ಬೆಂಗಳೂರು:- ಕೋವಿಡ್ ರೂಪಾಂತರ ತಳಿ ಬಗ್ಗೆ ಆತಂಕ ಬೇಡ ಎಂದು ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ಹೇಳಿದ್ದಾರೆ.
ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ಅಗತ್ಯವಿರುವ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಿದೆ. ರಾಜ್ಯದಲ್ಲಿ 22 ಮೆಡಿಕಲ್ ಹಾಗು ಎರಡು ಇಎಸ್ಐ ಮೆಡಿಕಲ್ ಕಾಲೇಜುಗಳಿವೆ. 8-9 ಜಿಲ್ಲೆಗಳನ್ನು ಹೊರತುಪಡಿಸಿದರೆ ಉಳಿದ ಎಲ್ಲಾ ಜಿಲ್ಲೆಗಳಲ್ಲೂ ವೈದ್ಯಕೀಯ ಕಾಲೇಜುಗಳಿದ್ದು, ಅಗತ್ಯ ಮುನ್ನೆಚ್ಚರಿಕೆ ಕೈಗೊಳ್ಳಲಾಗಿದೆ ಎಂದು ತಿಳಿಸಿದರು. ಜಿಲ್ಲೆಗೊಂದು ವೈದ್ಯಕೀಯ ಕಾಲೇಜು ಸ್ಥಾಪನೆ ಪ್ರಸ್ತಾಪವಿದೆ. ಆರ್ಥಿಕ ಸಂಪನ್ಮೂಲಕ್ಕನುಗುಣವಾಗಿ ಜಿಲ್ಲೆಗೊಂದರಂತೆ ಹಂತಹಂತವಾಗಿ ಮೆಡಿಕಲ್ ಕಾಲೇಜು ಪ್ರಾರಂಭಿಸಲಾಗುವುದು ಎಂದು ತಿಳಿಸಿದರು.
ಕಳೆದ 5 ವರ್ಷಗಳಲ್ಲಿ ರಾಜ್ಯದಲ್ಲಿ ನೇಮಕಾತಿ ನಡೆದಿಲ್ಲ. ಪಿಎಸ್ಐ ಸೇರಿದಂತೆ ಕೆಲವು ನೇಮಕಾತಿಗಳು ಅವ್ಯವಹಾರಗಳ ಆರೋಪದಿಂದಾಗಿ ವಿಳಂಬವಾಗಿವೆ. ಸರ್ಕಾರ ಈ ಬಾರಿ ನೇಮಕಾತಿಗೆ ವಿಶೇಷ ಆದ್ಯತೆ ನೀಡಲಿದೆ. ಕಲ್ಯಾಣ ಕರ್ನಾಟಕದಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೂ ಒತ್ತು ನೀಡಲಾಗುವುದು. ನೇಮಕಾತಿಯಲ್ಲಿ ಪಾರದರ್ಶಕತೆ ತರಲಾಗುವುದು ಎಂದರು.
ಯುವ ಸಮುದಾಯಕ್ಕೆ ಹೆಚ್ಚಿನ ಉದ್ಯೋಗ ಒದಗಿಸಲು ಅವರ ಕೌಶಲ್ಯ ವೃದ್ಧಿಸಿಕೊಳ್ಳಲು ಒತ್ತು ನೀಡಲಾಗುತ್ತಿದೆ. ಶಿಕ್ಷಣ ಮುಗಿಸಿದ ಶೇ.15-20 ಜನರಿಗೆ ಮಾತ್ರ ಉದ್ಯೋಗ ಸಿಗುತ್ತಿದೆ. ಈ ಸಂಬಂಧ ಕಂಪನಿಗಳ ಜೊತೆ ಮಾತುಕತೆ ನಡೆಸಿ ಮನವಿ ಸ್ವೀಕರಿಸಿ ಉದ್ಯೋಗಿಗಳ ಅಗತ್ಯವಿರುವ ಕೌಶಲ್ಯವುಳ್ಳ ಮಾನವ ಸಂಘರ್ಷ ಅಭವೃದ್ಧಿಗೆ ಒತ್ತು ನೀಡಲಾಗುತ್ತಿದೆ. ಹುದ್ದೆಗೆ ತಕ್ಕಂತೆ ಕೌಶಲ್ಯವಿರುವ ಮಾನವ ಸಂಪನ್ಮೂಲ ಸಿಗುತ್ತಿಲ್ಲ ಎಂಬುದು ಕಂಪನಿಗಳ ಅಭಿಪ್ರಾಯ ಎಂದು ಹೇಳಿದರು.