ಮಂಗಳೂರು: ಅಯೋಧ್ಯೆಯಲ್ಲಿ ಶ್ರೀರಾಮ ಚಂದ್ರನ ಪ್ರಾಣ ಪ್ರತಿಷ್ಟೆಗೆ ಕ್ಷಣ ಗಣನೆ ಶುರುವಾಗಿದೆ. ಮಂಗಳೂರಿನ ಕದ್ರಿ ಮಠದ ಪಕ್ಕ ರಾಮ ಧಾರೆ, ಲಕ್ಣಣ ದಾರೆ ಹಾಗೂ ಸೀತಾ ಬಾವಿ ಇರುವ ಐತಿಹಾಸಿಕ ಸ್ಥಳಗಳಿವೆ.
ಕದ್ರಿ ಯೋಗೀಶ್ವರ ಮಠದ ಗುಡ್ಡದ ಬುಡದಲ್ಲಿ ವರ್ಷದ 365 ದಿನವೂ ನಿರಂತರ ಹರಿಯುವ ಶ್ರೀರಾಮನ ಹೆಸರಿನ ನೀರಧಾರೆಯಿದ್ದು, ರಾಮ – ಲಕ್ಷ್ಮಣ ತೀರ್ಥ ಎಂದು ಕರೆಯಲಾಗುತ್ತದೆ.
ನೀರದಾರೆ ಉಗಮದ ಮೇಲೆ ರಾಮ ಲಕ್ಷ್ಮಣ ಹನುಮಂತನ ವಿಗ್ರಹವಿದ್ದು, ನಿತ್ಯ ಪೂಜೆಯೂ ನಡೆಯುತ್ತದೆ. ಬೇಸಿಗೆಯ ವೇಳೆ ನೀರಧಾರೆ ಕೊಂಚ ಸಪುರವಾಗುತ್ತದೆ ವಿನಃ ಇಲ್ಲಿ ನೀರಿನ ಒರತೆ ಬತ್ತಿರುವ ಇತಿಹಾಸವೇ ಇಲ್ಲ.
ಇದೇ ನೀರನ್ನು ಇಲ್ಲಿನವರು ದೈನಂದಿನ ಬಳಕೆಗೆ ಬಳಸುತ್ತಾರೆ. ಪಕ್ಕದಲ್ಲಿಯೇ ಸೀತಾಬಾವಿಯಿದ್ದು, ಸೀತಾಪಹರಣದ ವೇಳೆ ರಾವಣನ ಪುಷ್ಪಕವಿಮಾನದಲ್ಲಿದ್ದ ಸೀತೆಯ ಅಶ್ರುಧಾರೆ ಭೂಮಿಗೆ ಬಿದ್ದು ಈ ಬಾವಿ ಸೃಷ್ಟಿಯಾಗಿದೆ ಎಂಬ ಸ್ಥಳಪುರಾಣವೂ ಪ್ರಚಲಿತದಲ್ಲಿದೆ.