ಕೋಲಾರ:- ಸಮಾಜದ ಎಲ್ಲರಿಗು ಸಮಾನವಾದ ಶಿಕ್ಷಣ ದೊರಕಿದಾಗ ಮಾತ್ರ ಸಂವಿಧಾನದ ಧ್ಯೇಯೋದ್ದೇಶ ಈಡೇರಲು ಸಾಧ್ಯವೆಂದು ನೀಡುವ ಹೃದಯ ಫೌಂಡೇಶನ್ ಸಂಸ್ಥಾಪಕ ಆಂಥೋಣಿ ಸುಜ್ಜಿತ್ ಅವ್ರು ತಿಳಿಸಿದರು.
ಇಂದು ಕೋಲಾರ
ತಾಲೂಕಿನ ಕೋಡಿಕಣ್ಣೂರು ಗ್ರಾಮದ ಮಾತೃಭೂಮಿ ಪ್ರೌಢಶಾಲೆಯಲ್ಲಿ ನಡೆದ ಶಾಲಾ ವಾರ್ಷಿಕೋತ್ಸವ ಹಾಗೂ ನೂತನ ಕಂಪ್ಯೂಟರ್ ಲ್ಯಾಬ್ ಉದ್ಘಾಟಿಸಿ ಮಾತನಾಡಿದ್ರು, ಸರ್ಕಾರಿ-ಖಾಸಗಿ ಶಾಲೆಗಳೆಂಬ ಬೇಧಭಾವವಿಲ್ಲದೆ ಬಡವ-ಶ್ರೀಮಂತ ಎನ್ನುವ ಭೇದ-ಭಾವವಿಲ್ಲದೆ ಎಲ್ಲರಿಗು ಸಮಾನತೆಯ ಶಿಕ್ಷಣ ದೊರಕಬೇಕು ಎಂದು ತಿಳಿಸಿದರು.
ಗ್ರಾಮೀಣ ಪ್ರದೇಶದ ಶಾಲಾ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗಾಗಿ ಸೌಲಭ್ಯಗಳನ್ನು ನೀಡಿರುವುದನ್ನು ಸದ್ಬಳಕೆ ಮಾಡಿಕೊಂಡು ಜೀವನದಲ್ಲಿ ಸಾಧನೆ ಮಾಡಬೇಕು ಎಂದ ಅವರು ನಮ್ಮ ಫೌಂಡೇಶನ್ ವತಿಯಿಂದ ಗ್ರಾಮದ ಶಾಲೆಗಳನ್ನು ದತ್ತು ಪಡೆದುಕೊಂಡು ಬೇಕಾದ ಎಲ್ಲಾ ರೀತಿಯ ಸೌಲಭ್ಯ, ಸಹಕಾರ ನೀಡಲು ಮುಂದಾಗಿದೆವೇ. ಹಂತ ಹಂತವಾಗಿ ಶೈಕ್ಷಣಿಕ ಪ್ರಗತಿಗೆ ನಮ್ಮ ಅಳಿಲು ಸೇವೆ ಮುಂದುವರೆಸಿಕೊಂಡು ಹೋಗುತ್ತೇವೆ ಎಂದು ಹೇಳಿದರು.
ಈಗಿನ ತಂತ್ರಜ್ಞಾನ ಯುಗದಲ್ಲಿ ಗ್ರಾಮೀಣ ಮಕ್ಕಳು ನಗರ ಮಕ್ಕಳಿಗಿಂತ ಬುದ್ಧಿ, ವಿದ್ಯೆಯಲ್ಲಿ ಹಿಂದುಳಿಯಬಾರದೆಂದು ಗಣಕಯಂತ್ರ ಕಲಿಕೆಯನ್ನು ಕಲಿಯಲು 10 ಕಂಪ್ಯೂಟರ್, ಎಲ್.ಇ.ಡಿ ಪರೆದೆ ಹಾಗೂ ಪ್ರೊಜೆಕ್ಟರ್ ಅನ್ನು ನೀಡಲಾಗಿದೆ. ಮಕ್ಕಳು ಉತ್ತಮವಾಗಿ ಕಲಿತು ತಮ್ಮ ಜೀವನವನ್ನು ರೂಪಿಸಿಕೊಳ್ಳ ಬೇಕು ಎಂದು ಹೇಳಿದರು. ಅಲ್ಲದೆ ಕಳೆದ ಶೈಕ್ಷಣಿಕ ವರ್ಷದಲ್ಲಿ ಈ ಶಾಲೆಯ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳು 591 ಅಂಕ ಗಳಿಸಿದ್ದೀರಿ. ಮುಂದಿನ ಫಲಿತಾಂಶದಲ್ಲಿ 592 ಅಂಕ ಪಡೆದ ವಿದ್ಯಾರ್ಥಿಗಳಿಗೆ 1 ಲಕ್ಷ ರೂ. ನೀಡುವ ಜೊತೆಗೆ ಮುಂದಿನ ವಿದ್ಯಾಭ್ಯಾಸಕ್ಕೆ ಬೇಕಾದ ಸೌಕರ್ಯವನ್ನು ಮಾಡಿಕೊಡುತ್ತೇನೆ ಎಂದು ಭರವಸೆ ನೀಡಿದರು.
ದೈಹಿಕ ಶಿಕ್ಷಕ ಡಾ.ಜಿ.ಎಂ.ಶ್ರೀನಿವಾಸ್ ಮಾತನಾಡಿ, ಕಿತ್ತು ತಿನ್ನುವ ಮನಸು, ಹೃದಯಗಳೇ ಹೆಚ್ಚಾಗಿರುವ ಈ ಸಮಾಜದಲ್ಲಿ ನೀಡಿ ಹೃದಯ ಗೆಲ್ಲುವ ಮನಸ್ಸುಗಳು ಹೆಚ್ಚಾಗಬೇಕಾಗಿದೆ. ಪರರ ವಸ್ತುಗಳನ್ನು ಕಿತ್ತು ಜೀವನ ನಡೆಸುವ ಜನರ ನಡುವೆ, ತಮ್ಮ ವಸ್ತುಗಳನ್ನು ಇತರರ ಜೀವನಕ್ಕಾಗಿ ನೀಡುವ ಹೃದಯಗಳು ಇರುವುದರಿಂದಲೇ ಸಮಾಜದಲ್ಲಿ ನಾಗರಿಕತೆ ಉಳಿದುಕೊಂಡಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಮುಖ್ಯೋಪಾಧ್ಯಾಯ ಕಾಳಾಚಾರಿ, ಕೋಡಿಕಣ್ಣೂರು ಗ್ರಾಮದ ಶಾಲೆಯ ಅಭಿವೃದ್ಧಿಗೆ ಗ್ರಾಮದ ಪ್ರತಿಯೊಬ್ಬರು ಸಹಾಯ ಮಾಡಿದ್ದಾರೆ. ಈ ಶಾಲೆ ಹಳೆಯ ವಿದ್ಯಾರ್ಥಿಗಳು, ದಾನಿಗಳು ಕೈಲಾದಷ್ಟು ಸಹಾಯ ಮಾಡಿ ಶಾಲೆಯ ಕೊಠಡಿಗಳನ್ನು ಕಟ್ಟಿಸಿ ಕೊಟ್ಟಿದ್ದಾರೆ. ತಂತ್ರಜ್ಞಾನದಲ್ಲಿ ಮುಂದುವರೆಯುತ್ತಿರುವ ಈ ಕಾಲಘಟ್ಟದಲ್ಲಿ ಕಂಪ್ಯೂಟರ್ ಲ್ಯಾಬನ್ನು ಕೊಡುಗೆಯಾಗಿ ನೀಡಿರುವ ಆಂಥೋಣಿ ಸುಜ್ಜಿತ್ ಅವರಿಗೆ ಧನ್ಯವಾದಗಳನ್ನು ತಿಳಿಸಿದರು.
ಈ ಸಂದರ್ಭದಲ್ಲಿ ನೀಡುವ ಹೃದಯ ಫೌಂಡೇಶನ್ ಸಂಸ್ಥೆಯ ಸಹ ಸಂಸ್ಥಾಪಕಿ ಸವಿತಾ ಆಂಥೋನಿ, ಮೇರಿ, ಗ್ರಾ.ಪಂ ಸದಸ್ಯರಾದ ಶಂಕರಪ್ಪ, ಪಿಳಪ್ಪ, ರೂಪಗಿರಿ, ಕೆ.ಎಂ.ನಾರಾಯಣಸ್ವಾಮಿ, ಶಾಲಾ ಆಡಳಿತ ಮಂಡಳಿ ಕಾರ್ಯದರ್ಶಿ ಕಾಳಿದಾಸ್, ಶಿಕ್ಷಕರು ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.