ವಿಜಯಪುರ: ಕಚತೀವು ದ್ವೀಪವನ್ನು ಶ್ರೀಲಂಕಾಗೆ ಸ್ನೇಹದ ಸಂಕೇತವಾಗಿ ಬಿಟ್ಟು ಕೊಟ್ಟೆವು ಎಂಬ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೆಗೆ ಪ್ರತಿಕ್ರಿಯಿಸಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ದೇಶದ ನೆಲವನ್ನು ಮುಯ್ಯಿ ಕೊಡುವುದಕ್ಕೆ ಭಾರತವೇನೂ ಕಾಂಗ್ರೆಸ್ ನ ಪಿತ್ರಾರ್ಜಿತ ಆಸ್ತಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, “ಹಿರಿಯ ರಾಜಕಾರಣಿ ಶ್ರೀ ಮಲ್ಲಿಕಾರ್ಜುನ ಖರ್ಗೆ ಅವರ ಈ ಮಾತುಗಳು ನಿಜಕ್ಕೂ ಆಶ್ಚರ್ಯಕರ,
ಶೋಚನೀಯ ಹಾಗೂ ಕಾಂಗ್ರೆಸ್ ಪಕ್ಷದ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ. ದೇಶದ ಭೂಮಿಯನ್ನು ರಕ್ಷಿಸಲು ಅಹರ್ನಿಶಿ ಟೊಂಕಕಟ್ಟಿ ಗಡಿಯಲ್ಲಿ ಕಾಯುತ್ತಿರುವ ನಮ್ಮ ಸೈನಿಕರಿಗೆ ಮಾಡುವ ಅವಮಾನ. ದೇಶದ ನೆಲವನ್ನು ‘ಮುಯ್ಯಿ’ ಕೊಡುವುದಕ್ಕೆ ಭಾರತ ಕಾಂಗ್ರೆಸ್ ಪಕ್ಷದ ಪಿತ್ರಾರ್ಜಿತ ಆಸ್ತಿಯಲ್ಲ. ಖರ್ಗೆ ಅವರು ತಮ್ಮ ವಯಸ್ಸಿನಂತೆ ತೂಕವಾಗಿ ಮಾತನಾಡುವುದನ್ನು, ಪ್ರಬುದ್ಧವಾಗಿ ಮಾತನಾಡುವುದನ್ನು ಕಲಿಯಲಿ.” ಎಂದು ಎಕ್ಸ್ ನಲ್ಲಿ ಪೋಸ್ಚ್ ಮಾಡಿದ್ದಾರೆ.
ಇಂತಹ ವಿದ್ಯಾರ್ಥಿಗಳಿಗೆ ಸಿಗಲಿದೆ ತಿಂಗಳಿಗೆ 12,400 ರೂ. ಸ್ಕಾಲರ್ ಶಿಪ್..! ಇಂದೇ ಅರ್ಜಿ ಸಲ್ಲಿಸಿ
ಇನ್ನು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಬಂಧನ ಸೇರಿದಂತೆ ಹಲವು ವಿಚಾರಗಳನ್ನು ಉಲ್ಲೇಖಿಸಿ ಬಿಜೆಪಿಗರು ತಮಗಿರುವ ಅಧಿಕಾರ ದುರುಪಯೋಗ ಮಾಡಿಕೊಂಡು ಶಾಶ್ವತವಾಗಿ ಕುರ್ಚಿಯಲ್ಲಿ ಇರಬಹುದು ಎಂಬ ಭ್ರಮೆಯಲ್ಲಿದ್ದಾರೆ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಗೆ ಶಾಸಕ ಬಸನಗೌಡ ಪಾಟೀಲ ಯತ್ವಾಳ್ ಟೀಕಿಸಿದ್ದಾರೆ. ಜನ ನಿಮ್ಮನ್ನು ಮತ್ತೆ ಅಧಿಕಾರ ನೀಡುತ್ತಾರೆ ಎಂದು ನೀವು ನಂಬಿದರೆ, ಅದು ನಿಮ್ಮ ಭ್ರಮೆಯಷ್ಟೆ ಎಂದು ಟಾಂಗ್ ನೀಡಿದ್ದಾರೆ.