ಮುಂಬೈ: ಬಿಎಂಡಬ್ಲ್ಯೂ ಹಿಟ್ ಅಂಡ್ ರನ್ ಕೇಸ್ನ ಪ್ರಮುಖ ಆರೋಪಿ ಶಿಂಧೆ ಬಣದ ನಾಯಕ ರಾಜೇಶ್ ಶಾ ಅವರ ಪುತ್ರ ಮಿಹಿರ್ ಶಾ 15,000 ರೂ. ಪಾವತಿಸಿ ತಾತ್ಕಾಲಿಕ ಷರತ್ತುಬದ್ಧ ಜಾಮೀನು ಪಡೆದುಕೊಂಡಿರುವುದಾಗಿ ತಿಳಿದುಬಂದಿದೆ. ಆತ ದೇಶ ತೊರೆಯದಂತೆ ಸೂಚನೆ ನೀಡಲಾಗಿದೆ. ಈ ನಡುವೆ ಪ್ರಕರಣದ ಮತ್ತೊಂದು ಸ್ಫೋಟಕ ಮಾಹಿತಿ ಹೊರಬಿದ್ದಿದೆ.
ಸಾವಿರಾರು ರೂ.ಗೆ ಮದ್ಯ ಕುಡಿದಿದ್ದ:
ರಸ್ತೆ ಅಪಘಾತ ಸಂಭವಿಸುವುದಕ್ಕೂ ಮುನ್ನ ಪ್ರಮುಖ ಆರೋಪಿ ಮಿಹಿರ್ ಶಾ ಮದ್ಯ ಕುಡಿದಿದ್ದ ಎಂದು ತಿಳಿದುಬಂದಿದೆ. ಅದಕ್ಕೆ ಪೂರಕ ಸಾಕ್ಷ್ಯವೂ ಲಭ್ಯವಾಗಿದೆ. ಮುಂಬೈನ ಜುಹುದಲ್ಲಿರುವ ಬಾರ್ವೊಂದರಲ್ಲಿ 18,730 ರೂ.ನಷ್ಟು ಬಿಲ್ ಮಾಡಿದ್ದಾನೆ.
ಪೊಲೀಸರಿಗೆ ದೊರೆತ ಪ್ರಾಥಮಿಕ ಮಾಹಿತಿ ಪ್ರಕಾರ, ಮಿಹಿರ್ ಶಾ ಶನಿವಾರ ತಡರಾತ್ರಿವರೆಗೂ ಜುಹುವಿನ ಬಾರ್ನಲ್ಲಿ ಮದ್ಯ ಸೇವಿಸಿದ್ದಾನೆ. ಆತ ಬಾರ್ನಿಂದ ಹೊರಬರುತ್ತಿದ್ದಂತೆ, ಚಾಲಕ ಆತನನ್ನ ಕರೆದೊಯ್ಯುತ್ತಿದ್ದ. ಆದ್ರೆ ಮಾರ್ಗಮಧ್ಯದಲ್ಲಿ ಮಿಹಿರ್ ಶಾ ಹಠ ಹಿಡಿದು ತಾನೇ ಡ್ರೈವಿಂಗ್ ಮಾಡಲು ಮುಂದಾಗಿದ್ದಾನೆ. ಕುಡಿದ ಮತ್ತಿನಲ್ಲಿ ಕಾರು ಚಲಾಯಿಸುತ್ತಿದ್ದ.
ಈ ವೇಳೆ ಅದೇ ಮಾರ್ಗವಾಗಿ ಮೀನು ವ್ಯಾಪಾರಿ ಮಹಿಳೆ ತನ್ನ ಪತಿಯೊಂದಿಗೆ ಬೈಕ್ನಲ್ಲಿ ಬರುತ್ತಿದ್ದರು. ಮಿಹಿರ್ ಶಾ ಬೈಕ್ಗೆ ಗುದ್ದಿದ ರಭಸಕ್ಕೆ ಪತಿ ಕೆಳಗೆ ಬಿದ್ದಿದ್ದಾನೆ. ಮಹಿಳೆ ಕೆಳಗೆ ಬಿದ್ದಾಗ ಕಾರಿನ ಚಕ್ರಕ್ಕೆ ಸಿಕ್ಕಿಕೊಂಡಿದ್ದರೂ, ಆತ ನೋಡದೇ ಎಳೆದೊಯ್ದಿದ್ದಾನೆ. ಪತಿ ಹಿಂದೆಯೇ ಕಾರು ನಿಲ್ಲಿಸುವಂತೆ ಕಾರಿನ ಹಿಂದೆಯೇ ಸ್ವಲ್ಪ ದೂರ ಓಡಿದ್ದಾನೆ. ಇದನ್ನು ಗಮನಿಸಿದ ಸ್ಥಳೀಯರು ಕೂಡಲೇ ಕಾರು ನಿಲ್ಲಿಸಿ ಆಕೆಯನ್ನ ಆಸ್ಪತ್ರೆಗೆ ದಾಖಲಿಸಿದ್ದಾರೂ ಚಿಕಿತ್ಸೆ ನೀಡುವುದಕ್ಕೂ ಮುನ್ನವೇ ಮೃತಪಟ್ಟಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.