ಬೆಂಗಳೂರು: ರಾಜ್ಯ ಸರಕಾರಿ ನೌಕರ ಸಮುದಾಯಕ್ಕೆ ಸಿಹಿ ಸುದ್ದಿ ಸಿಕ್ಕಿದ್ದು, ಚುನಾವಣಾ ನೀತಿ ಸಂಹಿತೆಗೆ ತೆರೆ ಬೀಳುತ್ತಿದ್ದಂತೆ 7ನೇ ರಾಜ್ಯ ವೇತನ ಆಯೋಗದ ಶಿಫಾರಸಿನಂತೆ ವೇತನ, ಭತ್ಯೆ ಹಾಗೂ ಸೌಲಭ್ಯಗಳು ಪರಿಷ್ಕರಣೆ ಆಗುವುದು ಖಚಿತವಾಗಿದೆ. ಅಂತಿಮವಾಗಿ ಶೇ.8 ರಿಂದ ಶೇ.8.5 ರಷ್ಟು ವೇತನ ಹೆಚ್ಚಳ ನಿರೀಕ್ಷಿಸಲಾಗಿದ್ದು, ಒಟ್ಟಾರೆ ಏರಿಕೆ ಮೂಲವೇತನದ ಶೇ.25 ರಿಂದ ಶೇ.25.5 ತಲುಪುವ ಸಾಧ್ಯತೆಯಿದೆ.
ಕಳೆದ ಮಾರ್ಚ್ 16 ರಂದು ನೀತಿ ಸಂಹಿತೆ ಘೋಷಣೆಯಾಗುವ ಕೆಲಹೊತ್ತು ಮುನ್ನ ಸಲ್ಲಿಕೆಯಾಗಿದ್ದ 7ನೇ ವೇತನ ಆಯೋಗದ ಶಿಫಾರಸುಗಳನ್ನು ಸ್ವೀಕರಿಸಿದ್ದ ಸಿಎಂ ಸಿದ್ದರಾಮಯ್ಯ ಅವರು, ಕೂಲಂಕಷವಾಗಿ ಅಧ್ಯಯನ ಮಾಡಿ ಸಲಹೆ ನೀಡಲು ಹಣಕಾಸು ಇಲಾಖೆಗೆ ಸೂಚಿಸಿದ್ದರು. ಅಂತೆಯೇ ಆಯೋಗದ ಶೇ.27.5ರಷ್ಟು ಹೆಚ್ಚಳಕ್ಕೆ ಶಿಫಾರಸು ಬದಲಿಗೆ ಶೇ.25 ಏರಿಕೆಯ ಲೆಕ್ಕಾಚಾರಕ್ಕೆ ಬರಲಾಗಿದೆ. ಜೂನ್ ಮೊದಲ ವಾರ ನೀತಿ ಸಂಹಿತೆ ಮುಕ್ತಾಯವಾದ ಬಳಿಕ ಸಂಪುಟ ಸಭೆಯಲ್ಲಿಈ ಸಂಬಂಧ ಅಂತಿಮ ನಿರ್ಣಯ ಪ್ರಕಟಿಸಲಾಗುತ್ತದೆ ಎಂದು ಸರಕಾರದ ಉನ್ನತ ಮೂಲಗಳು ವಿಕಗೆ ತಿಳಿಸಿವೆ.
![Demo](https://ainlivenews.com/wp-content/uploads/2023/12/spoorthi-1.jpg)
ಆಯೋಗದ ಅಂತಿಮ ವರದಿ ನಿರೀಕ್ಷಿಸಿ ಹಿಂದಿನ ಬಸವರಾಜ ಬೊಮ್ಮಾಯಿ ನೇತೃತ್ವದ ಸರಕಾರ ವಿಧಾನಸಭೆ ಚುನಾವಣೆಗೆ ಮುನ್ನ ಶೇ.17ರಷ್ಟು ಮಧ್ಯಂತರ ವೇತನ ಹೆಚ್ಚಳ ಮಾಡಿತ್ತು ಮತ್ತು 2023ರ ಏಪ್ರಿಲ್ 1 ರಿಂದ ಅನ್ವಯವಾಗುವಂತೆ ಈ ಪರಿಷ್ಕರಣೆ ಜಾರಿಗೆ ಬಂದಿತ್ತು. ನೌಕರ ಸಮುದಾಯದ ಸಂಘಟಿತ ಒತ್ತಡದಂತೆ ಸಿಎಂ ಸಿದ್ದರಾಮಯ್ಯ ಅವರೂ 2024 -25ನೇ ಸಾಲಿನ ಬಜೆಟ್ನಲ್ಲಿ7ನೇ ವೇತನ ಆಯೋಗದ ನಿರೀಕ್ಷಿತ ಶಿಫಾರಸುಗಳ ಅನುಷ್ಠಾನಕ್ಕಾಗಿ ಒಟ್ಟಾರೆ 15,431 ಕೋಟಿ ರೂ. ಅನುದಾನ ಮೀಸಲಿಟ್ಟಿದ್ದಾರೆ.
ಪ್ರಮುಖ ಶಿಫಾರಸು
ಕಳೆದ ಮಾರ್ಚ್ 16 ರಂದು ಸಿಎಂ ಸಿದ್ದರಾಮಯ್ಯ ಅವರಿಗೆ ವೇತನ ಆಯೋಗ ತನ್ನ ವರದಿ ಸಲ್ಲಿಸಿತ್ತು. ಇದರಲ್ಲಿಪ್ರಮುಖವಾಗಿ ಶೇ.31ರಷ್ಟು ತುಟ್ಟಿಭತ್ಯೆಯನ್ನು ವಿಲೀನಗೊಳಿಸಿ ಶೇ.27.50 ಫಿಟ್ಮೆಂಟ್ ನೀಡುವ ಮೂಲಕ ಕನಿಷ್ಠ ಮೂಲ ವೇತನವನ್ನು ಸದ್ಯದ 17,000 ರೂ.ಗಳಿಂದ 27,000 ರೂ.ಗೆ ಏರಿಕೆ ಮಾಡಲು ಸಲಹೆ ನೀಡಿತ್ತು. ಗರಿಷ್ಠ ವೇತನವನ್ನು 2,41,200 ರೂ.ಗೆ ನಿಗದಿಪಡಿಸಬೇಕು ಎಂದು ಶಿಫಾರಸು ಮಾಡಲಾಗಿತ್ತು. ಆಯೋಗದ 30 ಪ್ರಮುಖ ಶಿಫಾರಸುಗಳಲ್ಲಿ ನೌಕರರಿಗೆ ಹಲವು ಸೌಲಭ್ಯಗಳ ಹೆಚ್ಚಳವೂ ಸೇರಿದ್ದವು.
ಕೆಲ ತೀರ್ಮಾನ ಸದ್ಯಕ್ಕಿಲ್ಲ
ಕೆಲವು ಇಲಾಖೆ ವೃಂದ, ಶ್ರೇಣಿಯಲ್ಲಿಬದಲಾವಣೆ, 5 ದಿನಗಳ ಕೆಲಸದ ವಾರವನ್ನು ಪರಿಚಯಿಸಬೇಕು ಎಂಬುದು ಸೇರಿದಂತೆ 7ನೇ ವೇತನ ಆಯೋಗದ ಇನ್ನೂ ಕೆಲವು ಶಿಫಾರಸುಗಳ ವಿಚಾರದಲ್ಲಿಸಾಧಕ -ಬಾಧಕಗಳನ್ನು ಪರಿಶೀಲಿಸಿ ಸಲಹೆ ನೀಡಲು ಉನ್ನತ ಮಟ್ಟದ ಸಮಿತಿಯೊಂದನ್ನು ರಚಿಸಲು ಸರಕಾರ ಬಯಸಿದೆ ಎಂದು ಮೂಲಗಳು ತಿಳಿಸಿವೆ.
![](https://ainlivenews.com/wp-content/uploads/2024/01/Ad-Banner-copy-scaled.jpg)