ಗದಗ: ನೆನ್ನೆ ಸುರಿದ ಬಿರುಗಾಳಿ ಸಹಿತ ಭಾರಿ ಮಳೆಯಿಂದಾಗಿ ಗದಗ ತಾಲೂಕಿನ ಲಕ್ಕುಂಡಿ ಗ್ರಾಮದಲ್ಲಿ ಅಪಾರ ಪ್ರಮಾಣದ ಗೋವಿನ ಜೋಳ ಬೆಳೆ ನೆಲಕಚ್ಚಿದೆ. ಲಕ್ಕುಂಡಿ ಗ್ರಾಮದ ರೈತ ಷಣ್ಮುಖಪ್ಪ ಕರಿಯಲ್ಲಪ್ಪನವರಗೆ ಸೇರಿದ 8 ಎಕರೆ ಜಮೀನಿನಲ್ಲಿ ಬೆಳೆದಿದ್ದ ಗೋವಿನಜೋಳ ಸಂಪೂರ್ಣ ಬೆಳೆ ಮಖಾಡೆ ಮಲಗಿದ್ದು ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.
ರೈತ ದಂಪತಿ ಷಣ್ಮುಖಪ್ಪ ಕರಿಯಲ್ಲಪ್ಪನವರ ಹಾಗೂ ಆತನ ಪತ್ನಿ ಲಕ್ಷ್ಮವ್ವ ಲಕ್ಷಾಂತರ ರೂಪಾಯಿ ಸಾಲ ಸೋಲ ಮಾಡಿ ಕೊಳವೆ ಬಾವಿ ಕೊರೆಸಿ, ಹನಿ ನೀರಾವರಿ ಅಳವಡಿಸಿ, ಬೀಜೋಪಚಾರ ಮಾಡಿ, ಗೊಬ್ಬರ ಹಾಕಿ ಗೋವಿನ ಜೋಳ ಬೆಳೆ ಬೆಳೆದಿದ್ರು. ಆದ್ರೆ ವಿಧಿ ಇನ್ನೇನು ರೈತನ ಕೈಗೆ ಬರಬೇಕಿದ್ದ ತುತ್ತನ್ನ ಬಾಯಿಗೆ ಬರದಂತೆ ಮಾಡಿದೆ.
ಇದ್ರಿಂದಾಗಿ ರೈತ ದಂಪತಿ ಆಘಾತಗೊಂಡಿದ್ದಾರೆ. ಷಣ್ಮುಖಪ್ಪ ಪತ್ನಿ ರೈತ ಮಹಿಳೆ ಲಕ್ಷ್ಮವ್ವ ತಾನು ಬೆಳೆದ ಬೆಳೆ ಮುಂದೆ ನಿಂತು ಕಣ್ಣೀರು ಸುರಿಸುತ್ತಿದ್ದಾರೆ. ಸ್ವಂತ ಮಗುವಿನಂತೆ ಆರೈಕೆ ಮಾಡಿ ಬೆಳೆ ಬೆಳೆದಿದ್ವಿ ಇದೀಗ ಬೆಳೆ ನೆಲಕಚ್ಚಿದೆ ಅಂತಾ ಕಣ್ಣೀರು ಹಾಕ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು, ಸರ್ಕಾರ ರೈತ ಕುಟುಂಬದ ನೆರವಿಗೆ ಬರಬೇಕಿದೆ. ರೈತನಿಗೆ ಆದ ನಷ್ಟವನ್ನು ಭರಿಸಿ ರೈತನಿಗೆ ಆಸರೆ ಆಗಬೇಕಿದೆ.