ಮುಂಬೈ: ಘಾಟ್ಕೋಪರ್ನಲ್ಲಿ ಬಿಲ್ ಬೋರ್ಡ್ ಕುಸಿದು ಬಿದ್ದು 16 ಜನರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಹೀರಾತು ಫಲಕ ಅಳವಡಿಸುವ ಹೊಣೆ ಹೊತ್ತಿದ್ದ ಉದ್ಯಮಿ ಭವೇಶ್ ಭಿಂಡೆ ಎಂಬವರನ್ನು ರಾಜಸ್ಥಾನದ ಉದಯಪುರದಲ್ಲಿ ಪೊಲೀಸರು ಬಂಧಿಸಿದ್ದಾರೆ. ಇಗೋ ಮೀಡಿಯಾ ಪ್ರೈವೇಟ್ ಲಿಮಿಟೆಡ್ನ ಮಾಲೀಕ ಭಿಂಡೆ ಅವರನ್ನು ಮುಂಬೈ ಪೊಲೀಸ್ ಕ್ರೈಂ ಬ್ರಾಂಚ್ ಬಂಧಿಸಿದೆ.
ಆರೋಪಿಯ ಬಂಧನಕ್ಕೆ ಮುಂಬೈ ಪೊಲೀಸರಿಂದ ಒಟ್ಟು ಎಂಟು ತಂಡಗಳನ್ನು ವಿವಿಧ ಸ್ಥಳಗಳಿಗೆ ಕಳುಹಿಸಲಾಗಿತ್ತು. ಆರೋಪಿ ಪದೇ ಪದೇ ಸ್ಥಳ ಬದಲಿಸುತ್ತಿದ್ದ. ಅಲ್ಲದೇ ಹೆಸರು ಬದಲಿಸಿಕೊಂಡು ಉದಯಪುರದ ಹೋಟೆಲ್ ಒಂದರಲ್ಲಿ ತಂಗಿದ್ದ. ಇದೀಗ ಆರೋಪಿಯ ಬಂಧನವಾಗಿದ್ದು, ಇಂದು ಬೆಳಗ್ಗೆ ಮುಂಬೈಗೆ ಕರೆತಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಾಹೀರಾತು ಫಲಕ ಅಳವಡಿಕೆ ಕಂಪನಿ, ಫಲಕ ಅಳವಡಿಸುವಲ್ಲಿ ನಿಯಮ ಉಲ್ಲಂಘನೆಯಾಗಿರುವುದು ಸ್ಪಷ್ಟವಾಗಿದೆ. ಕಂಪನಿಗೆ 40*40 ಅಡಿಗಳ ಫಲಕ ಅಳವಡಿಸಲು ಮಾತ್ರ ಪರವಾನಿಗೆ ಇತ್ತು. ದುರ್ಘಟನೆಗೆ ಕಾರಣವಾದ ಜಾಹೀರಾತು ಫಲಕ 120*120 ಅಡಿ ಇತ್ತು. ಈ ವಿಚಾರ ಬಹಿರಂಗವಾಗುತ್ತಿದ್ದಂತೆ ಆರೋಪಿ ತಲೆಮರೆಸಿಕೊಂಡಿದ್ದ. ಮೇ 12ರ ಸಂಜೆ ಘಾಟ್ಕೋಪರ್ನಲ್ಲಿ ಗಾಳಿ ಮಳೆಗೆ ಬೃಹತ್ ಜಾಹೀರಾತು ಫಲಕ ಕುಸಿದು ಬಿದ್ದಿತ್ತು. ಇದರ ಪರಿಣಾಮ ಮಳೆಯಿಂದಾಗಿ ಪೆಟ್ರೋಲ್ ಬಂಕ್ನಲ್ಲಿ ನಿಂತುಕೊಂಡಿದ್ದ 16 ಮಂದಿ ಸಾವಿಗೀಡಾಗಿದ್ದರು. ಘಟನೆಯಲ್ಲಿ 75 ಮಂದಿ ಗಾಯಗೊಂಡಿದ್ದರು.