ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ 293 ಸ್ಥಾನ ಗೆದ್ದು ಅಧಿಕಾರದ ಭಾಗ್ಯ ಪಡೆದಿರುವ ಬಿಜೆಪಿ ನೇತೃತ್ವದ ಎನ್ಡಿಎ ಕೂಟ ಭಾನುವಾರ ಅಸ್ತಿತ್ವಕ್ಕೆ ಬಂದಿದೆ. ಅಧಿಕಾರ ಹಿಡಿದಿರುವ ನರೇಂದ್ರ ಮೋದಿ ನೇತೃತ್ವದ ಸರ್ಕಾರದಲ್ಲಿ ರಾಜ್ಯದ ಐವರು ಸಂಸದರಿಗೆ ಮಂತ್ರಿ ಭಾಗ್ಯ ದೊರಕಿದೆ. ಲಿಂಗಾಯತರ ಕೋಟಾದಡಿ ಬೊಮ್ಮಾಯಿ ಕೇಂದ್ರ ಸಚಿವರಾಗುವುದು ಖಚಿತವೆಂದು ಹೇಳಲಾಗಿತ್ತು.
ತಮ್ಮ ಅನುಭವ ಬಳಸಿಕೊಳ್ಳುವ ದೃಷ್ಟಿಯಿಂದ ಈ ಸೂಚನೆ ನೀಡುತ್ತಿರುವುದಾಗಿಯೂ ಹೈಕಮಾಂಡ್ ಪ್ರತಿನಿಧಿಗಳು ಆಗ ಹೇಳಿದ್ದರು. ಕಳೆದ 2 – 3 ದಿನಗಳಿಂದಲೂ ಬೊಮ್ಮಾಯಿ ಅವರ ಹೆಸರು ಓಡಾಡುತ್ತಿತ್ತು. ಇದರ ಹೊರತಾಗಿಯೂ ಅವರನ್ನು ಪರಿಗಣಿಸದೆ ಇರುವುದಕ್ಕೆ ಕಾರಣ ಬಹಳ ಇಂಟರೆಸ್ಟಿಂಗ್ ಆಗಿದೆ.
ಬೊಮ್ಮಾಯಿ ಅವರಿಗೆ ಸ್ಥಾನ ನೀಡಿದ್ದರೆ ಅವರಿಗೆ ಕ್ಯಾಬಿನೆಟ್ ದರ್ಜೆ ನೀಡಬೇಕಾಗುತ್ತಿತ್ತು. ಈ ಬಾರಿ ಮಿತ್ರಪಕ್ಷಗಳನ್ನು ಸಂಭಾಳಿಸಬೇಕಿರುವುದರಿಂದ ಬಿಜೆಪಿ ತನ್ನ ಬಳಿಯೇ ಹೆಚ್ಚು ಕ್ಯಾಬಿನೆಟ್ ಸ್ಥಾನ ಇಟ್ಟುಕೊಳ್ಳುವಂತಿಲ್ಲ. ಹಾಗಾಗಿ ಲಿಂಗಾಯತ ಕೋಟಾದಿಂದ ಬೊಮ್ಮಾಯಿ ಬದಲಿಗೆ ವಿ.ಸೋಮಣ್ಣ ಅವರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಸೋಮಣ್ಣ ಅವರಿಗೆ ರಾಜ್ಯ ದರ್ಜೆಯ ಸ್ಥಾನ ನೀಡಲಾಗುತ್ತಿದೆ.
ಈ ಮೂಲಕ ವಿಧಾನಸಭೆ ಚುನಾವಣೆ ಬಳಿಕ ಬೇಸರದಲ್ಲಿದ್ದ ಸೋಮಣ್ಣ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡಂತಾಗಿದೆ. ಜತೆಗೆ ಲಿಂಗಾಯತ ಕೋಟಾವನ್ನೂ ಭರ್ತಿ ಮಾಡಿದಂತಾಗಿದೆ. ಇಂಥದೊಂದು ಮಾನದಂಡದಿಂದಾಗಿ ಬೊಮ್ಮಾಯಿ ಅವರಿಗೆ ಮೋದಿ 3.0 ಸಂಪುಟದ ಮೊದಲ ಕಂತಿನಲ್ಲೇ ಸಚಿವರಾಗುವ ಅವಕಾಶ ಕೂದಲೆಳೆ ಅಂತರದಿಂದ ತಪ್ಪಿದಂತಾಗಿದೆ.
ಲಿಂಗಾಯತರ ಪ್ರಾತಿನಿಧ್ಯದ ವಿಚಾರ ಬಂದಾಗ ಉತ್ತರ ಕರ್ನಾಟಕದ ಕಡೆ ನೋಡುವುದು ಸಾಮಾನ್ಯ. ಅದರಲ್ಲೂ ಮುಂಬಯಿ ಕರ್ನಾಟಕ ಪ್ರಾಂತ್ಯ ಬಿಜೆಪಿಯ ಭದ್ರಕೋಟೆ. ಹಾಗಾಗಿ ಸಹಜ ನ್ಯಾಯದ ರೀತ್ಯ ಲಿಂಗಾಯತರ ಕೋಟಾದಡಿ ಈ ಭಾಗದವರಿಗೆ ಸ್ಥಾನ ನೀಡುವುದು ಸೂಕ್ತವೆಂಬ ಅಭಿಪ್ರಾಯವಿತ್ತು. ಆದರೆ, ಈ ಬಾರಿ ಈ ಲೆಕ್ಕಾಚಾರವನ್ನು ಬದಲಿಸಿದ ಬಿಜೆಪಿ ಹೈಕಮಾಂಡ್ನ ನಡೆ ಅಚ್ಚರಿ ತರಿಸುವಂತಿದೆ.