ಧಾರವಾಡ: ಆರ್ಟಿಐ ಕಾರ್ಯಕರ್ತನ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ ಧಾರವಾಡ ತಾಲೂಕಿನ ಯರಿಕೊಪ್ಪ ಗ್ರಾಮ ಪಂಚಾಯ್ತಿ ಪಿಡಿಓ ನಾಗರಾಜ ಗಿಣಿವಾಲದ ಅವರಿಗಾದ ಅನ್ಯಾಯ ಬೇರೆ ಯಾವೊಬ್ಬ ಪಿಡಿಓಗೂ ಆಗಬಾರದು ಹಾಗೂ ಪಿಡಿಓಗಳಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿ ಧಾರವಾಡ ಜಿಲ್ಲಾ ಪಂಚಾಯ್ತಿ ಕಚೇರಿ ಎದುರು ಪಿಡಿಓಗಳು ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದಾರೆ.
ಇಂದು ನಡೆದ ಪಿಡಿಓಗಳ ಪ್ರತಿಭಟನೆಗೆ ಮಾಜಿ ಶಾಸಕ ಅಮೃತ ದೇಸಾಯಿ ಬೆಂಬಲ ಸೂಚಿಸಿದರು. ರಾಜ್ಯದಲ್ಲಿ ಪಿಡಿಓಗಳು ಬಂದ ಮೇಲೆ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಯಾರೋ ಒಬ್ಬ ತಪ್ಪು ಮಾಡಿದರೆ ಅದು ಎಲ್ಲ ಪಿಡಿಓಗಳ ಮೇಲೆ ಬರುವುದು ತರವಲ್ಲ. ಕಾನೂನಿನಲ್ಲಿ ಕೆಲವೊಂದಿಷ್ಟು ತಿದ್ದುಪಡಿಗಳಾಗಬೇಕಿದೆ.
ಈ ಪ್ರತಿಭಟನೆಯನ್ನು ಬೆಳಗಾವಿ ಸುವರ್ಣಸೌಧಕ್ಕೆ ಶಿಫ್ಟ್ ಮಾಡಿದರೆ ನಾನೂ ಬರುತ್ತೇನೆ ಎಂದರು. ಕೆಲವೊಂದಿಷ್ಟು ಆರ್ಟಿಐ ಕಾರ್ಯಕರ್ತರು ವೈಯಕ್ತಿಕವಾಗಿ ಪಿಡಿಓಗಳನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಇದು ಸರಿಯಲ್ಲ. ಯಾವ ಪಿಡಿಓಗಳೂ ದುಡುಕಿನ ನಿರ್ಧಾರ ತೆಗೆದುಕೊಳ್ಳಬಾರದು. ನಿಮ್ಮ ಹಿಂದೆ ಸಂಘಟನೆ ಇದೆ. ನಾವೂ ಇದ್ದೇವೆ ಎಂದು ಧೈರ್ಯ ಹೇಳಿದರು.