ವಿಜಯನಗರ:- ಜಿಲ್ಲೆಯಲ್ಲಿರುವ ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಕಗ್ಗತ್ತಲಿನ ಆತಂಕ ಶುರುವಾಗಿದೆ. ವಿಶ್ವವಿದ್ಯಾಲಯ ಬರೋಬ್ಬರಿ 1 ಕೋಟಿ 5 ಲಕ್ಷ 74 ಸಾವಿರ ರೂ. ವಿದ್ಯುತ್ ಬಿಲ್ ಬಾಕಿ ಉಳಿಸಿ ಕೊಂಡಿದೆ.
ಹೀಗಾಗಿ ಗುಲ್ಬರ್ಗಾ ವಿದ್ಯುತ್ ಸರಬರಾಜು ಕಂಪನಿ ನಿಯಮಿತ ನೋಟಿಸ್ ನೀಡಿದೆ. ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿದ್ದರಿಂದ, ಜೆಸ್ಕಾಂ ಅಧಿಕಾರಿಗಳು ವಿಶ್ವವಿದ್ಯಾಲಯಕ್ಕೆ ವಿದ್ಯುತ್ ಸರಬರಾಜು ಅನ್ನು ಸ್ಥಗಿತಗೊಳಿಸಿತ್ತು. ಆದರೆ “ನುಡಿ ಹಬ್ಬ” ಇದ್ದ ಕಾರಣ ವಿದ್ಯುತ್ ಸರಬರಾಜು ಮಾಡಿ ಎಂದು ವಿಶ್ವವಿದ್ಯಾಲಯ ಆಡಳಿತ ಮಂಡಳಿ ಜೆಸ್ಕಾಂಗೆ ಮನವಿ ಮಾಡಿಕೊಂಡಿದ್ದರು. ಹೀಗಾಗಿ ಜೆಸ್ಕಾಂ ಮತ್ತೆ ವಿದ್ಯುತ್ ಸರಬರಾಜು ಆರಂಭಿಸಿದೆ.
ಇದೀಗ ಜೆಸ್ಕಾಂ ಬಾಕಿ ಬಿಲ್ ಪಾವತಿಸುವಂತೆ ನೋಟಿಸ್ ಮೇಲೆ ನೋಟಿಸ್ ನೀಡುತ್ತಿದೆ. ಜೆಸ್ಕಾಂ ನೋಟಿಸ್ ನೀಡಿದರು ವಿಶ್ವವಿದ್ಯಾಲಯ ಆಡಳಿತ ಮಂಡಳಿ ಮತ್ತು ಉನ್ನತ ಶಿಕ್ಷಣ ಇಲಾಖೆ ಕ್ಯಾರೆ ಎನ್ನುತ್ತಿಲ್ಲ. ಹೀಗಾಗಿ ಜೆಸ್ಕಾಂ ಮುಂದಿನ ದಿನಗಳಲ್ಲಿ ಮತ್ತೊಮ್ಮೆ ವಿದ್ಯುತ್ ಸರಬಾರಜು ಸ್ಥಗಿತಗೊಳಿಸುವ ಸಾಧ್ಯತೆ ಇದೆ.
ಇನ್ನು ವಿಜಯನಗರ ಜಿಲ್ಲೆ ಉಸ್ತುವಾರಿ ಸಚಿವ ಜಮೀರ್ ಅಹಮ್ಮದ್ ಇತ್ತೀಚಿಗೆ ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಭೇಟಿ ಕೊಟ್ಟಿದ್ದರು. ಈ ವೇಳೆ ತಿಂಗಳೊಳಗೆ ಸಮಸ್ಯೆ ಬಗೆಹರಿಸುವುದಾಗ ಭರವಸೆ ನೀಡಿದೆ. ಆದರೆ ಸಚಿವ ಜಮೀರ್ ಬಂದೋಗಿ 15 ದಿನ ಕಳೆದರು ಬಾಕಿ ಬಿಲ್ ಇನ್ನೂ ಪಾವತಿಯಾಗಿಲ್ಲ. ಹೀಗಾಗಿ ಜೆಸ್ಕಾಂ ನೋಟೀಸ್ ಜಾರಿಮಾಡಿದೆ.
2019 ರಿಂದ ಈವರೆಗೂ ಕನ್ನಡ ವಿವಿಗೆ 1.74 ಕೋಟಿ ರೂ. ಕರೆಂಟ್ ಬಿಲ್ ಬಂದಿದೆ. ಈ ಪೈಕಿ 40 ಲಕ್ಷ ರೂ. ಬಿಲ್ ಮಾತ್ರ ಪಾವತಿಸಲಾಗಿದೆ. 15 ದಿನಗಳ ಹಿಂದಷ್ಟೇ ವಿವಿಯ ವಿದ್ಯುತ್ ಸಂಪರ್ಕ ಬಂದ್ ಮಾಡಲಾಗಿತ್ತು. ಮತ್ತೆ ವಿದ್ಯುತ್ ಸಂಪರ್ಕ ಕಡಿತ ಮಾಡುವ ನೋಟಿಸ್ ಬಂದಿದೆ.