ಅವೈಜ್ಞಾನಿಕ, ರೈತರ ಹಿತಾಸಕ್ತಿ ಕಾಪಾಡದ,ಯಾವುದೇ ಮುಂದಾಲೋಚನೆ ಇಲ್ಲದ ಪಟ್ಟಬದ್ಧ ಹಿತಾಸಕ್ತರಿಗಾಗಿ ಕೆಐಎಡಿಬಿ ಯವರು ಮಾಡಿರುವ ರೈತರ ಜಮೀನುಗಳ ಭೂಸ್ವಾಧೀನವನ್ನು ಕೈಬಿಡಬೇಕು ಎಂದು ರೈತರು ಆಗ್ರಹಿಸಿದ್ದಾರೆ..ಕೆಐಎಡಿಬಿ ಭೂಸ್ವಾದೀನ ಪ್ರಕ್ರಿಯೆಗೆ ಸಂಬಂಧಪಟ್ಟಂತೆ ತುಮಕೂರಿನ ವಸಂತನರಸಾಪುರದಲ್ಲಿ ಇಂದು ಕರೆದಿದ್ದ ಸಭೆಯನ್ನ ಬಹಿಷ್ಕರಿಸಿದ ಜಮೀನು ಮಾಲೀಕರು ಹಾಗೂ ರೈತರು,ಇಂದಿನ ಜಿಲ್ಲಾಧಿಕಾರಿಗಳ ಸಭೆಯನ್ನ ಬಹಿಷ್ಕರಿಸಿ,ಮುಂದಿನ ದಿನಗಳಲ್ಲಿ ಸೂಕ್ತ ತೀರ್ಮಾನ ತೆಗೆದುಕೊಳ್ಳುವಂತೆ ಆಗ್ರಹಿಸಿದರು..
ನೂರಾರು ರೈತರ ಮುಖಂಡತ್ವ ವಹಿಸಿದ್ದ ಕಾಮಯ್ಯ ಈ ವೇಳೆ ಮಾತನಾಡಿ,ಈಗಾಗಲೇ ಕೆಐಎಡಿಬಿ ಯವರು ಸಿರಾ ತಾಲೂಕಿನ ಹುಂಜನಾಳು,ಮಲ್ಲೇನಹಳ್ಳಿ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಸುಮಾರು ಎಕರೆ ಜಮೀನುಗಳನ್ನು ಕೈಗಾರಿಕಾ ಪ್ರದೇಶವೆಂದು ಅಧಿಸೂಚನೆಯನ್ನು ಹೊರಡಿಸಿ, ಭೂಸ್ವಾಧೀನ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದಾರೆ.ಕೆಐಎಡಿಬಿ ಯವರು ಕೈಗೊಂಡಿರುವ ಈ ಕ್ರಮವು ಸಂಪೂರ್ಣವಾಗಿ ರೈತರ ವಿರೋಧವಾಗಿದ್ದು,
ಯಾವುದೇ ವೈಜ್ಞಾನಿಕ ಆಧಾರವಿಲ್ಲದಾಗಿದೆ.ಇದರ ಜೊತೆಗೆ ಕೆಲವು ಪ್ರಬಲ ಶಕ್ತಿಗಳ ಓಲೈಕೆಗಾಗಿ ಹಾಗೂ ರಿಯಲ್ ಎಸ್ಟೇಟ್ ದೃಷ್ಟಿಕೋನದಿಂದ ಕೆಐಎಡಿಬಿ ಅಧಿಕಾರಿಗಳು ಮೇಲ್ಕಂಡ ಭೂಸ್ವಾಧೀನ ಪ್ರಕ್ರಿಯೆಯನ್ನು ಹಮ್ಮಿಕೊಂಡಿದ್ದಾರೆ.ಸದರಿ ಪ್ರದೇಶವು ಯಾವುದೇ ದೃಷ್ಟಿ ಕೋನದಿಂದಲೂ ಕೈಗಾರಿಕಾ ಪ್ರದೇಶಕ್ಕೆ ಅನುಗುಣವಾಗಿರುವುದಿಲ್ಲ.ಆದರೆ ಸದರಿ ಜಮೀನುಗಳು ವ್ಯವಸಾಯಕ್ಕೆ ಮಾತ್ರ ಯೋಗ್ಯವಾಗಿದ್ದು,
ಸಾವಿರಾರು ರೈತ ಕುಟುಂಬಗಳ ಜೀವನಾಡಿಯಾಗಿರುತ್ತದೆ.ಜಮೀನುಗಳನ್ನು ನಂಬಿಕೊಂಡಿರುವ ರೈತರ ನಿಲುವನ್ನು ಪರಿಗಣಿಸದೇ ಅಧಿಕಾರಿಗಳು ಏಕಪಕ್ಷೀಯವಾಗಿ ತೆಗೆದುಕೊಂಡಿರುವ ಭೂಸ್ವಾಧೀನ ಆವೈಜ್ಞಾನಿಕವಾಗಿದ್ದು, ರೈತರ ಹಿತಾಸಕ್ತಿಯ ವಿರುದ್ಧದ ತೀರ್ಮಾನವನ್ನ ತಕ್ಷಣವೇ ಕೈಬಿಡಬೇಕು ಎಂದು ಆಗ್ರಹಿಸಿದರು..ಈ ವೇಳೆ ಅನೇಕ ರೈತ ಮುಖಂಡರು ಹಾಜರಿದ್ದರು.