ಬೆಂಗಳೂರು:- ಶೀಘ್ರವೇ ಮುನಿರತ್ನರ ಶಾಸಕ ಸ್ಥಾನ ವಜಾ ಮಾಡಿ ಎಂದು ಸ್ಪೀಕರ್ಗೆ ಕಾನೂನು ಸಚಿವ ಎಚ್ ಕೆ ಪಾಟೀಲ್ ಪತ್ರ ಬರೆದಿದ್ದಾರೆ.
ಈ ಬಗ್ಗೆ ಕಾನೂನು ಸಚಿವ ಎಚ್ಕೆ ಪಾಟೀಲ್ ಅವರು ಸಭಾಧ್ಯಕ್ಷ ಯುಟಿ ಖಾದರ್ ಅವರಿಗೆ ಪತ್ರ ಬರೆದಿದ್ದು, ವಿಧಾನಸಭೆ ಸದಸ್ಯತ್ವದಿಂದ ಕೆ.ಮುನಿರತ್ನ ರವರನ್ನು ಅಮಾನತುಗೊಳಿಸಬೇಕೆಂದು ಆಗ್ರಹಿಸಿದ್ದಾರೆ. ಅಲ್ಲದೇ ನೀತಿ-ನಿರೂಪಣಾ ಸಮಿತಿ ರಚನೆ ಮಾಡಿ, ಯಾವುದೇ ಅಸಭ್ಯ ವರ್ತನೆ ಅಸಂಸದೀಯ ವರ್ತನೆಗೆ ಗಂಭೀರವಾದ ಮತ್ತು ಕಠಿಣ ಕ್ರಮಗಳ ಕುರಿತು ನಿಯಂತ್ರಣ ಮತ್ತು ಕಡಿವಾಣ ಹಾಕಲೇಬೇಕು ಎಂದಿದ್ದಾರೆ.
ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ನೈತಿಕ ಅಧ:ಪತನಕ್ಕೆ ಕಾರಣವಾದ ಅತ್ಯಂತ ಹೇಯವಾದ, ಅಸಭ್ಯವಾದ ಭಾಷೆ ಬಳಸಿ ಕೀಳು ಅಭಿರುಚಿ ಪ್ರದರ್ಶಿಸಿದ ಈ ಘಟನೆ ಕ್ಷಮಾರ್ಹವಲ್ಲ . ವಿಧಾನಸಭೆಯ ಸದಸ್ಯರಿಗೆ ನೈತಿಕ ಮೌಲ್ಯಗಳ ನಿಯಂತ್ರಣ ಹೇರುವ “ನೀತಿ-ನಿರೂಪಣಾ ಸಮಿತಿ”
ಎಂದೆಂದಿಗಿಂತಲೂ ಇಂದು ರಚಿಸಬೇಕಾದ ಅತೀ ಅವಶ್ಯಕತೆ ಇದೆ. ಸದನದ ಒಳಗೆ ಹಾಗೂ ಹೊರಗೆ ಅಸಭ್ಯವಾಗಿ ವರ್ತಿಸುವ ಸದಸ್ಯರ ವರ್ತನೆಯನ್ನು ಮೌಲ್ಯಗಳನ್ನು ಗಾಳಿಗೆ ತೂರುವ ನಡತೆಗಳನ್ನು ನಿಯಂತ್ರಿಸುವ ನಿಯಮಗಳನ್ನು ತಕ್ಷಣ ರಚಿಸಬೇಕು. ಸಂವಿಧಾನದತ್ತವಾಗಿ ಸಭಾಧ್ಯಕ್ಷರಿಗೆ ಪ್ರದತ್ತವಾಗಿರುವ ಪರಾಮಾಧಿಕಾರವನ್ನು ಚಲಾಯಿಸಿ ವಿಶೇಷ ಅಪರೂಪದ ಕ್ರಮ ಕೈಗೊಳ್ಳುವ ಮೂಲಕ ವಿಧಾನಸಭೆ ಸದಸ್ಯರಾದ ಕೆ.ಮುನಿರತ್ನ ಅವರನ್ನು ವಿಧಾನಸಭೆಯಿಂದ ಅಮಾನತುಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.