ರೈತರ ವ್ಯವಸಾಯಕ್ಕೆ ಸಹಾಯವಾಗಲೆಂದು ಸರ್ಕಾರ ರೂಪಿಸಿರುವ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ (PM Kisan Samman Nidhi Yojana) 16 ನೇ ಕಂತಿಗಾಗಿ ಕಾಯುತ್ತಿದ್ದಾರೆ. ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ ನೊಂದಣಿ ಮಾಡಿಸಿದ್ದರೆ ಸಾಲದು, ಇಕೆವೈಸಿ ಅಪ್ಡೇಟ್ ಆಗಿರಬೇಕು. ಇಕೆವೈಸಿ ಮಾಡದಿದ್ದವರಿಗೆ ಕಂತಿನ ಹಣ ಸಿಕ್ಕಿರಲಿಲ್ಲ. ಈ ಬಾರಿಯೂ ಅದೇ ಪರಿಸ್ಥಿತಿ ಬರುತ್ತದೆ.
ಇತ್ತೀಚಿನ ಮಾಹಿತಿ ಪ್ರಕಾರ, ಕೇಂದ್ರ ಸರ್ಕಾರವು ಫೆಬ್ರವರಿ 28 ಮತ್ತು ಮಾರ್ಚ್ 31ರ ನಡುವೆ ಕೆಲವು ಪ್ರಮುಖ ಮಾಧ್ಯಮ ಸಂಸ್ಥೆಗಳ ಮೂಲಕ ಪಿಎಂ ಕಿಸಾನ್ನ 16ನೇ ಕಂತನ್ನು ಬಿಡುಗಡೆ ಮಾಡುವ ನಿರೀಕ್ಷೆ ಇದೆ. ಎಂದಿನಂತೆ, ಕೇಂದ್ರ ಸರ್ಕಾರವು ನೇರ ನಗದು ವರ್ಗಾವಣೆ (DBT) ವಿಧಾನದ ಮೂಲಕ ಅರ್ಹ ರೈತರ ಬ್ಯಾಂಕ್ ಖಾತೆಗೆ ಪಿಎಂ ಕಿಸಾನ್ನ 16ನೇ ಕಂತನ್ನು ವರ್ಗಾಯಿಸುತ್ತದೆ. ಆದರೆ, ಈ ಬಗ್ಗೆ ಸರ್ಕಾರದಿಂದ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ.
ಇದುವರೆಗೆ ಕೇಂದ್ರ ಸರ್ಕಾರವು ಪಿಎಂ ಕಿಸಾನ್ ಯೋಜನೆಗೆ ಸಂಬಂಧಿಸಿದ 15 ಕಂತುಗಳನ್ನು ರೈತರಿಗೆ ವರ್ಗಾಯಿಸಿದೆ. ಕೊನೆಯ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಅವರು 2023ರ ನವೆಂಬರ್ 16ರಂದು ಪಿಎಂ ಕಿಸಾನ್ನ 15 ನೇ ಕಂತನ್ನು ಬಿಡುಗಡೆ ಮಾಡಲಾಗಿತ್ತು. ಇದರ ಭಾಗವಾಗಿ 8 ಕೋಟಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಸುಮಾರು18,000 ಕೋಟಿ ರೂಪಾಯಿಯನ್ನು ವರ್ಗಾಯಿಸಿತ್ತು.
ದೇಶಾದ್ಯಂತ ಬಡ ರೈತರಿಗೆ ಆರ್ಥಿಕ ಪ್ರಯೋಜ ಒದಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು ಪ್ರಾರಂಭಿಸಿದೆ. ಈ ಯೋಜನೆಯ ಭಾಗವಾಗಿ ಕೇಂದ್ರ ಸರ್ಕಾರವು ರೈತರಿಗೆ ವಾರ್ಷಿಕ 6000 ರೂ. ನೆರವು ಒದಗಿಸುತ್ತದೆ. ಅಂದರೆ, ಪ್ರತಿ ನಾಲ್ಕು ತಿಂಗಳಿಗೊಮ್ಮೆ 2,000 ರೂ.ನಂತೆ ವಾರ್ಷಿಕ ಮೂರು ಕಂತುಗಳನ್ನು ರೈತರ ಬ್ಯಾಂಕ್ ಖಾತೆಗೆ ನೇರವಾಗಿ ಹಣ ವರ್ಗಾಯಿಸುತ್ತದೆ.
ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ ಫಲಾನುಭವಿಗಳ ಹೆಸರು ನೋಡುವ ಕ್ರಮ
- ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ವೆಬ್ಸೈಟ್ಗೆ ಭೇಟಿ ನೀಡಿ: pmkisan.gov.in
- ಮುಖ್ಯಪುಟದ ಫಾರ್ಮರ್ಸ್ ಕಾರ್ನರ್ ಸೆಕ್ಷನ್ನಲ್ಲಿ ಬೆನಿಫಿಶಿಯರಿ ಲಿಸ್ಟ್ ಮೇಲೆ ಕ್ಲಿಕ್ ಮಾಡಿ
- ನಿಮ್ಮ ರಾಜ್ಯ, ಜಿಲ್ಲೆ, ಉಪಜಿಲ್ಲೆ, ಬ್ಲಾಕ್ ಹಾಗೂ ಗ್ರಾಮವನ್ನು ಆಯ್ಕೆ ಮಾಡಿ, ಗೆಟ್ ರಿಪೋರ್ಟ್ ಕ್ಲಿಕ್ ಮಾಡಿ
- ಇಲ್ಲಿ ಆ ಗ್ರಾಮದ ಎಲ್ಲಾ ಫಲಾನುಭವಿಗಳ ಪಟ್ಟಿ ಕಾಣುತ್ತದೆ. ಅದರಲ್ಲಿ ನಿಮ್ಮ ಹೆಸರಿದೆಯಾ ಗಮನಿಸಿ. ಅದರಲ್ಲಿ ನಿಮ್ಮ ಹೆಸರಿಲ್ಲದಿದ್ದರೆ, ಇಕೆವೈಸಿ ಆಗದೇ ಇದ್ದಿರಬಹುದು, ಅಥವಾ ನೀವಿನ್ನೂ ನೊಂದಣಿ ಮಾಡಿಸದೇ ಇರಬಹುದು.
- ಇದೇ ಪಿಎಂ ಕಿಸಾನ್ ವೆಬ್ಸೈಟ್ನಲ್ಲಿ ಇಕೆವೈಸಿ ಮಾಡಲು ಅವಕಾಶ ಸದಾ ಇರುತ್ತದೆ. ಹಾಗೆಯೇ, ಹೊಸದಾಗಿ ನೊಂದಣಿ ಮಾಡಿಸಬೇಕೆಂದರೆ ನ್ಯೂ ಫಾರ್ಮರ್ ರಿಜಿಸ್ಟ್ರೇಶನ್ ಮೇಲೆ ಕ್ಲಿಕ್ ಮಾಡಿ, ಎಲ್ಲಾ ಅಗತ್ಯ ವಿವರ ತುಂಬಿ ಸಲ್ಲಿಸಿದರೆ ಯೋಜನೆಗೆ ನೀವು ನೊಂದಾಯಿಸಿಕೊಳ್ಳಬಹುದು.