ಗದಗ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗದಗ ನಗರದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಭಾಗೀಯ ಕಚೇರಿ ಎದುರಿಗೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಗದಗ ವಿಭಾಗದಿಂದ ಒಂದು ದಿನದ ಉಪವಾಸ ಸತ್ಯಾಗ್ರಹವನ್ನು ನಡೆಸಲಾಯಿತು. ಇದೇ ವೇಳೆ ನಿಗಮದ ಆಡಳಿತದ ವಿರುಧ್ಧ ಧಿಕ್ಕಾರ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
38 ತಿಂಗಳ ಹಿಂದಿನ ವೇತನ ಪರಿಷ್ಕರಣೆ ಬಾಕಿ ಹಣ ಪಾವತಿಸಬೇಕು. ವೇತನ ಪರಿಷ್ಕರಣೆ ಮತ್ತೀತರ ಬೇಡಿಕೆಗಳ ಇತ್ಯರ್ಥ ಮಾಡಬೇಕು ಜೊತೆಗೆ ನಿವೃತ್ತರಾದ ನೌಕರರಿಗೆ ವೇತನ ಪರಿಷ್ಕರಣೆ ಅಳವಡಿಸಿ ಕೂಡಲೇ ನಿವೃತ್ತಿ ಸೌಲಭ್ಯ, ಬಾಕಿ ಹಣ ನೀಡಬೇಕು ಜೊತೆಗೆ ಶಕ್ತಿ ಯೋಜನೆ ಸಂಪೂರ್ಣ ಅನುದಾನ ಕೂಡಲೇ ಸಾರಿಗೆ ನಿಗಮಗಳಿಗೆ ಪಾವತಿಸಬೇಕೆಂದು ಆಗ್ರಹಿಸಿದ್ರು.
ಈ ಸಂದರ್ಭದಲ್ಲಿ NWKRTC ಮಹಾಮಂಡಳ ಅಧ್ಯಕ್ಷ ಬಿ ಎಚ್ ರಾಮೇನಹಳ್ಳಿ, AITUC ಅಧ್ಯಕ್ಷ ಶಾಂತಪ್ಪ ಮುಳವಾಡ, ಪ್ರಧಾನ ಕಾರ್ಯದರ್ಶಿ ಎಸ್ ಕೆ ಅಯ್ಯನಗೌಡ್ರ, ಕಾರ್ಯದರ್ಶಿ ಗೋಪಾಲರಾಯ, ಸಹ ಕಾರ್ಯದರ್ಶಿ ಸಂತೋಷ ಕುಲಕರ್ಣಿ ಸೇರಿದಂತೆ NWKRTC ಜಂಟಿ ಕ್ರಿಯಾ ಸಮಿತಿ ಸದಸ್ಯರು ಹಾಗೂ ಕಾರ್ಮಿಕರು ಪಾಲ್ಗೊಂಡಿದ್ರು.