ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಅವರನ್ನು ಈಗಾಗಲೇ ಸಾಕಷ್ಟು ಮಂದಿ ಭೇಟಿಯಾಗಿ ಬಂದಿದ್ದಾರೆ. ದರ್ಶನ್ ಬದಲಾಗಿದ್ದಾರೆ, ಅವರಿಗೆ ಘಟನೆಯ ಕುರಿತು ಪಶ್ಚತಾಪವಿದೆ ಎಂದು ಹೇಳುತ್ತಿದ್ದಾರೆ. ಆದರೆ ದರ್ಶನ್ ಅವರನ್ನು ಈ ಹಿಂದೆ ಅದೇ ಜೈಲಿನಲ್ಲಿ ನೋಡಿದ್ದ ಅಧಿಕಾರಿಯೊಬ್ಬರ ಹೇಳಿಕೆ ಶಾಕಿಂಗ್ ಆಗಿದೆ. ‘ಈ ಹಿಂದೆಯೂ ಸಹ ದರ್ಶನ್ ತಪ್ಪು ಮಾಡಿ ಜೈಲು ಸೇರಿದ್ದರು, ಆಗ ಪಶ್ಚಾತ್ತಾಪ ಪಡುತ್ತಿರುವುದಾಗಿಯೂ ಹೇಳಿದ್ದರು. ಆದರೆ ಅವರಲ್ಲಿ ವರ್ತನೆಯಲ್ಲಿ, ವ್ಯಕ್ತಿತ್ವದಲ್ಲಿ ಯಾವ ಬದಲಾವಣೆಯೂ ಆಗಿಲ್ಲ’ ಎಂದಿದ್ದಾರೆ.
ದರ್ಶನ್ ಪರಪ್ಪನ ಅಗ್ರಹಾರ ಜೈಲು ಸೇರಿರುವುದು ಇದು ಎರಡನೇ ಬಾರಿ. 2011 ರಲ್ಲಿ ಪತ್ನಿ ವಿಜಯಲಕ್ಷ್ಮಿ ಮೇಲೆ ತೀವ್ರವಾಗಿ ಹಲ್ಲೆ ನಡೆಸಿ ಜೈಲು ಸೇರಿದ್ದ ದರ್ಶನ್ ಒಂದು ತಿಂಗಳ ಬಳಿಕ ಹೊರ ಬಂದಿದ್ದರು. ಆಗ ಜೈಲಧಿಕಾರಿ ಆಗಿದ್ದ ಸತೀಶ್ ಅವರ ಬಳಿ ಮಾತನಾಡಿದ್ದ ದರ್ಶನ್, ‘ಹೆಂಡತಿ ಬಳಿ ಕ್ಷಮೆ ಕೇಳ್ತೀನಿ, ಮತ್ತೆಂದೂ ಹೀಗೆ ಮಾಡುವುದಿಲ್ಲಇನ್ಮುಂದೆ ಇಂತಹ ತಪ್ಪು ಮಾಡಲ್ಲ’ ಎಂದಿದ್ದರಂತೆ. ಆದರೆ ದರ್ಶನ್ ವರ್ತನೆಯಲ್ಲಿ ಯಾವ ಬದಲಾವಣೆಯೂ ಆಗಿಲ್ಲ ಎಂದು ಸತೀಶ್ ಹೇಳಿದ್ದಾರೆ.
ದರ್ಶನ್ ಮನೆ ಊಟ ಬೇಕೆಂದು ಬೇಡಿಕೆ ಇಟ್ಟಿರುವ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ‘ಆ ಸೌಲಭ್ಯವನ್ನು ಕೊಡದೇ ಇರುವುದು ಒಳಿತು, ಆ ಸೌಲಭ್ಯ ಸಿಗುವುದಿಲ್ಲ ಎಂದೇ ನಾನು ಭಾವಿಸಿದ್ದೇನೆ. ಒಂದೊಮ್ಮೆ ದರ್ಶನ್ಗೆ ಆಹಾರ ಕೊಟ್ಟರೆ ಜೈಲಿನಲ್ಲಿರುವ ಎಲ್ಲರೂ ಮನೆ ಊಟವನ್ನೇ ಕೇಳುತ್ತಾರೆ’ ಎಂದಿದ್ದಾರೆ ಅವರು. ಜೈಲಿನಲ್ಲಿ ದರ್ಶನ್ಗೆ ವಿಐಪಿ ಸೌಲಭ್ಯಗಳನ್ನು ನೀಡಲಾಗುತ್ತಿದೆಯೇ? ಎಂಬ ಪ್ರಶ್ನೆಗೆ ‘ಜೈಲಿನಲ್ಲಿ ಯಾವುದೇ ರೀತಿಯ ವಿಐಪಿ ಟ್ರೀಟ್ಮೆಂಟ್ ಯಾರಿಗೂ ಸಿಗುವುದಿಲ್ಲ. ತಪ್ಪು ಮಾಡಿದ್ರೆ ಶಿಕ್ಷೆ ಅನುಭವಿಸಬೇಕು, ನೋವು ಉಣ್ಣಲೇ ಬೇಕು’ ಎಂದಿದ್ದಾರೆ.
ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೂನ್ 11 ರಂದು ಬಂಧನಕ್ಕೆ ಒಳಗಾಗಿದ್ದಾರೆ. ಮೊದಲ 13 ದಿನ ಪೊಲೀಸ್ ಕಸ್ಟಡಿಯಲ್ಲಿದ್ದ ನಟ ದರ್ಶನ್ ಆ ನಂತರ ಪರಪ್ಪನ ಅಗ್ರಹಾರ ಜೈಲಿನಲ್ಲಿ ದಿನ ದೂಡುತ್ತಿದ್ದಾರೆ. ಜೈಲಿನ ವ್ಯವಸ್ಥೆಗೆ ಹೊಂದಿಕೊಳ್ಳಲು ಕಷ್ಟಪಟ್ಟಿರುವ ದರ್ಶನ್ ಆರಂಭದಲ್ಲಿ ಜೈಲೂಟ ಸರಿಹೋಗದೆ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆ ಅನುಭವಿಸಿದ್ದರು, ನಿದ್ರಾಹೀನತೆಯಿಂದ ಬಳಲಿದ್ದರು. ಕೊನೆಗೆ ತಮಗೆ ಮನೆ ಊಟ, ಮನೆಯಿಂದ ಹಾಸಿಗೆ ಹಾಗೂ ಪುಸ್ತಕಗಳನ್ನು ತರಿಸಿಕೊಳ್ಳಲು ಅವಕಾಶ ಕೊಡಿರೆಂದು ರಿಟ್ ಅರ್ಜಿ ಸಲ್ಲಿಸಿದರು. ರಿಟ್ ವಿಚಾರಣೆ ನಡೆಸಿದ ಹೈಕೋರ್ಟ್, ಪ್ರಕರಣವನ್ನು ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ವರ್ಗಾಯಿಸಿದರು. ಅರ್ಜಿ ಸಂಬಂಧ ತೀರ್ಪು ಇಂದು ಮಧ್ಯಾಹ್ನ ಹೊರಬೀಳಲಿದೆ.