ಯಾವುದೇ ಖಾದ್ಯದ ವಾಸನೆ ಮತ್ತು ರುಚಿಯನ್ನು ಹೆಚ್ಚಿಸಲು ಕೊತ್ತಂಬರಿ ಸೊಪ್ಪನ್ನು ವ್ಯಾಪಕವಾಗಿ ಬಳಸಲಾಗುತ್ತದೆ. ಕೊತ್ತಂಬರಿಯು ಉತ್ಕರ್ಷಣ ನಿರೋಧಕಗಳು, ಬೀಟಾ ಕ್ಯಾರೋಟಿನ್, ಕೋಲೀನ್, ವಿಟಮಿನ್ ಎ, ಸಿ, ಕೆ, ಕಬ್ಬಿಣ, ಪೊಟ್ಯಾಸಿಯಮ್, ಕ್ಯಾಲ್ಸಿಯಂ, ಮೆಗ್ನೀಸಿಯಮ್ ಮತ್ತು ಫೋಲೇಟ್ನಂತಹ ಅನೇಕ ಅಗತ್ಯ ಗುಣಗಳನ್ನು ಹೊಂದಿದ್ದು,
ಆರೋಗ್ಯಕ್ಕೆ ಉತ್ತಮ ಪ್ರಯೋಜನಗಳನ್ನು ನೀಡುತ್ತದೆ. ಆದರೆ ಇದು ಆಹಾರದ ರುಚಿ ಹೆಚ್ಚಿಸುವುದಲ್ಲದೆ ನಮಗೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ ಎಂದು ತಿಳಿದಿದೆಯೇ? ಕೊತ್ತಂಬರಿ ಸೊಪ್ಪಿನ ನೀರಿ ಸೇವನೆಯಿಂದ ಕೊಲೆಸ್ಟ್ರಾಲ್ ನಿಯಂತ್ರಿಸಬಹುದು. ಕಣ್ಣಿನ ದೃಷ್ಟಿಯನ್ನು ಹೆಚ್ಚಿಸುವಲ್ಲಿ ಇದು ಸಹಾಯಕವಾಗಿದೆ.
ಚರ್ಮರೋಗಕ್ಕೆ ರಾಮಬಾಣ
ಚರ್ಮರೋಗಗಳನ್ನು ನಿವಾರಿಸುವಲ್ಲಿ ಸಿಲಾಂಟ್ರೋ/ ಕೊತ್ತಂಬರಿ ಸಸ್ಯದ ಜ್ಯೂಸ್ ಮಹತ್ವದ ಪಾತ್ರವಹಿಸುತ್ತದೆ. ಪ್ರತಿದಿನ ಇದನ್ನು ಸೇವಿಸುತ್ತಾ ಬಂದರೆ ಚರ್ಮರೋಗಗಳಾದ ಎಸ್ಜಿಮಾ, ಶುಷ್ಕತೆ, ಫಂಗಸ್ ಇನ್ಫೆಕ್ಸನ್(ಶಿಲೀಂಧ್ರ ಸೋಂಕು) ಹಾಗೂ ಉರಿಯೂತಗಳು ಗುಣಮುಖವಾಗುತ್ತವೆ. ಇದರೊಟ್ಟಿಗೆ ತ್ವಚೆಯ ಮೇಲಿರುವ ಕಪ್ಪು ಕಲೆಗಳನ್ನು ಹೋಗಲಾಡಿಸಿ ಹೆಚ್ಚು ಕಾಂತಿಯುತವಾಗಿರುವಂತೆ ಮಾಡುತ್ತದೆ.
ರಕ್ತನಾಳಗಳ ರಕ್ಷಣೆ
ಈ ಸಸ್ಯದಲ್ಲಿ ಹೇರಳವಾಗಿ ಸಾರಭೂತ ತೈಲಾಂಶವನ್ನು ಹೊಂದಿರುತ್ತದೆ. ಈ ತೈಲಗಳು ದೇಹದಲ್ಲಿರುವ ಕೆಟ್ಟ (ಎಲ್ಡಿಎಲ್)ಕೊಲೆಸ್ಟ್ರಾಲ್ಗಳನ್ನು ಕಡಿಮೆಮಾಡಿ ಆರೋಗ್ಯಕರ ಕೊಲೆಸ್ಟ್ರಾಲ್ಗಳ ಪ್ರಮಾಣವನ್ನು ಹೆಚ್ಚಿಸುತ್ತದೆ. ಹೀಗೆ ಮಾಡುವುದರಿಂದ ರಕ್ತನಾಳಗಳಲ್ಲಿ ರಕ್ತದ ಚಲನವಲನಗಳು ಸರಾಗವಾಗುತ್ತವೆ. ಹೃದಯದ ಕಾರ್ಯಚಟುವಟಿಕೆ ಹಾಗೂ ರಕ್ತನಾಳದ ಕಾರ್ಯ ವ್ಯವಸ್ಥೆಯೂ ಆರೋಗ್ಯಕರವಾಗಿರುತ್ತವೆ.
ರಕ್ತಹೀನತೆ
ಕೊತ್ತಂಬರಿ ಸಸ್ಯದಲ್ಲಿ ಕಬ್ಬಿಣಾಂಶ ಹೇರಳವಾಗಿರುವುದರಿಂದ ರಕ್ತದಲ್ಲಿ ಹಿಮಗ್ಲೋಬಿನ್ ಪ್ರಮಾಣವನ್ನು ಹೆಚ್ಚಿಸುತ್ತದೆ. ದೇಹದಲ್ಲಿ ಹಿಮಗ್ಲೋಬಿನ್ ಅಂಶ ಹೆಚ್ಚಾದ ಹಾಗೆ ರಕ್ತಹೀನತೆಯ ಸಮಸ್ಯೆಯು ಕಡಿಮೆಯಾಗುತ್ತದೆ. ಇದರಲ್ಲಿರುವ ಸಂಯುಕ್ತವು ರಕ್ತದಲ್ಲಿ ಆಮ್ಲಜನಕದ ಪ್ರಮಾಣವನ್ನು ಸರಾಗಗೊಳಿಸುತ್ತದೆ. ಜೊತೆಗೆ ರಕ್ತಸಂಚಾರ ಸುಗಮವಾಗಿ ರಕ್ತಹೀನತೆ ದೂರವಾಗುತ್ತದೆ.
ರಕ್ತದೊತ್ತಡದ ನಿವಾರಣೆ
ಸಿಲಾಂಟ್ರೋದಲ್ಲಿ ಮೆಗ್ನೀಸಿಯಮ್, ಕ್ಯಾಲ್ಸಿಯಮ್ ಹಾಗೂ ಪೊಟ್ಯಾಸಿಯಮ್ಗಳಂತಹ ಖನಿಜಗಳನ್ನು ಒಳಗೊಂಡಿದೆ. ಇದರಲ್ಲಿ ಸೋಡಿಯಂ ಪ್ರಮಾಣ ಕಡಿಮೆಯಿರುವುದರಿಂದ ಹೆಚ್ಚಿನ ಪೊಟ್ಯಾಸಿಯಮ್ ಅಂಶವು ದೇಹದ ರಕ್ತದೊತ್ತಡವನ್ನು ಕಡಿಮೆಮಾಡಲು ಪೂರಕವಾಗಿದೆ. ಹಾಗಾಗಿಯೇ ರಕ್ತದೊತ್ತಡವನ್ನು ಎದುರಿಸಲು ಈ ಸಸ್ಯ ಸಹಾಯಮಾಡುತ್ತದೆ.
ಉತ್ಕರ್ಷಣ ನಿರೋಧಕ
ಕೊತ್ತಂಬರಿ ಎಲೆಗಳಲ್ಲಿ ಉತ್ಕರ್ಷಣ ನಿರೋಧಕಗಳ ಶಕ್ತಿಯು ಸಮೃದ್ಧವಾಗಿವೆ. ಇವು ಇತರ ಕಣಗಳನ್ನು ಆಕ್ಸಿಡೀಕರಿಸುವಲ್ಲಿ ಸಹಾಯಮಾಡುತ್ತದೆ. ಇದರಿಂದ ಅನೇಕ ಚಿಕ್ಕ ಪುಟ್ಟ ರೋಗಗಳು ಬರದಂತೆ ತಡೆಯುತ್ತದೆ. ಆಲ್ಝೈಮರ್ನ ನಂತಹ ರೋಗಗಳನ್ನು ತಡೆಯಲು ಆಂಟಿ ಆಕ್ಸಿಡೆಂಟ್ಳು(ಉತ್ಕರ್ಷಣ) ಸಹಾಯವಾಗುತ್ತವೆ ಎನ್ನಲಾಗುತ್ತದೆ.
ಜೀರ್ಣಾಂಗದ ಸಮಸ್ಯೆ
ಗಣನೀಯವಾಗಿ ಕೊತ್ತಂಬರಿ ಸೊಪ್ಪಿನ ರಸವನ್ನು ಸೇವಿಸುತ್ತಾ ಬಂದರೆ ಜೀರ್ಣಾಂಗವ್ಯೂಹದ ಅನೇಕ ಸಮಸ್ಯೆಗಳು ಗುಣಮುಖವಾಗುತ್ತವೆ. ಇದರ ರಸವು ಜೀರ್ಣಕಾರಿ ಕಿಣ್ವಗಳ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಹಾಗಾಗಿ ಜೀರ್ಣಕ್ರಿಯೆಯು ಸುಧಾರಣೆಗೊಳ್ಳುತ್ತದೆ. ಇದು ಅಜೀರ್ಣ ಹಾಗೂ ಉರಿಯೂತದಂತಹ ರೋಗಗಳನ್ನು ತಡೆಯುತ್ತದೆ ಎನ್ನಬಹುದು.
ಮೂಳೆಗಳ ಸಮಸ್ಯೆ
ಈ ಸಸ್ಯದಲ್ಲಿ ಕ್ಯಾಲ್ಸಿಯಂ ಮತ್ತು ಖನಿಜಾಂಶ ಹೆಚ್ಚಾಗಿರುವುದರಿಂದ ಮೂಳೆ ಬೆಳವಣಿಗೆ ಹಾಗೂ ಶಕ್ತಿಯನ್ನು ಹೆಚ್ಚಸಲು ಸಹಾಯಕವಾಗಿದೆ. ಮೂಳೆ ರೋಗವಾದ ಆಸ್ಟಿಯೊಪೊರೋಸಿಸ್ ನಂತಹ ರೋಗವನ್ನು ತಡೆಗಟ್ಟಲು ಸಹಕಾರಿಯಾಗಿದೆ.
ಬಾಯಿಯ ಆರೋಗ್ಯ
ಇದರಲ್ಲಿರುವ ತೈಲದಂಶವು ಬಾಯಿ ಹುಣ್ಣುಗಳ ಉಪಶಮನಕ್ಕೆ ಸಹಾಯ ಮಾಡುತ್ತದೆ. ಕೊತ್ತಂಬರಿ ಸೂಕ್ಷ್ಮ ಜೀವಿಯ ಗುಣಲಕ್ಷಣಗಳನ್ನು ಹೊಂದಿರುವುದರಿಂದ ಬಾಯಿಯನ್ನು ಸ್ವಚ್ಛವಾಗಿರುವಂತೆ ಮಾಡುತ್ತದೆ. ಜೊತೆಗೆ ಬಾಯಿಂದ ಹೊರಸೂಸುವ ದುರ್ವಾಸನೆಯನ್ನು ತಡೆಗಟ್ಟುತ್ತದೆ. ಹಾಗಗಿ ಇದನ್ನು ಬಾಯಿಯ ಫ್ರೆಶ್ನರ್ ಎಂದು ಕರೆಯಬಹುದು.
ಬೊಜ್ಜು ಕರಗಿಸಿ
ಬೆಳಗ್ಗೆ ಆಹಾರ ಸೇವಿಸುವ ಮುನ್ನ ಕೊತ್ತಂಬರಿ ರಸವನ್ನು ಗಣನೀಯವಾಗಿ ಸೇವಿಸುತ್ತಾ ಬಂದರೆ ಚಯಾಪಚಯ ಕ್ರಿಯೆಗೆ ಅನುಕೂಲವಾಗುತ್ತದೆ. ಇದರಿಂದ ದೇಹಕ್ಕೆ ಬೇಡದ ಬೊಜ್ಜಿನಾಂಶ ಕರಗಿಸಿ ದೇಹದ ತೂಕ ಕಡಿಮೆಮಾಡುತ್ತದೆ.
ಹಾರ್ಮೋನ್ಗಳ ಸಮತೋಲನ
ಕೊತ್ತಂಬರಿ ರಸವನ್ನು ಪ್ರತಿದಿನ ಸೇವಿಸಿದರೆ ಋತುಚಕ್ರದ ಸಮಸ್ಯೆಯು ದೂರವಾಗುತ್ತದೆ. ಜೊತೆಗೆ ಇದರಲ್ಲಿರುವ ಆರೋಗ್ಯಕರ ತೈಲಾಂಶವು ಹಾರ್ಮೋನ್ಗಳ ಸಮತೋಲನವನ್ನು ಕಾಪಾಡಲು ಸಹಾಯಮಾಡುತ್ತದೆ.