ಉತ್ತರ ಪ್ರದೇಶ: ಮುಗ್ಧತೆ ಮತ್ತು ದೈವತ್ವವನ್ನು ಹೊರಸೂಸುವ ಸುಂದರ ಕಣ್ಣುಗಳ ‘ಬಾಲಕ ರಾಮ’ ಅಯೋಧ್ಯೆ ರಾಮಮಂದಿರದ ಗರ್ಭಗುಡಿಯಲ್ಲಿ ವಿರಾಜಮಾನನಾಗಿದ್ದಾನೆ. ರಾಮಲಲ್ಲಾ (Ram Lalla) ನೋಡಲು ಲಕ್ಷಾಂತರ ಭಕ್ತರು ಅಯೋಧ್ಯೆಗೆ ಯಾತ್ರೆ ಮಾಡುತ್ತಿದ್ದಾರೆ. ರಾಮಲಲ್ಲಾ ವಿಗ್ರಹದ ಆಕರ್ಷಣೆಯ ಕೇಂದ್ರಬಿಂದು ಸುಂದರ ಕಣ್ಣುಗಳು. ಈ ಕಣ್ಣುಗಳ ಬಗ್ಗೆ ಕುತೂಹಲಕಾರಿ ಅಂಶವೊಂದನ್ನು ದೇವಶಿಲ್ಪಿ ಅರುಣ್ ಯೋಗಿರಾಜ್ ಹಂಚಿಕೊಂಡಿದ್ದಾರೆ.
ಜನಪ್ರಿಯ ಶಿಲ್ಪಿ ಅರುಣ್ ಯೋಗಿರಾಜ್ (Arun Yogiraj), ರಾಮಲಲ್ಲಾ ವಿಗ್ರಹ ಕೆತ್ತನೆಯ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಒಂದು ಮಂಗಳಕರ ಸಮಯದಲ್ಲಿ ಕಣ್ಣುಗಳನ್ನು ಪೂರ್ಣಗೊಳಿಸಲು ಕೇವಲ 20 ನಿಮಿಷ ತೆಗೆದುಕೊಂಡೆ. ಕಣ್ಣು ಕೆತ್ತನೆಗೆ ಚಿನ್ನದ ಉಳಿ ಮತ್ತು ಬೆಳ್ಳಿಯ ಸುತ್ತಿಗೆ ಬಳಸಿದ್ದೇನೆ ಎಂದು ತಿಳಿಸಿದ್ದಾರೆ.
ರಾಮಲಲ್ಲಾ ವಿಗ್ರಹದ ಕಣ್ಣುಗಳನ್ನು ಕೆತ್ತುವ ಮೊದಲು ಸರಯು ನದಿಯಲ್ಲಿ ಸ್ನಾನ ಮಾಡಿದೆ. ಹನುಮಾನ್ ಗರ್ಹಿ ಮತ್ತು ಕನಕ ಭವನದಲ್ಲಿ ಪೂಜೆ ಸಲ್ಲಿಸಿದೆ ಎಂದು ಶಿಲ್ಪಿ ಅರುಣ್ ಯೋಗಿರಾಜ್ ಹೇಳಿಕೊಂಡಿದ್ದಾರೆ. ಕೆತ್ತನೆ ಬಳಿಕ, ‘ಕಣ್ಣುಗಳು ಚೆನ್ನಾಗಿ ಕಾಣುತ್ತಿವೆಯೇ’ ಎಂದು ತಮ್ಮ ಸ್ನೇಹಿತರನ್ನು ಕೇಳುತ್ತಿದ್ದರಂತೆ.
ವಿಗ್ರಹ ಕೆತ್ತನೆಗೂ ಮೊದಲು ಕಲ್ಲನ್ನು ಸೂಕ್ಷ್ಮವಾಗಿ ಗಮನಿಸಲು ಶಿಲ್ಪಿ ಸಾಕಷ್ಟು ಸಮಯ ತೆಗೆದುಕೊಳ್ಳಲು ನಿರ್ಧರಿಸಿದ್ದರಂತೆ. ಬಾಲಕ ರಾಮ ಮೂರ್ತಿ ಮೂಡಿಸುವುದಕ್ಕಾಗಿ, ಮಕ್ಕಳ ಜೊತೆಗೂ ಹೆಚ್ಚು ಸಮಯ ಕಳೆದಿದ್ದಾರೆ. ರಾಮಲಲ್ಲಾ ವಿಗ್ರಹದ ಮುಖ ಕೆತ್ತನೆ ಮಾಡಲು ಬರೋಬ್ಬರಿ 2 ತಿಂಗಳ ಸಮಯ ತೆಗೆದುಕೊಂಡರಂತೆ. ತಮಗೆ ಐಡಿಯಾ ಹೊಳೆದ ತಕ್ಷಣ ಮುಖ ಕೆತ್ತನೆ ಕಾರ್ಯ ಶುರು ಮಾಡಿದ್ದರಂತೆ.