ಬೆಂಗಳೂರು: ಸರ್ಕಾರ ಜನರ ಭಾವನೆಗಳಿಗೆ ಬೆಲೆ ಕೊಟ್ಟು ಕೆರಗೋಡಿನಲ್ಲಿ (Keragodu) ಭಗವಾನ್ ಧ್ವಜ ಹಾರಿಸಲು ಅವಕಾಶ ಕೊಡಬೇಕು ಎಂದು ಮಾಜಿ ಡಿಸಿಎಂ ಅಶ್ವಥ್ ನಾರಾಯಣ್ (CN Ashwath Narayan) ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಕೆರಗೋಡಿನ ಗ್ರಾಮಸ್ಥರು ಸ್ವಂತ ಹಣದಲ್ಲಿ ಧ್ವಜಸ್ತಂಭ ನಿಲ್ಲಿಸಿದ್ದಾರೆ. ಪಂಚಾಯತ್ನಿಂದ ನಿರ್ಣಯ ಮಾಡಿದ್ದಾರೆ. ರಾಷ್ಟ್ರಧ್ವಜ, ನಾಡಧ್ವಜ, ಭಗವಾನ್ ಧ್ವಜ ಹಾರಿಸಲು ಅನುಮತಿ ಪಡೆದಿದ್ದಾರೆ. ದೇಶದಲ್ಲಿ, ರಾಜ್ಯದಲ್ಲಿ ಯಾವ ಕಡೆಯೂ ಭಗವಾನ್ ಧ್ವಜ ಹಾಕಿಲ್ಲ. ಈ ಸರ್ಕಾರಕ್ಕೆ ಇದೊಂದೆ ಧ್ವಜಸ್ತಂಭ ಕಂಡಿದ್ದಾ? ಭಗವಾನ್ ಧ್ವಜ ಹಾರಿಸಿದ್ದು ಕಾನೂನಿನಲ್ಲಿ ತಪ್ಪು ಇದ್ದರೆ ನೋಟಿಸ್ ಕೊಡಬಹುದಿತ್ತು. ಆದರೆ ಇವರು ಏಕಾಏಕಿ ಬಂದು ಭಗವಾನ್ ಧ್ವಜ ಇಳಿಸಿದರು ಎಂದು ಕಿಡಿಕಾರಿದರು
ರಾಷ್ಟ್ರಧ್ವಜ ಹಾರಾಟ ಮಾಡಲು ಅಧಿಕಾರಿಗಳು ಕಾನೂನು ಪಾಲನೆ ಮಾಡಿಲ್ಲ. ಎಸಿ ಅವರು ಕಾನೂನು ಉಲ್ಲಂಘನೆ ಮಾಡಿದ್ದಾರೆ. ಗ್ರಾಮಸ್ಥರು ಎಸಿ ವಿರುದ್ಧ ದೂರು ಕೊಟ್ಟಿದ್ದಾರೆ. ತಕ್ಷಣ ಅವರ ಮೇಲೆ ಕ್ರಮ ಆಗಬೇಕು. ಎಫ್ಐಆರ್ ಹಾಕಬೇಕು. ಎಸಿ ವಿರುದ್ಧ ಕ್ರಮ ಆಗಬೇಕು. ಭಗವಾನ್ ಧ್ವಜ ಹಾರಿಸಲು ಅವಕಾಶ ಕೊಡಬೇಕು ಎಂದು ಒತ್ತಾಯಿಸಿದರು.