ರಾಯಚೂರು:- ಟಿಪ್ಪು ಭಾವಚಿತ್ರಕ್ಕೆ ಅಪಮಾನ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯ ಲೋಪದಡಿ ಇಬ್ಬರು ಕಾನ್ಸ್ಟೇಬಲ್ಗಳನ್ನು ಸಸ್ಪೆಂಡ್ ಮಾಡಲಾಗಿದೆ.
ಮಾನ್ವಿ ತಾಲೂಕಿನ ಸಿರವಾರದಲ್ಲಿ ಈ ಘಟನೆ ನಡೆದಿತ್ತು. ಸಿರವಾರ ಠಾಣೆಯ ಕಾನ್ಸ್ಟೇಬಲ್ಗಳಾದ ಇಸ್ಮಾಯಿಲ್ ಹಾಗೂ ರೇವಣಸಿದ್ದ ಅವರು ರಾತ್ರಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಕರ್ತವ್ಯಲೋಪ ಹಿನ್ನಲೆ ಅಮಾನತು ಮಾಡಲಾಗಿದೆ.
ಸಿರವಾರ ಪಟ್ಟಣದ ಮಟನ್ ಮಾರ್ಕೆಟ್ ಬಳಿ ಇರುವ ಟಿಪ್ಪು ಸರ್ಕಲ್ನಲ್ಲಿ ಟಿಪ್ಪು ಸುಲ್ತಾನ್ ಭಾವಚಿತ್ರಕ್ಕೆ ರಾತ್ರೋರಾತ್ರಿ ಕೆಲ ಕಿಡಿಗೇಡಿಗಳು ಚಪ್ಪಲಿ ಹಾರ ಹಾಕಿ ವಿಕೃತಿ ಮೆರೆದಿದ್ದರು. ಇದನ್ನು ನೋಡಿದ ಮುಸ್ಲಿಂ ಮುಖಂಡರು ತೀವ್ರ ಆಕ್ರೋಶ ಹೊರ ಹಾಕಿದ್ದರು. ಕೂಡಲೇ ಕಿಡಿಗೇಡಿಗಳನ್ನು ಬಂಧಿಸುವಂತೆ ಆಗ್ರಹಿಸಿ ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದರು. ಬಳಿಕ ಸಿರವಾರ ಪಟ್ಟಣದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಪ್ರತಿಭಟನಾಕಾರರು ರಸ್ತೆ ಮಧ್ಯದಲ್ಲಿ ಕುಳಿತು ಸಂಚಾರಕ್ಕೆ ಬಂದ್ ಮಾಡಿ, ರಸ್ತೆ ಮಧ್ಯೆ ಟಯರ್ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ಹೊರ ಹಾಕಿದ್ದರು.
ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು, 24 ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸುವ ಭರವಸೆ ಕೊಟ್ಟಿದ್ದರು. ಅದರಂತೆ ಪೊಲೀಸರು ಸ್ಥಳೀಯ ಸಿಸಿ ಟಿವಿ ಫೂಟೇಜ್ಗಳ ಪರಿಶೀಲನೆ ನಡೆಸಿದ್ದರು. ಪ್ರಕರಣದ ಸಂಬಂಧ ಮೂವರು ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸಿರವಾರ ಪಟ್ಟಣದ ನಿವಾಸಿ ಆರೋಪಿ ಆಕಾಶ್ (23) ತಪ್ಪೊಪ್ಪಿಕೊಂಡಿದ್ದಾನೆ. ಬಳಿಕ ಪೊಲೀಸರು ಆಕಾಶ್ನ ಹಿನ್ನೆಲೆ, ಕೃತ್ಯ ಎಸಗಿದ್ದರ ಉದ್ದೇಶದ ಬಗ್ಗೆ ಹೇಳಿಕೆ ದಾಖಲಿಸಿಕೊಂಡಿದ್ದರು. ಇದೀಗ ಕರ್ತವ್ಯಲೋಪದಡಿ ಇಬ್ಬರು ಪೊಲೀಸ್ ಪೇದೆಗಳನ್ನು ಸಸ್ಪೆಂಡ್ ಮಾಡಲಾಗಿದೆ.