ಬೆಂಗಳೂರು: ರೇಣುಕಾ ಸ್ವಾಮಿಯನ್ನು ಕೊಲೆ ಮಾಡಿರುವ ಪ್ರಕರಣದಲ್ಲಿ ನಟ ದರ್ಶನ್ ಹಾಗೂ ಅವರ ಸಹಚಚರರನ್ನು ಬಂಧಿಸಲಾಗಿದೆ. ಈಗಾಗಲೇ ಅವರು ಜೈಲು ಸೇರಿ ಮೂರು ತಿಂಗಳು ಆಗಿದೆ.
ಇಂದಿಗೆ ದರ್ಶನ್ ನ್ಯಾಯಾಂಗ ಬಂಧನದ ಅವಧಿ ಪೂರ್ಣಗೊಳ್ಳುವುದರಲ್ಲಿ ಇತ್ತು. ಹೀಗಾಗಿ, ದರ್ಶನ್ ಹಾಗೂ ಗ್ಯಾಂಗ್ನ ವಿಡಿಯೋ ಕಾನ್ಫರೆನ್ಸ್ ಮೂಲಕ ಕೋರ್ಟ್ ಎದುರು ಹಾಜರುಪಡಿಸಲಾಗಿದೆ. ಅವರ ನ್ಯಾಯಾಂಗ ಬಂಧನ ಅವಧಿ ಸೆಪ್ಟೆಂಬರ್ 30ರವರೆಗೆ ವಿಸ್ತರಣೆ ಆಗಿದೆ.
ದರ್ಶನ್, ಪವಿತ್ರಗೌಡ ಸೇರಿದಂತೆ ಎಲ್ಲಾ ಆರೋಪಿಗಳನ್ನ ಮಂಗಳವಾರ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿತ್ತು. ಈ ವೇಳೆ ತನಿಖಾಧಿಕಾರಿಗಳು ನ್ಯಾಯಾಧೀಶರಿಗೆ ಟೆಕ್ನಿಕಲ್ ಸಾಕ್ಷ್ಯಗಳನ್ನು ಸಲ್ಲಿಸಿದರು. ಹಾರ್ಡ್ ಡಿಸ್ಕ್ನಲ್ಲಿ ಟೆಕ್ನಿಕಲ್ ಎವಿಡೆನ್ಸನ್ನು ನ್ಯಾಯಾಧೀಶರಿಗೆ ಸಲ್ಲಿಕೆ ಮಾಡಿದರು.
ದರ್ಶನ್ಗೆ ಬ್ಯಾಕ್ಪೇನ್ ಇದೆ. ಚೇರ್ ಕೊಡುವಂತೆ ಕೇಳಿದ್ದು, ಚೇರ್ ಕೊಟ್ಟಿಲ್ಲ ಅಂತಾ ದರ್ಶನ್ ಪರ ವಕೀಲರು, ನ್ಯಾಯಾಧೀಶರ ಗಮನಕ್ಕೆ ತಂದರು. ಅಲ್ಲದೇ ಕುಟುಂಬ, ಸ್ನೇಹಿತರ ಭೇಟಿಗೆ ಅವಕಾಶ ಕೊಡುತ್ತಿಲ್ಲ ಎಂದು ಸಹ ದೂರಿದರು. ಭೇಟಿಗೆ ಸಮಯ ಕೊಡಬೇಕು ಎಂದು ನ್ಯಾಯಾಧೀಶರು ಆದೇಶಿಸಿದರು.
ಯಾವ ಆಧಾರದಲ್ಲಿ ಕಾನೂನು ಮಾಡ್ಕೊಂಡ್ರು ಇವರು? ಬೆಳಗಾವಿ ಜೈಲು ನಿಯಮಗಳ ಪ್ರಕಾರ ರೂಲ್ಸ್ ಮಾಡಿಕೊಂಡಿದ್ದಾರೆ. ಕೋರ್ಟ್ ಪರ್ಮಿಷನ್ ಇಲ್ದೆ ಹೇಗೆ ನಿಯಮ ಮಾಡ್ಕೊಂಡ್ರು ಇವ್ರು? ಸ್ನೇಹಿತರು, ಕುಟುಂಬದವರು ಭೇಟಿಯಾಗೋದು ತಪ್ಪಾ? ಯಾರನ್ನೂ ಬಿಡ್ತಿಲ್ಲ ಅವರು. ಯಾವ ಪ್ರೊಸೀಜರ್ ಫಾಲೋ ಮಾಡ್ತಿದ್ದಾರೆ ಅವ್ರು? ದರ್ಶನ್ ಏನು ಕೋಕಾ ಅಪರಾಧಿನಾ? ಅವರು ಕೊಲೆ ಆರೋಪಿ ಅಷ್ಟೆ. ಕುಳಿತುಕೊಳ್ಳೋಕೆ ಒಂದು ಚೇರ್ ಕೊಡಲ್ಲ ಅಂದ್ರೆ ಹೇಗೆ ಎಂದು ದರ್ಶನ್ ಪರ ವಕೀಲರು ವಾದಿಸಿದರು. ಅಗತ್ಯ ವಸ್ತುಗಳನ್ನ ನಿಯಮದಡಿಯಲ್ಲಿ ನೀಡುವಂತೆ ಜಡ್ಜ್, ಬಳ್ಳಾರಿ ಜೈಲಾಧಿಕಾರಿಗೆ ಆದೇಶ ನೀಡಿದರು.