ಮಂಗಳೂರು:- ಶಿಕ್ಷಕನಿಂದ ಮಾನಹಾನಿ ಮೆಸೇಜ್ ರವಾನೆ ಹಿನ್ನೆಲೆ ಎಸ್ಡಿಎಂ ಶಾಲೆಯಲ್ಲೇ ವಿದ್ಯಾರ್ಥಿನಿ ಆತ್ಮಹತ್ಯೆ ಯತ್ನಿಸಿ ಬಳಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ ಘಟನೆ ಜರುಗಿದೆ.
ಪ್ರಕರಣ ಸಂಬಂಧ ಚಿತ್ರಕಲಾ ಶಿಕ್ಷಕ ರೂಪೇಶ್ ಪೂಜಾರಿ ವಿರುದ್ಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತನ್ನ ಬಗ್ಗೆ ಮತ್ತೊಬ್ಬ ವಿದ್ಯಾರ್ಥಿನಿಗೆ ಚಿತ್ರಕಲಾ ಶಿಕ್ಷಕ ರೂಪೇಶ್ ಪೂಜಾರಿ ಮಾನಹಾನಿ ಮೆಸೇಜ್ ಮಾಡಿ ವಿಚಾರ ತಿಳಿದ 10ನೇ ತರಗತಿ ವಿದ್ಯಾರ್ಥಿನಿ ತನ್ನ ಪೋಷಕರಿಗೆ ತಿಳಿಸಿದ್ದಳು. ಅದರಂತೆ ಶಾಲೆಗೆ ತೆರಳಿ ವಿಚಾರಿಸಲಾಗಿತ್ತು. ಫೆಬ್ರವರಿ 7 ರಂದು ಎಂದಿನಂತೆ ಶಾಲೆಗೆ ಹೋಗುತ್ತಿದ್ದಾಗ ವಿದ್ಯಾರ್ಥಿನಿ ಬಿಸ್ಕೆಟ್ ಪ್ಯಾಕೇಟ್ ಜೊತೆಗೆ ಇಲಿ ಪಾಷಾಣ ಕೂಡ ಖರೀದಿಸಿ ಕೊಂಡು ಹೋಗಿದ್ದಳು.
ಬಳಿಕ, ಶಾಲೆಯಲ್ಲಿ ಬಿಸ್ಕೇಟ್ಗೆ ಇಲಿ ಪಾಷಾಣ ಲೇಪಿಸಿ ಸೇವನೆ ಮಾಡಿದ್ದಾಳೆ. ಇದರಿಂದ ಆಕೆ ಅಸ್ವಸ್ಥಗೊಂಡಿದ್ದು, ಕೂಡಲೇ ಶಿಕ್ಷಕರು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ಎರಡು ದಿನಗಳ ಹಿಂದೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಕಿಡ್ನಿ, ಲಿವರ್ ನಿಷ್ಕ್ರಿಯಗೊಂಡ ಹಿನ್ನೆಲೆ ಇಂದು ಚಿಕಿತ್ಸೆ ಫಲಿಸದೆ ವಿದ್ಯಾರ್ಥಿನಿ ಮೃತಪಟ್ಟಿದ್ದಾಳೆ.