪುರ ಜಿಲ್ಲೆಯ ಉಸ್ತುವಾರಿ ಸಚಿವರನ್ನು ಹಿಡಿದು ಎಲ್ಲರೂ ಬೇಸರಗೊಂಡಿದ್ದಾರೆ. ಈ ಸರ್ಕಾರ ವಿಸರ್ಜನೆಗೊಂಡರೂ ಆಶ್ಚರ್ಯಪಡುವ ಹಾಗಿಲ್ಲ. ಜಿಲ್ಲೆಯ ಶಾಸಕರು ಎಷ್ಟು ಭೂಮಿಪೂಜೆ ಮಾಡಿದ್ದಾರೆ ಎಂಬುದನ್ನ ಮೊದಲು ಹೇಳಲಿ ಎಂದು ಯತ್ನಾಳ್ ಸವಾಲು ಹಾಕಿದರು.