ಬೆಂಗಳೂರು:- ಸಿ ಎಂ ಪತ್ನಿ ಮುಡಾದಿಂದ ಅಕ್ರಮವಾಗಿ ಸೈಟ್ ಪಡೆದುಕೊಂಡಿರುವ ವಿಚಾರ ರಾಜ್ಯದಲ್ಲಿ ಭಾರೀ ಸದ್ದು ಮಾಡ್ತಿದೆ. ವಿರೋಧ ಪಕ್ಷಗಳು ಮುಡಾ ವಿಚಾರಕ್ಕೆ ಸದನದ ಒಳಗೆ ಹಾಗು ಹೊರಗೆ ಪ್ರತಿಭಟನೆ ಮಾಡಿದ್ರೂ ಪಾದಯಾತ್ರೆ ಮಾಡಿದ್ರು ಸಿ ಎಂ ಸಿದ್ದರಾಮಯ್ಯ ಕಿಂಚಿತ್ತೂ ಜಗ್ಗಲಿಲ್ಲ. ಆದ್ರೆ ಇದೀಗ ಅಕ್ರಮದ ವಿಚಾರ ಕೋರ್ಟ್ ಮೆಟ್ಟಿಲೇರಿದ್ದು ಸಿ ಎಂ ಗೆ ತಳ ಮಳ ಶುರುವಾಗಿದೆ.
ನ್ಯಾಯಾಲಯ ಸಿಎಂ ವಿರುದ್ಧ ಎಫ್ ಐ ಆರ್ ಗೆ ಅನುಮತಿ ನೀಡೋ ವಿಚಾರಕ್ಕೆ ಏನೇಲ್ಲಾ ವಾದ ಮಂಡನೆ ಆಯ್ತು ಅನ್ನೋದರ ಡಿಟೇಲ್ಸ್ ಇಲ್ಲಿದೆ ನೋಡಿ..
ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮುಡಾ ಪ್ರಕರಣದ ಆರೋಪಕ್ಕೆ ಸಂಬಂಧಿಸಿದಂತೆ ಸ್ನೇಹಮಯಿ ಕೃಷ್ಣ ಎಂಬುವರು ಖಾಸಗಿ ದೂರು ದಾಖಲಿಸುವ ಬಗ್ಗೆ ಜನಪ್ರತಿನಿಧಿಗಳ ವಿಶೇಷ ಕೋರ್ಟ್ನಲ್ಲಿ ನೆನ್ನೆ ಅರ್ಜಿ ಸಲ್ಲಿಸಿದ್ರು. ಇಂದು ಮಧ್ಯಾಹ್ನ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಲಯ ಅರ್ಜಿದಾರ ಪರ ಹಿರಿಯ ವಕೀಲರಾದ ಲಕ್ಷ್ಮೀ ಐಯ್ಯಂಗಾರ್ ರವರ ವಾದ ಆಲಿಸಿದ್ರು.
ಅರ್ಜಿದಾರರ ಪರ ಹಿರಿಯ ವಕೀಲೆ ಲಕ್ಷ್ಮೀ ಐಯ್ಯಂಗಾರ್ ವಾದ ಏನಿತ್ತು ಅನ್ನೋದನ್ನು ನೋಡೋದಾದ್ರೆ, ಸಿದ್ದರಾಮಯ್ಯ ಡಿಸಿಎಂ ಆದಾಗ ಮಾಲೀಕರೇ ಅಲ್ಲದ ವ್ಯಕ್ತಿ ಪರವಾಗಿ ಡಿನೋಟಿಫಿಕೇಷನ್ ಮಾಡಿಸಿದ್ದಾರೆ. ಈ ಜಮೀನಿನಲ್ಲಿ ದೇವನೂರು ಬಡಾವಣೆ ರಚನೆಯಾಗಿದೆ.
2004ರಲ್ಲಿ ಸಿದ್ದರಾಮಯ್ಯ ನವರ ಪತ್ನಿಯ ಸಹೋದರ ಮಲ್ಲಿಕಾರ್ಜುನ್ ದೇವರಾಜು ಎಂಬುವರಿಂದ ಜಮೀನು ಖರೀದಿ ಮಾಡಿದ್ದಾರೆ . ಆಗಲೂ ಸಿದ್ದರಾಮಯ್ಯ ಡಿಸಿಎಂ ಆಗಿದ್ದರು. ಖರೀದಿಗೆ ಹಣದ ಮೂಲದ ಬಗ್ಗೆ ಪ್ರಶ್ನೆಯಿದೆ. ಅಷ್ಟೇ ಅಲ್ಲದೆ ದೇವನೂರು ಬಡಾವಣೆಯಲ್ಲಿ ಈಗಲೂ ಖಾಲಿ ನಿವೇಶನಗಳಿವೆ. ಆದರೆ ದುಬಾರಿ ಬೆಲೆಯ ವಿಜಯನಗರ ಬಡಾವಣೆಯಲ್ಲಿ ಬದಲಿ ನಿವೇಶನ ನೀಡಲಾಗಿದೆ. ಎಂದು ನ್ಯಾಯಾಲಯದ ಗಮನಕ್ಕೆ ತಂದ್ರು..
ಇನ್ನು 2006 ರಿಂದ 2010ರ ನಡುವೆ ಈ ಜಮೀನಿನಲ್ಲಿ ಬಡಾವಣೆ ರಚನೆಯಾಗಿ ಸೈಟುಗಳನ್ನೂ ಹಂಚಲಾಗಿತ್ತು. 2004ಕ್ಕೂ ಮುನ್ನವೇ ಬಡಾವಣೆಯಲ್ಲಿ ಮುಡಾ ಅಭಿವೃದ್ಧಿಪಡಿಸಿತ್ತು, ಆದರೂ ಈ ಜಮೀನನ್ನು ಭೂ ಪರಿವರ್ತನೆ ಮಾಡಲಾಗಿದೆ.2010 ರಲ್ಲಿ ಮುಖ್ಯಮಂತ್ರಿ ಪತ್ನಿ ಸಹೋದರನಿಂದ ದಾನಪತ್ರ ಪಡೆದರು. ನಂತರ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗುವವರೆಗೂ ಸುಮ್ಮನಿದ್ದರು. 2014 ರಲ್ಲಿ ಮುಖ್ಯಮಂತ್ರಿ ಆದಾಗ ಪರಿಹಾರದ ನಿವೇಶನ ಕೇಳಿದ್ರು. ಈ ಜಮೀನು ಮಾರಾಟ ಮಾಡಿದ ದೇವರಾಜು ಜಮೀನು ಮಾಲೀಕರಲ್ಲ. ಅವರಿಂದ ಖರೀದಿಸಿದ ಮಲ್ಲಿಕಾರ್ಜುನ ಸ್ವಾಮಿ ಮಾಲೀಕರಾಗುವುದಿಲ್ಲ. ಹೀಗಾಗಿ ಮುಖ್ಯಮಂತ್ರಿ ಪತ್ನಿ ಪಾರ್ವತಿ ಕೂಡಾ ಮಾಲೀಕರಾಗುವುದಿಲ್ಲ, ಆದರೂ ಜಮೀನಿಗೆ ಬದಲಿ ನಿವೇಶನ ಕೇಳುತ್ತಾರೆ ಎಂದು ದೂರುದಾರರ ಪರ ಹಿರಿಯ ವಕೀಲೆ ಲಕ್ಷ್ಮೀ ಐಯ್ಯಂಗಾರ್ ವಾದ ಮಂಡನೆ ಮಾಡಿದ್ರು.ಕಾನೂನು ಪ್ರಕಾರ ಸಿಎಂ ಪತ್ನಿಗೆ 14 ನಿವೇಶನದ ಹಕ್ಕಿರಲಿಲ್ಲ. ಹಕ್ಕಿದ್ದಿದ್ದರೂ ಗರಿಷ್ಠ ಎರಡು ಸೈಟ್ ಗಳು ಮಾತ್ರ ಪಡೆಯಬಹುದಿತ್ತು. ಆದರೆ 14 ಸೈಟ್ ಪಡೆದಿರುವುದು ಕಾನೂನುಬಾಹಿರ. ಸಿಎಂ ಸಿದ್ದರಾಮಯ್ಯ ಅಧಿಕಾರ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ನ್ಯಾಯಾಲಯಕ್ಕೆ ತಿಳಿಸಿದ್ರು.
ಸದ್ಯ ಅರ್ಜಿದಾರರ ಪರ ವಕೀಲರ ಸಂಪೂರ್ಣ ವಾದವನ್ನು ಆಲಿಸಿದ ನ್ಯಾಯಮೂರ್ತಿ ಗಜಾನನ್ ವಿನಾಯಕ್ ಭಟ್ ಖಾಸಗೀ ದೂರು ದಾಖಲಿಸಲು ಅನುಮತಿ ನೀಡಬಹುದಾ ಇಲ್ವಾ? ಅನ್ನೋ ಆದೇಶವನ್ನು ಆಗಷ್ಟ್ 13 ಕ್ಕೆ ಕಾಯ್ದಿರಿಸಿದ್ದಾರೆ..13ಕ್ಕೆ ಸಿ ಎಂ ವಿರುದ್ಧ ಎಫ್ ಐ ಆರ್ ದಾಖಲು ಮಾಡಲು ಕೋರ್ಟ್ ಅನುಮತಿ ಕೊಡುತ್ತಾ ಇಲ್ಲ ಅರ್ಜಿ ವಜಾ ಮಾಡುತ್ತಾ ಅನ್ನೋದನ್ನು ಕಾದು ನೋಡಬೇಕಿದೆ..