ಬೆಂಗಳೂರು: ಪತ್ನಿ ಜೊತೆ ಅನೈತಿಕ ಸಂಬಂಧದ ಅನುಮಾನಕ್ಕೆ ಸ್ನೇಹಿತನನ್ನು ಕೊಲೆ ಮಾಡಿರುವ ಘಟನೆ ವರ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನೆನ್ನೆ ರಾತ್ರಿ 7.30 ರ ಸುಮಾರಿಗೆ ನಡೆದಿದೆ. ಚಿತ್ರದುರ್ಗ ಮೂಲದ ಕಿಶೋರ್ ಮೃತ ವ್ಯಕ್ತಿಯಾಗಿದ್ದು, ಸತೀಶ್ ರೆಡ್ಡಿ ಕೊಲೆ ಮಾಡಿರುವ ಆರೋಪಿಯಾಗಿದ್ದಾನೆ.
ಕೆಜಿಎಫ್ ಮೂಲದ ಸತೀಶ್ ರೆಡ್ಡಿ ಎಂಬಾತ ಕಾರು ಚಾಲಕನಾಗಿದ್ದು, ಪತ್ನಿ ಮೀನಾಳ ಜೊತೆ ನೆಮ್ಮದಿ ಜೀವನ ಸಾಗಿಸುತ್ತಿದ್ದ. ಈ ನಡುವೆ ಎಲೆಕ್ಟ್ರಿಕ್ ಕೆಲಸ ಮಾಡುತ್ತಿದ್ದ ಚಿತ್ರದುರ್ಗ ಮೂಲದ ಕಿಶೋರ್ ಆಕಸ್ಮಿಕವಾಗಿ ಸ್ನೇಹಿತನಾಗಿದ್ದ.
ಆತ್ಮೀಯತೆ ಬೆಳೆದ ಬಳಿಕ ಆಗಾಗ ಕಿಶೋರ್ ವರ್ತೂರಿನ ಬಳಿಯಿದ್ದ ರೆಡ್ಡಿ ಮನೆಗೆ ಬಂದು ಹೋಗುತ್ತಿದ್ದ. ಹೀಗಿರುವಾಗ ಸತೀಶ್ ರೆಡ್ಡಿ ಪತ್ನಿ ಜೊತೆಗೆ ಕಿಶೋರ್ ಸ್ನೇಹ ಬೆಳೆಸಿದ್ದಾನೆ. ಹಾಗೇ ಇಬ್ಬರ ನಡುವೆ ಸಲುಗೆ ಹೆಚ್ಚಾಗಿದೆ.ಇದರಿಂದ ಸಂಶಯ ಪಟ್ಟು ದಂಪತಿ ಮಧ್ಯೆ ಆಗಾಗ ಗಲಾಟೆ ನಡೆಯುತ್ತಿತ್ತು.
ಗೂಗಲ್ ಕ್ರೋಮ್ ಬಳಕೆದಾರರಿಗೆ ಎಚ್ಚರಿಕೆ: ದೊಡ್ಡ ಅಪಾಯ ಕಾದಿದೆ ಎಂದ ಕೇಂದ್ರ ಸರ್ಕಾರ
ಗಲಾಟೆ ಜಾಸ್ತಿ ಆಗುತ್ತಿದ್ದಂತೆ ಮಡದಿ ಗಂಡನನ್ನ ಬಿಟ್ಟು ಮಕ್ಕಳು, ತಾಯಿ ಜೊತೆ ಬಂದು ಬಾಡಿಗೆ ಮನೆ ಮಾಡಿಕೊಂಡಿದ್ದಾಳೆ. ಈ ಮನೆಗೆ ಆಗಾಗ ಕಿಶೋರ್ ಕೂಡ ಬಂದು ಹೋಗುತ್ತಿದ್ದ. ಸತೀಶ್ ರೆಡ್ಡಿ ಪತ್ನಿ ಮನೆ ಮಾಲೀಕರ ಬಳಿ ಕಿಶೋರ್ ನನ್ನ ಸಹೋದರ ಎಂದು ಹೇಳಿ ಪರಿಚಯ ಮಾಡಿಸಿದ್ದಾಳೆ. ಈ ವಿಚಾರ ತಿಳಿದ ಸತೀಶ್ ರೆಡ್ಡಿ ಶುಕ್ರವಾರ ಸಂಜೆ ಮೊದಲೇ ಪ್ಲಾನ್ ಮಾಡಿಕೊಂಡು ಚಾಕುವನ್ನು ತೆಗೆದುಕೊಂಡು ಬಂದು ಮನೆಯ ಹತ್ತಿರ ಬಂದು ಕಾದು ಕುಳಿತಿದ್ದಾನೆ.
ಯಾವಾಗ ಕಿಶೋರ್ ಕಾಣಿಸಿದ್ದಾನೋ ಆಗ ಗಲಾಟೆ ತೆಗೆದು ಹೊಟ್ಟೆಯ ಭಾಗಕ್ಕೆ ಇರಿದಿದ್ದಾನೆ. ಈ ಗಲಾಟೆ ಯಲ್ಲಿ ಇಬ್ಬರು ಕೆಳಗೆ ಬಿದ್ದು ಪರಸ್ಪರ ಹೊಡೆದಾಡಿ ಚಾಕುವಿನಿಂದ ಇರಿದುಕೊಂಡಿದ್ದಾರೆ.
ಗಲಾಟೆ ನೋಡುತ್ತಿದ್ದ ಸ್ಥಳೀಯರು 112 ಗೆ ಕರೆ ಮಾಡಿ ಮಾಹಿತಿ ನೀಡಿದ್ದು ಸ್ಥಳಕ್ಕೆ ಬಂದ ವರ್ತೂರು ಪೊಲೀಸರು ಆರೋಪಿಯನ್ನ ವಶಕ್ಕೆ ಪಡೆದಿದ್ದಾರೆ. ಇನ್ನೂ ರಕ್ತದ ಮಡುವಿನಲ್ಲಿ ಬಿದಿದ್ದ ಕಿಶೋರ್ನನ್ನು ಸತೀಶ್ ರೆಡ್ಡಿ ಪತ್ನಿಯೇ ಸ್ಥಳೀಯರ ನೆರವಿನಿಂದ ಆಸ್ಪತ್ರೆಗೆ ಸೇರಿಸಿದ್ದು, ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾನೆ.