ಗದಗ: ಆದೇಶಕ್ಕೆ ಪೂರ್ವದಲ್ಲಿಯೇ 144 ಸೆಕ್ಷನ್ ಜಾರಿ ಮಾಡಿದ ಪೊಲೀಸ್ ಇಲಾಖೆ ಸಂಪೂರ್ಣ ಮಾರಾಟವಾಗಿದೆ ಎಂದು ಫಕೀರೇಶ್ವರ ಮಠದ ಉತ್ತರಾಧಿಕಾರಿ ಫಕೀರ ದಿಂಗಾಲೇಶ್ವರ ಶ್ರೀ ಆರೋಪ ಮಾಡಿದರು. ಸ್ಥಳೀಯ ಫಕೀರೇಶ್ವರ ಮಠದಲ್ಲಿ ಸುದ್ದಿಗೋಷ್ಠಿ ಅಯೋಜಿಸಿ ಮಾತನಾಡಿದ ಅವರು, ಮಠದ ಭಕ್ತರನ್ನು ಒಳಗೆ ಬಿಡದೆ ಪೊಲೀಸ್ ಸರ್ಪಗಾವಲು ಇಟ್ಟಿದ್ದು, ಅವರಿಗೆ ರಾತ್ರೋ ರಾತ್ರಿ ನೋಟಿಸ್ ನೀಡಿದ್ದು ನೋವಿನ ಸಂಗತಿ.
ನಮ್ಮ ಇತಿಹಾಸದಲ್ಲಿ ಶಾಂತಿ ಕದಡುವ ಹೋರಾಟ ಮಾಡಿಲ್ಲ. ನಾವು ಹೋರಾಟ ಕೈಗೊಂಡಿದ್ದು ಗದಗದಲ್ಲಿ 144 ಸೆಕ್ಷನ್ ಜಾರಿ ಮಾಡುವುದನ್ನು ಬಿಟ್ಟು ಶಿರಹಟ್ಟಿಯಲ್ಲಿ ಮಾಡಿದ್ದು ಅಕ್ಷಮ್ಯ. ಈ ಮೂಲಕ ಇಲಾಖೆ ಎಲ್ಲರನ್ನೂ ಸಮಾನ ದೃಷ್ಟಿಯಲ್ಲಿ ನೋಡದೆ ಮಲತಾಯಿ ಧೋರಣೆ ಅನುಸರಿದೆ ಎಂದು ಹರಿಹಾಯ್ದರು.
ಭಾವೈಕ್ಯತೆ ಅರ್ಹರಿರುವವರು ಮಾತ್ರ ಆ ಪದ ಬಳಕೆ ಮಾಡಬೇಕೆಂಬುದು ನಮ್ಮ ತಾತ್ವಿಕ ವಿಚಾರ. ಸರ್ಕಾರ ಇದನ್ನು ಅರ್ಥ ಮಾಡಿಕೊಂಡು ಒಂದು ತಜ್ಞರ ಸಮಿತಿ ರಚನೆ ಮಾಡಿ ಎರಡು ಮಠದ ಪರಂಪರೆ ಹಾಗೂ ಶ್ರೀಗಳ ಸಮಗ್ರ ಅಧ್ಯಯನ ಮಾಡಬೇಕಿತ್ತು. ಯಾವುದೋ ಪ್ರಭಾವಕ್ಕೆ ಒಳಗಾಗಿ ಒಂದು ಭವ್ಯ ಮಠದ ಪರಂಪರೆಯನ್ನು ಹಾಳು ಮಾಡಬಾರದು. ಸರ್ಕಾರ ಸತ್ಯಾ ಸತ್ಯಾತೆಯನ್ನು ಪರಾಮರ್ಶಿಸಿ ನಿರ್ಧಾರ ತೆಗೆದುಕೊಳ್ಳಬೇಕೇ ಹೊರತು ಹೋರಾಟ ನಿಲ್ಲಿಸುವ ಸಾಹಸ ಮಾಡಬಾರದು. ಮುಖ್ಯಮಂತ್ರಿಗಳು ಹೋರಾಟದ ಹಿನ್ನೆಲೆಯನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.