ರಂಜಾನ್ ತಿಂಗಳು ಅತಿ ಪವಿತ್ರವಾದ ಮಾಸವಾಗಿದೆ. ಈ ತಿಂಗಳಲ್ಲಿ ಅರ್ಹರಾದ ಪ್ರತಿ ವ್ಯಕ್ತಿಯೂ ಕಡ್ಡಾಯವಾಗಿ ಉಪವಾಸ ಆಚರಿಸಬೇಕು. ಸೂರ್ಯೋದಯಕ್ಕೂ ಸುಮಾರು ಒಂದೂವರೆ ಘಂಟೆಗೂ ಮೊದಲು ಆಹಾರವನ್ನು ಸೇವಿಸಿ ಇಡಿಯ ದಿನ ಏನನ್ನೂ ಸೇವಿಸದೇ ಸರಿಯಾಗಿ ಸೂರ್ಯಾಸ್ತದ ಸಮಯದಲ್ಲಿ ಆಹಾರ ಸೇವಿಸುವ ಮೂಲಕ ಆ ದಿನದ ಉಪವಾಸ ಸಂಪನ್ನಗೊಂಡಂತೆ. ಹೇಗೆ ಒಂದು ತಿಂಗಳಲ್ಲಿ ಇಪ್ಪತ್ತೊಂಭತ್ತು ಅಥವಾ ಮೂವತ್ತು ಉಪವಾಸಗಳನ್ನು ಹಿಡಿಯಬೇಕು.
ವಾಸ್ತವದಲ್ಲಿ ಉಪವಾಸ ಎಂದರೆ ಕೇವಲ ಆಹಾರ ಪಡೆಯದೇ ಇರುವುದೇ ಅಲ್ಲ, ಬದಲಿಗೆ ಮನಸ್ಸನ್ನು ಯಾವುದೇ ನಿಟ್ಟಿನ ಪ್ರಲೋಭನೆಗಳಿಗೆ ಒಳಗಾಗದೇ ಆದಷ್ಟೂ ಮಟ್ಟಿಗೆ ದೇವರ ಧ್ಯಾನ ಪ್ರಾರ್ಥನೆ ಕುರಾನ್ ಪಠಣಗಳಲ್ಲಿ ಸಮಯ ತೊಡಗಿಸಿ ಮನಸ್ಸು ಮತ್ತು ದೇಹವನ್ನು ಶುದ್ದೀಕರಿಸುವುದೇ ಇದರ ಉದ್ದೇಶವಾಗಿದೆ. ಉಪವಾಸದ ಅಷ್ಟೂ ಹೊತ್ತಿನಲ್ಲಿ ಮನಸ್ಸನ್ನು ನಿಗ್ರಹಿಸಿಕೊಳ್ಳುವುದೇ ನಿಜವಾದ ಉಪವಾಸ. ನೆನಪಿಲ್ಲದೇ ಊಟ ಮಾಡಿದರೂ ಉಪವಾಸ ಅಸಿಂಧುವಾಗುವುದಿಲ್ಲ, ಆದರೆ, ನೆನಪಿದ್ದೂ ಒಂದು ತೊಟ್ಟು ನೀರು ಕುಡಿದರೂ ಉಪವಾಸ ಹೋದಂತೆ.
ಐತಿಹಾಸಿಕ ಮತ್ತು ಆಧ್ಯಾತ್ಮಿಕ ಮಹತ್ವ
ಉಪವಾಸ ಪೂರ್ಣಗೊಳಿಸುವಾಗ (ಹೆಚ್ಚಿನ ಸಂದರ್ಭಗಳಲ್ಲಿ ಉಪವಾಸ ತೊರೆಯುವುದು ಎಂದು ಬಳಸಲಾಗುತ್ತದೆ, ಇದು ತಪ್ಪು, ವಾಸ್ತವದಲ್ಲಿ ಉಪವಾಸದ ಅವಧಿ ಮುಗಿಯುವ ಮುನ್ನವೇ ಕಾರಣಾಂತರಗಳಿಂದ ಆಹಾರ ಸೇವಿಸಬೇಕಾಗಿ ಬಂದರೆ ಅದನ್ನು ತೊರೆಯುವುದು ಎನ್ನಬಹುದು) ಮುಸ್ಲಿಮರು ಖರ್ಜೂರವನ್ನು ಸೇವಿಸುತ್ತಾರೆ. ಇದು ಪ್ರವಾದಿ ಮೊಹಮ್ಮದರು ಆಚರಿಸುತ್ತಿದ್ದ ಆಚರಣೆಯಾಗಿದ್ದು ಈ ಮೂಲಕ ಅವರ ಮಾರ್ಗವನ್ನು ಅನುಸರಿಸುವುದು ಧಾರ್ಮಿಕ ಮಹತ್ವದ್ದಾಗಿದೆ.
ಖರ್ಜೂರ ಅತ್ಯಂತ ಪೌಷ್ಟಿಕ ಆಹಾರವಾಗಿದ್ದು ದಿನದ ಉಪವಾಸದಿಂದ ದಣಿದಿದ್ದ ದೇಹಕ್ಕೆ ತಕ್ಷಣವೇ ಶಕ್ತಿಯನ್ನೂ, ಅವಶ್ಯಕ ಪೋಷಕಾಂಶಗಳನ್ನೂ ನೀಡುತ್ತದೆ. ಜೊತೆಗೇ ಜೀರ್ಣಾಂಗಗಳ ಆರೋಗ್ಯವನ್ನೂ ವೃದ್ದಿಸುತ್ತದೆ. ಇದರಲ್ಲಿ ಉರಿಯೂತ ನಿವಾರಕ ಗುಣವೂ ಇರುವ ಕಾರಣ ಉಪವಾಸದ ಬಳಿಕ ಸೇವಿಸಲು ಅತ್ಯುತ್ತಮ ಆಹಾರವಾಗಿದೆ. ಉಪವಾಸ ಸಂಪನ್ನಗೊಳಿಸುವ ಸಮಯವನ್ನು ಇಫ್ತಾರ್ ಎಂದು ಕರೆಯಲಾಗುತ್ತದೆ.
ಖರ್ಜೂರವನ್ನು ಇಫ್ತಾರ್ ಸಮಯದ ಆಹಾರವಾಗಿ ಸೇವಿಸಲು ಆಯ್ದುಕೊಳ್ಳಲು ಇರುವ ಕಾರಣಗಳು
ನೈಸರ್ಗಿಕ ಸಿಹಿಕಾರಕವಾಗಿದೆ
ನಮ್ಮ ದೇಹಕ್ಕೆ ಶಕ್ತಿ ನೀಡುವ ಗ್ಲೂಕೋಸ್ ಖರ್ಜೂರದಲ್ಲಿ ವಿಪುಲವಾಗಿದೆ. ದಿನವಿಡೀ ಉಪವಾಸವಿದ್ದ ದೇಹಕ್ಕೆ ಈ ಶಕ್ತಿ ಅತ್ಯಗತ್ಯವಾಗಿ ಬೇಕಾಗಿರುತ್ತದೆ. ಇದರಲ್ಲಿರುವ ನೈಸರ್ಗಿಕ ಸಕ್ಕರೆಗಳಲ್ಲಿ ಪ್ರಮುಖವಾಗಿ ಗ್ಲೂಕೋಸ್, ಫ್ರುಕ್ಟೋಸ್ ಮತ್ತು ಸುಕ್ರೋಸ್ಗಳಿವೆ. ಇವು ರಕ್ತದಲ್ಲಿ ಶೀಘ್ರವೇ ತಲುಪಿ ದೇಹದ ಎಲ್ಲಾ ಭಾಗಗಳಿಗೆ ರವಾನಿಸಲ್ಪಟ್ಟು ಚೈತನ್ಯವನ್ನು ನೀಡುತ್ತವೆ.
ಪೋಷಕಾಂಶಗಳಿಂದ ಸಮೃದ್ಧವಾಗಿವೆ
ಇದರಲ್ಲಿ ನೈಸರ್ಗಿಕ ಕರಗುವ ನಾರಿನ ಸಹಿತ ಪೊಟ್ಯಾಶಿಯಂ, ಮೆಗ್ನೀಶಿಯಂ ಮತ್ತು ಹಲವಾರು ವಿಟಮಿನ್ನುಗಳಿವೆ. ಈ ಪೋಷಕಾಂಶಗಳು ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತವೆ ಹಾಗೂ ಉಪವಾಸದ ಬಳಿಕ ಬಳಲಿದ್ದ ದೇಹಕ್ಕೆ ಪೋಷಣೆಯನ್ನು ಒದಗಿಸುತ್ತವೆ.
ಆದ್ರತೆಯನ್ನು ನೀಡುತ್ತದೆ
ಖರ್ಜೂರದಲ್ಲಿ ಉತ್ತಮ ಪ್ರಮಾಣದ ನೀರಿನಂಶವಿದೆ. ದಿನವಿಡೀ ನೀರನ್ನೂ ಕುಡಿಯಲು ಸಾಧ್ಯವಿಲ್ಲದ ಕಾರಣ ಉಪವಾಸ ಸಂಪನ್ನಗೊಳಿಸುವ ಸಮಯದಲ್ಲಿ ತಿನ್ನುವ ಖರ್ಜೂರ ದೇಹಕ್ಕೆ ಸಾಕಷ್ಟು ನೀರಿನಂಶವನ್ನು ಒದಗಿಸುತ್ತದೆ. ದೇಹದ ಎಲ್ಲಾ ಕೆಲಸಗಳಿಗೂ ನೀರು ಅಗತ್ಯವಾಗಿದ್ದು ಖರ್ಜೂರದ ಸೇವನೆಯಿಂದ ನಿರ್ಜಲೀಕರಣ ಎದುರಾಗದಂತೆ ತಡೆಯುತ್ತದೆ.
ಸುಲಭವಾಗಿ ಜೀರ್ಣಗೊಳ್ಳುತ್ತದೆ
ಖರ್ಜೂರದಲ್ಲಿರುವ ಸಕ್ಕರೆಗಳು ನಮ್ಮ ಜೀರ್ಣಾಂಗಗಳಲ್ಲಿ ಸುಲಭವಾಗಿ ಜೀರ್ಣಗೊಳ್ಳುತ್ತವೆ ಹಾಗೂ ಈ ಮೂಲಕ ಜೀರ್ಣಾಂಗಗಳ ಮೇಲೆ ಯಾವುದೇ ಹೊರೆಯನ್ನು ಹೇರುವುದಿಲ್ಲ. ಈ ಮೂಲಕ ದಿನದ ಉಪವಾಸದಿಂದ ದಣಿದಿದ್ದ ದೇಹಕ್ಕೆ ಜೀರ್ಣಶಕ್ತಿಗಾಗಿ ಹೆಚ್ಚಿನ ಶಕ್ತಿಯನ್ನು ವ್ಯಯಿಸಬೇಕಾಗಿಲ್ಲ.
ಜೀರ್ಣಾಂಗಗಳ ಆರೋಗ್ಯ ವೃದ್ಧಿಸುತ್ತದೆ
ಇದರಲ್ಲಿ ಉತ್ತಮ ಪ್ರಮಾಣದ ಕರಗುವ ನಾರಿನಂಶವಿದೆ. ಇದು ಜಠರ ಮತ್ತು ಕರುಳುಗಳಲ್ಲಿ ಆಹಾರ ಸುಲಭವಾಗಿ ಚಲಿಸುವಂತೆ ಮಾಡುತ್ತದೆ ಹಾಗೂ ಮಲಬದ್ದತೆಯಾಗದಂತೆ ತಡೆಯುತ್ತದೆ. ತನ್ಮೂಲಕ ಜೀರ್ಣಾಂಗಳ ಆರೋಗ್ಯಕ್ಕೆ ಪೂರಕವಾಗಿದೆ.
ಉರಿಯೂತ ನಿವಾರಕ ಗುಣಗಳಿವೆ
ಇದರಲ್ಲಿರುವ ಆಂಟಿ ಆಕ್ಸಿಡೆಂಟುಗಳು ಮತ್ತು ಉರಿಯೂತ-ನಿವಾರಕ ಗುಣಗಳು ದೇಹದಲ್ಲಿ ಎದುರಾಗಿರುವ ಉರಿಯೂತವನ್ನು ಶಮನಗೊಳಿಸುತ್ತವೆ. ವಿಶೇಷವಾಗಿ ದಿನವಿಡೀ ಉಪವಾಸ ಇದ್ದ ಬಳಿಕ ಜೀರ್ಣಾಂಗಗಳಲ್ಲಿ ಹೆಚ್ಚಾಗಿರುವ ಆಮ್ಲೀಯತೆ ಇದರಿಂದ ಇಲ್ಲವಾಗುತ್ತದೆ.
ಸುಸ್ಥಿರವಾದ ಶಕ್ತಿ
ಇದರಲ್ಲಿರುವ ನೈಸರ್ಗಿಕ ಸಕ್ಕರೆ ಮತ್ತು ಕರಗುವ ನಾರಿನಂಶದ ಸಂಯೋಜನೆ ದೇಹದಲ್ಲಿ ಶಕ್ತಿಯನ್ನು ಅತಿ ವೇಗದಲ್ಲಿ ಬಿಡುಗಡೆ ಮಾಡದೇ ದೇಹಕ್ಕೆ ಅಗತ್ಯವಿರುವಷ್ಟು ಮಾತ್ರವೇ ಗತಿಯಲ್ಲಿ ಬಿಡುಗಡೆ ಮಾಡುತ್ತವೆ. ಇದು ರಕ್ತದಲ್ಲಿ ಸಕ್ಕರೆಯ ಮಟ್ಟ ಧಿಡೀರನೇ ಏರುವುದನ್ನು ತಡೆಯುತ್ತದೆ. ಈ ಮೂಲಕ ದೇಹಕ್ಕೆ ಶಕ್ತಿ ಸುಸ್ಥಿರವಾಗಿ ಲಭಿಸುತ್ತಿರುತ್ತದೆ. ಈ ಶಕ್ತಿ ನಂತರದ ಪ್ರಾರ್ಥನೆಗಳಲ್ಲಿ ಹಾಗೂ ಇತರ ಚಟುವಟಿಕೆಗಳಿಗೆ ಬಳಕೆಯಾಗುತ್ತದೆ.