ಚಿಕ್ಕಮಗಳೂರು:– ಜಿಲ್ಲೆಯ ಎನ್ಆರ್ ಪುರ ತಾಲೂಕಿನ ಬ್ಯಾಡಿಗೆರೆ ಗ್ರಾಮದ ಯುವಕರು ತಮಗೆ ಮದುವೆ ಭಾಗ್ಯ ಕರುಣಿಸೋ ಭಗವಂತ ಎಂದು ದೇವರಿಗೆ ತಮ್ಮ ಹೆಸರುಗಳನ್ನು ಬರೆದು ಕಾಣಿಕೆ ಹುಂಡಿಗೆ ಹಾಕಿದ್ದಾರೆ.
ಬ್ಯಾಡಿಗೆರೆ ಗ್ರಾಮದ 30ಕ್ಕೂ ಹೆಚ್ಚು ಯುವಕರು ತಮಗೆ 35 ವರ್ಷ ದಾಟಿದರೂ ಮದುವೆಯಾಗಿಲ್ಲ ಚಿಂತೆಯಲ್ಲಿದ್ದಾರೆ. ಎಷ್ಟೇ ಹುಡುಕಾಡಿದರೂ ಹೆಣ್ಣು ಕೊಡಲು ಒಲ್ಲೆ ಎನ್ನುತ್ತಿದ್ದಾರೆ. ಕೊನೆಗೆ, ಮದುವೆ ಭಾಗ್ಯ ಕರುಣಿಸೋ ಭಗವಂತ ಎಂದು ಬ್ರಹ್ಮಚಾರಿ ಯುವಕರು ಕಾಗದದಲ್ಲಿ ತಮ್ಮ ಹೆಸರುಗಳನ್ನ ಬರೆದು ಹುಂಡಿಗೆ ಹಾಕಿದ್ದಾರೆ.
ಬ್ಯಾಡಿಗೆರೆ ಗ್ರಾಮದಲ್ಲಿ ಮದುವೆ ಆಗದೆ ಉಳಿದ 30 ರಿಂದ 38 ವರ್ಷದ ಯುವಕರಿದ್ದಾರೆ. ಬ್ಯಾಡಿಗೆರೆ ಗ್ರಾಮದ ಶ್ರೀ ಸಿದ್ದೇಶ್ವರ ಸ್ವಾಮಿ, ಶ್ರೀ ಅಜ್ಜಯ್ಯ ಸ್ವಾಮಿ ಹಾಗೂ ಶ್ರೀ ಅನ್ನಪೂರ್ಣೇಶ್ವರಿ ಜಾತ್ರಾ ಮಹೋತ್ಸವ ನಡೆಯಿತು. ಈ ವೇಳೆ ಮದುವೆ ಆಗಲೆಂದು ಜಾತ್ರೆಯಲ್ಲಿ ಹೆಸರುಗಳನ್ನ ಬರೆದು ಹುಂಡಿಗೆ ಹಾಕಿ ಪ್ರಾರ್ಥನೆ ಮಾಡಿಕೊಂಡಿದ್ದಾರೆ.
ಊರಿನ ಮುಖ್ಯಸ್ಥರು ಹಾಗೂ ಪರದೇಶಪ್ಪನ ಮಠದ ಗುರುಗಳಾದ ಮಧುಕುಮಾರ್ ಶಾಸ್ತ್ರಿ ಸುಮಾರು 30ಕ್ಕೂ ಹೆಚ್ಚು ಬ್ರಹ್ಮಚಾರಿ ಯುವಕರ ಹೆಸರುಗಳನ್ನ ಪಟ್ಟಿ ಮಾಡಿ, ಆದಷ್ಟು ಬೇಗ ಹುಡುಗಿ ಸಿಗಲೆಂದು ವಿಶೇಷ ಪ್ರಾರ್ಥನೆ ಸಲ್ಲಿಸಿ ಯುವಕರ ಪಟ್ಟಿಯನ್ನು ಕಾಣಿಕೆ ಹುಂಡಿಗೆ ಹಾಕಿ ಇನ್ನೊಂದು ಪಟ್ಟಿಯನ್ನು ಪರದೇಶಪ್ಪನ ಮಠಕ್ಕೆ ಕಳುಹಿಸಿದ್ದಾರೆ.
ಸುಗ್ಗಿ-ಜಾತ್ರಾ ಮಹೋತ್ಸವದ 4ನೇ ದಿನ ಈ ಕಾರ್ಯ ಮಾಡಲಾಗಿದೆ. ಎಷ್ಟೆ ಹುಡುಕಿದರೂ ಹುಡುಗಿ ಸಿಗುತ್ತಿಲ್ಲ. ವಯಸ್ಸು ಹೆಚ್ಚಾಗುತ್ತಿದೆ. ನಮ್ಮೆಲ್ಲರಿಗೂ ಮದುವೆ ಭಾಗ್ಯ ಕರುಣಿಸೋ ದೇವ ಎಂದು ಬೇಡಿಕೊಂಡಿದ್ದಾರೆ