ಬೆಂಗಳೂರು:- ಇಂದು ಅಮಾವಾಸ್ಯೆಯ ಲಕ್ಷ್ಮಿ ಪೂಜೆ ಮತ್ತು ನಾಳೆಯ ಬಲಿಪಾಡ್ಯಮಿ ಹಿನ್ನೆಲೆಯಲ್ಲಿ ನಗರದ ಪಾಲಿಕೆ ವ್ಯಾಪ್ತಿಯಲ್ಲಿನ ಮೈದಾನಗಳಲ್ಲಿ ಪಟಾಕಿ ಮಳಿಗೆಗಳನ್ನು ತೆರೆಯಲಾಗಿದೆ. 5 ಸಾವಿರ ರೂಪಾಯಿಗಳಷ್ಟು ಡೆಪಾಸಿಟ್ ಇರಿಸಿ ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿಗಳನ್ನು ಪಡೆದು ಅಂಗಡಿಗಳನ್ನು ತೆರೆಯಲಾಗಿದೆ. ಪಾಲಿಕೆ ವ್ಯಾಪ್ತಿಯ 62 ಮೈದಾನಗಳಲ್ಲಿ ತಾತ್ಕಾಲಿಕ ಮಳಿಗೆ ತೆರೆಯಲು ಅವಕಾಶ ನೀಡಲಾಗಿದ್ದು, 263 ಮಳಿಗೆಗಳನ್ನು ತೆರಯಲಾಗಿದೆ. ಕಳೆದ ವರ್ಷ 65 ಮೈದಾನಗಳಲ್ಲಿ 244 ಮಳಿಗೆಗಳನ್ನು ತೆರೆಯಲು ಅವಕಾಶ ನೀಡಲಾಗಿತ್ತು.
ಗಾಂಧಿನಗರದ ಆಟದ ಮೈದಾನದಲ್ಲಿ ಯಾವುದೇ ರೀತಿಯಲ್ಲಿ ಅವಘಡ ಸಂಭವಿಸದಂತೆ ಸಾಕಷ್ಟು ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸರ್ಕಾರದ ನಿಯಮದಂತೆ ಲೈಸೆನ್ಸ್ ಹೋಲ್ಡರ್ ಸ್ಥಳದಲ್ಲಿ ಕಡ್ಡಾಯವಾಗಿ ಇರಬೇಕು ಎನ್ನುವುದನ್ನು ಪಾಲಿಸಲಾಗುತ್ತಿದೆ. ಗ್ರಾಹಕರು ಸಹ ಪಟಾಕಿ ಸಿಡಿಸಬೇಕಾದರೆ ಎಲ್ಲ ರೀತಿಯಲ್ಲಿ ಮುನ್ನೆಚ್ಚರಿಕೆ ವಹಿಸಬೇಕು ಎಂದು ಪಟಾಕಿ ಮಾರಾಟಗಾರರಾದ ವಿ.ಬಿ ಬಾಬು ತಿಳಿಸಿದರು.
ಮೂರು ವರ್ಷದಿಂದ ಎಲ್ಲ ಅಧಿಕೃತ ಪಟಾಕಿ ಮಾರಾಟಗಾರರು ಹಸಿರು ಪಟಾಕಿಗಳನ್ನೇ ಮಾರಾಟ ಮಾಡುತ್ತಿದ್ದಾರೆ. ಗ್ರಾಹಕರು ಸಹ ಹಸಿರು ಪಟಾಕಿಯನ್ನೇ ಕೇಳಿ ಪಡೆಯುತ್ತಿದ್ದಾರೆ. ಸರ್ಕಾರಿ ಅಧಿಕಾರಿಗಳು ಸಹ ಬಂದು ಎಲ್ಲ ಮುನ್ನಚೆರಿಕೆ ಕ್ರಮಗಳನ್ನು ನೋಡಿ ಹೋಗಿದ್ದಾರೆ. ನಾವು ಕೂಡ ಎಲ್ಲ ರೀತಿಯಲ್ಲಿ ನಿಯಮಗಳನ್ನು ಪಾಲನೆ ಮಾಡುತ್ತಿದ್ದೇವೆ ಎಂದು ಪಟಾಕಿ ವ್ಯಾಪಾರಿ ಸೂರ್ಯ ಪ್ರಕಾಶ್ ಹೇಳಿದರು.