ಬೆಂಗಳೂರು: ಮಹಿಳೆಯೊಬ್ಬರನ್ನು ಭೀಕರವಾಗಿ ಕೊಲೆ ಮಾಡಿ 20ಕ್ಕೂ ಹೆಚ್ಚು ತುಂಡುಗಳನ್ನಾಗಿ ಕತ್ತರಿಸಿ ಫ್ರಿಡ್ಜ್ನಲ್ಲಿಟ್ಟು (Fridge) ಆರೋಪಿ ಎಸ್ಕೇಪ್ ಆಗಿರುವ ಘಟನೆ ಬೆಂಗಳೂರಿನ ವೈಯಾಲಿಕಾವಲ್ನ ವಿನಾಯಕನಗರದಲ್ಲಿ ನಡೆದಿದೆ.
ಮಹಾಲಕ್ಷ್ಮಿ (26) ಕೊಲೆಯಾದ ಮಹಿಳೆ. ವೈಯಾಲಿಕಾವಲ್ನ ಪೈಪ್ಲೈನ್ ರಸ್ತೆಯಲ್ಲಿ ಭೀಕರ ಹತ್ಯೆ ನಡೆದಿದೆ. ಮಹಿಳೆಯನ್ನು ಕೊಂದು ನಂತರ ಮೃತದೇಹವನ್ನು ಪೀಸ್ ಪೀಸ್ ಆಗಿ ಕತ್ತರಿಸಿ ಬಳಿಕ ಫ್ರಿಡ್ಜ್ನಲ್ಲಿಟ್ಟು ಆರೋಪಿ ಪರಾರಿಯಾಗಿದ್ದಾನೆ. ಹತ್ಯೆ ಬಳಿಕ ಮಾಂಸದ ಗುಡ್ಡೆ ಮಾಡಿ ತರಕಾರಿ ಜೋಡಿಸುವಂತೆ ಮೃತದೇಹದ ಭಾಗಗಳನ್ನು ಫ್ರಿಡ್ಜ್ನಲ್ಲಿ ಇರಿಸಿ ಆರೋಪಿ ಎಸ್ಕೇಪ್ ಆಗಿದ್ದಾನೆ. 15 ದಿನಗಳ ಹಿಂದೆ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
2-3 ತಿಂಗಳಿನಿಂದ ಮಹಿಳೆ ಮನೆಯಲ್ಲಿ ಬಾಡಿಗೆಗಿದ್ದರು. ಇಂದು ಸಂಬಂಧಿಕರು ಬೀಗ ಒಡೆದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ವೈಯಾಲಿಕಾವಲ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಮಹಾಲಕ್ಷ್ಮಿ ಬೇರೆ ರಾಜ್ಯದವರಾಗಿದ್ದು, ಕರ್ನಾಟಕದಲ್ಲಿ ನೆಲೆಸಿದ್ದರು. ಗಂಡನಿಂದ ದೂರವಾಗಿದ್ದ ಮಹಾಲಕ್ಷ್ಮಿ ಒಬ್ಬಳೇ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ಆದರೆ ಪಿಕಪ್ ಡ್ರಾಪ್ ಎಂದು ಒಬ್ಬ ಯುವಕ ಆಕೆಯನ್ನು ಕರೆದೊಯ್ಯುತ್ತಿದ್ದ. ಹೀಗಾಗಿ ಆತನೇ ಕೊಲೆ ಮಾಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಘಟನಾ ಸ್ಥಳಕ್ಕೆ ವೈಯಾಲಿಕಾವಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಯ ಪತ್ತೆಗಾಗಿ ತನಿಖೆ ಮುಂದುವರೆದಿದೆ.