ಸಾಮಾನ್ಯವಾಗಿ ಸೋಮವಾರ, ಮಂಗಳವಾರ, ಗುರುವಾರ, ಶನಿವಾರ ಎಂದರೆ ಮಾಂಸಾಹಾರ ತಿನ್ನುವ ಹಿಂದೂಗಳು ಮಟನ್, ಚಿಕನ್, ಮೀನು ಮೊಟ್ಟೆ ಏನನ್ನೂ ಮುಟ್ಟುವುದಿಲ್ಲ. ಅಷ್ಟೇ ಅಲ್ಲ, ಏಕಾದಶಿ, ಹಬ್ಬ ಹರಿದಿನಗಳು, ಸಂಕಷ್ಟಿ, ಅಂಗಾರಕ ಚತುರ್ಥಿ, ಹುಣ್ಣಿಮೆ ಇತ್ಯಾದಿ ವಿಶೇಷ ದಿನಗಳಲ್ಲಿ ಕೂಡಾ ಮಾಂಸಾಹಾರ(non veg) ಸೇವನೆ ವರ್ಜ್ಯ. ಇದು ಏಕೆ ಎಂದು ಎಂದಾದರೂ ಯೋಚಿಸಿದ್ದೀರಾ?
ಇದರ ಹಿಂದೆ ಧಾರ್ಮಿಕ ಭಾವನೆ ಮಾತ್ರವಲ್ಲ, ನಿಮ್ಮ ಆರೋಗ್ಯದ ಕಾಳಜಿಯೂ ಇದೆ. ಮೊದಲನೆಯದಾಗಿ, ಪ್ರಾಣಿ ಹತ್ಯೆ ಮಾಡುವುದು, ಯಾವುದೇ ಜೀವ ತೆಗೆಯುವುದು ಪಾಪ ಎನ್ನುತ್ತದೆ ಹಿಂದೂ ಧರ್ಮ. ಕನಿಷ್ಠ ಪಕ್ಷ ಕೆಲ ದಿನಗಳಿಗಾದರೂ ಮಿತಿ ಹೇರಿದರೆ ಅದರಿಂದ ಪ್ರಾಣಿ ಹತ್ಯೆ ಕೊಂಚ ಮಟ್ಟಿಗೆ ತಡೆಯಬಹುದು ಎಂಬುದು ಮೊದಲ ಸದುದ್ದೇಶ.
ಆರೋಗ್ಯಕ್ಕಾಗಿ
ಮನುಷ್ಯನಿಗೆ ಮಾಂಸಾಹಾರ ರುಚಿ ಸಿಕ್ಕ ಮೇಲೆ ಅದು ಚಟವಾಗುವ ಸಾಧ್ಯತೆ ಇದೆ. ನಾಲಿಗೆ ಅದನ್ನೇ ಬೇಕು ಎನ್ನುತ್ತದೆ. ಆದರೆ ಅತಿಯಾದ ಮಾಂಸ ಸೇವನೆ ಆರೋಗ್ಯಕ್ಕೆ ಒಳ್ಳೆಯದಲ್ಲ. ಇದರಿಂದ ದೇಹದಲ್ಲಿ ಕೊಬ್ಬು (cholesterol) ಶೇಖರಣೆಯಾಗುತ್ತದೆ. ಕೊಬ್ಬು ಹೆಚ್ಚಾದ ಮೇಲೆ ಆರೋಗ್ಯ ಸಮಸ್ಯೆಗಳು ಒಂದಾದ ಮೇಲೆ ಒಂದರಂತೆ ಕಾಣಿಸಿಕೊಳ್ಳತೊಡಗುತ್ತವೆ. ಹೃದಯದ ಸಮಸ್ಯೆಗಳು ಹೆಚ್ಚುತ್ತವೆ. ಕೋಲನ್ ಕ್ಯಾನ್ಸರ್, ರಕ್ತದೊತ್ತಡ(Blood pressure), ಕಿಡ್ನಿಯಲ್ಲಿ ಕಲ್ಲು, ಮೂಲವ್ಯಾಧಿ ಮುಂತಾದ ಆರೋಗ್ಯ ಸಮಸ್ಯೆಗಳು(Health problems) ಎದುರಾಗುತ್ತವೆ.
ಅಲ್ಲದೆ, ದೇಹಕ್ಕೆ ಬೇಕಾದ ಪೌಷ್ಠಿಕತೆಗಾಗಿ ಕೊಂಚ ಪ್ರಮಾಣದ ಮಾಂಸ ಮಾತ್ರ ಸಾಕಾಗುತ್ತದೆ. ಅತಿಯಾಗಿ ತಿಂದರೆ ನಮ್ಮ ಜೀರ್ಣವ್ಯವಸ್ಥೆಗೂ ವಿಶ್ರಾಂತಿ ಸಿಗದೆ ಅದು ಹಾಳಾಗುತ್ತದೆ. ಇನ್ನು ನಾವೇನು ತಿನ್ನುತ್ತೇವೋ ಅದೇ ಆಗುತ್ತೇವೆ ಎಂಬ ಮಾತೂ ಇದೆ. ನಮ್ಮ ಮಾನಸಿಕ ಆರೋಗ್ಯಕ್ಕಾಗಿಯೂ ಮಾಂಸಾಹಾರದ ಅತಿಯಾದ ಸೇವನೆ ಒಳ್ಳೆಯದಲ್ಲ. ಹಾಗಾಗಿ, ಬಾಯಿ ಮಾತಿನಲ್ಲಿ ತಿನ್ನಬೇಡಿ ಎಂದರೆ ಯಾರೂ ಕೇಳುವುದಿಲ್ಲ. ಅದಕ್ಕೇ, ಸೋಮವಾರ, ಮಂಗಳವಾರ, ಗುರುವಾರ, ಶನಿವಾರ ಕೆಲ ದೇವರಿಗೆ ಮೀಸಲು ಎಂಬೆಲ್ಲ ಧಾರ್ಮಿಕ ಕಟ್ಟುಪಾಡುಗಳನ್ನು ಹೇರಲಾಗಿದೆ.
ಭಾರತದ ಕೆಲವೆಡೆಗಳಲ್ಲಿ ಶುಕ್ರವಾರ ಹಾಗೂ ಬುಧವಾರಕ್ಕೂ ಕೆಲ ದೇವರ ದಿನವೆಂದು ಮಾಂಸಾಹಾರಕ್ಕೆ ನಿಷೇಧವಿದೆ. ಆದರೆ, ಅಲ್ಲಿ ವಾರದ ಬೇರೆ ಕೆಲ ದಿನಗಳನ್ನು ಮಾಂಸಾಹಾರ ಸೇವನೆಗೆ ಬಿಡಲಾಗಿರುತ್ತದೆ. ಒಟ್ಟಿನಲ್ಲಿ ವಾರಕ್ಕೊಮ್ಮೆ ನಾನ್ ವೆಜ್ ಸೇವನೆ ಅಂದರೆ ಆರೋಗ್ಯಕ್ಕೆ ಒಳ್ಳೆಯದೇ. ಅದಕ್ಕಿಂತ ಹೆಚ್ಚಾದರೆ ಒಳ್ಳೆಯದಲ್ಲ ಎಂಬ ಕಾರಣ ಈ ಆಚರಣೆಯ ಹಿಂದಿದೆ. ಆಯಸ್ಸಿನ ವಿಚಾರದಲ್ಲೂ ಸಸ್ಯಾಹಾರಿಗಳು ಮಾಂಸಾಹಾರಿಗಳಿಗಿಂತ 10 ವರ್ಷ ಹೆಚ್ಚು ಬದುಕುತ್ತಾರೆ ಎನ್ನುತ್ತದೆ ಸಂಶೋಧನೆ.