ನವರಾತ್ರಿಯ ನಾಲ್ಕನೇ ದಿನ ಕೂಷ್ಮಾಂಡ ದೇವಿ ಆರಾಧನೆ ಮಾಡಲಾಗುತ್ತದೆ. ನವದುರ್ಗೆಯರಲ್ಲಿ ಕೂಷ್ಮಾಂಡ ದೇವಿ ನಾಲ್ಕನೆಯವಳು, ಈಕೆ ತನ್ನ ಮಧುರ ನಗುವಿನಿಂದ ಬ್ರಹ್ಮಾಂಡವನ್ನು ರಚಿಸಿದ ಕಾರಣ ಇವಳನ್ನು ಕೂಷ್ಮಾಂಡ ದೇವಿ ಎನ್ನಲಾಗುತ್ತದೆ. ಈ ದೇವಿಯನ್ನು ಪೂಜಿಸುವುದು ಹೇಗೆ, ಯಾವ ಬಗೆಯ ಪೂಜೆಯಿಂದ ಪ್ರಸನ್ನಳಾಗುತ್ತಾಳೆ ಗೊತ್ತಾ?
ಆದಿಶಕ್ತಿಯ ಪ್ರತಿರೂಪ, ಕೂಷ್ಮಾಂಡ ದೇವಿಯ ರೂಪ ವಿಶೇಷವಾಗಿ ಗಮನ ಸೆಳೆಯುತ್ತದೆ, ಇವಳು ಸಿಂಹವಾಹನೆಯಾಗಿದ್ದು, ತೇಜೋಮಯಿಯಾಗಿದ್ದಾಳೆ. ಇವಳಿಗೆ ಎಂಟು ಕೈಗಳು ತನ್ನ ಕೈಗಳಲ್ಲಿ ಕಮಂಡಲ, ಧನಸ್ಸು, ಬಾಣ, ಕಮಲ, ಅಮೃತ ತುಂಬಿದ ಕಲಶ, ಚಕ್ರ, ಗದೆ ಹಿಡಿದಿದ್ದಾಳೆ. ವಿಶೇಷ ಎಂದರೆ ಕೂಷ್ಮಾಂಡ ದೇವಿಯ ಪ್ರಭೆಯ ಕಾಂತಿ ಸೂರ್ಯನಿಗೆ ಸಮಾನವಾಗಿರುತ್ತದೆ.
ನವರಾತ್ರಿಯ ನಾಲ್ಕನೇ ದಿನ ಕೂಷ್ಮಾಂಡ ದೇವಿಯನ್ನು ಪೂಜಿಸಲಾಗುತ್ತದೆ. ಸಂಸ್ಕøತದಲ್ಲಿ ಕುಂಬಳಕಾಯಿಯನ್ನು ಕೂಷ್ಮಾಂಡ ಎನ್ನಲಾಗುತ್ತದೆ. ಈ ದೇವಿಗೆ ಕುಂಬಳಕಾಯಿ ಅತ್ಯಂತ ಪ್ರಿಯ. ಈಕೆಯನ್ನು ಶ್ರದ್ಧೆಯಿಂದ ಪೂಜಿಸಿದರೆ ಕಷ್ಟ ಪರಿಹರಿಸುತ್ತಾಳೆ ಭಕ್ತರ ಅಜ್ಞಾನವನ್ನು ದೂರ ಮಾಡುತ್ತಾಳೆ. ಕೂಷ್ಮಾಂಡ ದೇವಿಯ ಆರಾಧನೆಯ ಪೂಜಾ ಫಲಗಳು ಅತ್ಯಂತ ವಿಶೇಷ. ಕೂಷ್ಮಾಂಡ ದೇವಿ ಆರಾಧನೆಯಿಂದ ರೋಗಗಳಿಂದ ಮುಕ್ತಿ ಪಡೆಯಬಹುದು. ಭಕ್ತರ ದುಃಖ ದೂರ ಮಾಡುತ್ತಾಳೆ. ಆಯಸ್ಸು, ಆರೋಗ್ಯ ವೃದ್ಧಿಯಾಗುತ್ತದೆ. ಜೀವನದಲ್ಲಿ ಯಶಸ್ಸು ಪ್ರಾಪ್ತಿಯಾಗುತ್ತದೆ. ನವರಾತ್ರಿಯ ನಾಲ್ಕನೇ ದಿನ ಸಾಧಕರು ಕೂಷ್ಮಾಂಡ ದೇವಿಯ ಆರಾಧನೆ ಮಾಡುತ್ತಾರೆ. ಈ ದಿನ ಸಾಧಕನ ಮನಸ್ಸು ಅನಾಹತ ಚಕ್ರದಲ್ಲಿ ನೆಲೆನಿಲ್ಲುತ್ತದೆ. ಈ ದೇವಿಯ ಆರಾಧನೆಯಿಂದ ಮನಸ್ಸು ಏಕಾಗ್ರತೆಗೆ ಸಾಧಿಸುತ್ತದೆ.
ಕೂಷ್ಮಾಂಡ ದೇವಿಯ ಕತೆ:
ಸೃಷ್ಟಿಯ ಅಸ್ತಿತ್ವವೇ ಇಲ್ಲದಿರುವಾಗ ಎಲ್ಲೆಡೆ ಅಂಧಕಾರವೇ ಪಸರಿಸಿತ್ತು. ಆಗ ಇದೇ ದೇವಿಯು ತನ್ನ ‘ಈಶತ್’ ಹಾಸ್ಯದಿಂದ ಬ್ರಹ್ಮಾಂಡವನ್ನು ಸೃಷ್ಟಿಸುತ್ತಾಳೆ. ಆದ್ದರಿಂದ ಇವಳೇ ಸೃಷ್ಟಿಯ ಆದಿ- ಸ್ವರೂಪ ಶಕ್ತಿಯಾಗಿದ್ದಾಳೆ. ಈಕೆಯು ಸೂರ್ಯನ ಸ್ಥಾನದಲ್ಲಿ ನಿಲ್ಲು ಕಾರಣದಿಂದಾಗಿ ಭೂಮಿಯ ಮೇಲಿರುವ ಅಂಧಕಾರವನ್ನೆಲ್ಲಾ ನಿವಾರಣೆ ಮಾಡುತ್ತಾಳೆ. ಕೂಷ್ಮಾಂಡ ದೇವಿಯು ಸೂರ್ಯನಿಗೆ ಅಧಿಪತಿಯಾಗಿರುವ ಕಾರಣ ಕೂಷ್ಮಾಂಡ ದೇವಿಯನ್ನು ಪೂಜಿಸುವುದರಿಂದ ಜಾತಕದಲ್ಲಿ ಸೂರ್ಯನಿಂದಾಗುವ ಕೆಡುಕನ್ನು ನಿವಾರಿಸಬಹುದು. ಜೊತೆಗೆ ಎಲ್ಲಾ ರೀತಿಯ ಸಂಕಷ್ಟಗಳೂ ನಿವಾರಣೆಯಾಗುವವು.
ಕೂಷ್ಮಾಂಡ ದೇವಿಯನ್ನು ಅರ್ಚಿಸಲು ಅತೀ ಪವಿತ್ರವಾದ ಹೂವೆಂದರೆ ಕೆಂಪು ಬಣ್ಣದ ಹೂಗಳು. ದೇವಿಯನ್ನು ಅರ್ಚಿಸಿ ನಂತರ ಷೋಡಶೋಪಚಾರ ಪೂಜೆ ಅಂದರೆ 16 ವಿಧದ ಪೂಜೆಯನ್ನು ಮಾಡಿ. ನಿಮ್ಮ ಕುಟುಂಬ ಶ್ರೇಯಸ್ಸಿಗಾಗಿ ಬೇಡಿಕೊಳ್ಳಿ, ಆರತಿಯೊಂದಿಗೆ ಪೂಜೆ ಮುಗಿಸಿ