ಹುಬ್ಬಳ್ಳಿ:ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಮನೋವೈಜ್ಞಾನಿಕ ದೃಷ್ಟಿಕೋನದಿಂದ ವಿಜ್ಞಾನ ಪ್ರಶ್ನೆ ಪತ್ರಿಕೆಯು ಅತ್ಯಂತ ಕಠಿಣ ಮಟ್ಟದಲ್ಲಿದೆ. ಗ್ರಾಮೀಣ ವಲಯದ ಶಾಲೆಗಳಷ್ಟೇ ಅಲ್ಲ. ನಗರದ ಶಾಲೆಗಳಲ್ಲಿ ಓದುತ್ತಿರುವ ಶಾಲೆಗಳ ಮಕ್ಕಳು ಕೂಡ ಈ ಪ್ರಶ್ನೆಪತ್ರಿಕೆಯನ್ನು ಬಿಡಿಸಲು ಸಾಧ್ಯವಾಗುತ್ತಿಲ್ಲ. ಇದರ ಪರಿಣಾಮವಾಗಿ ರಾಜ್ಯ ಮಟ್ಟದಲ್ಲಿ ವಿಜ್ಞಾನ ವಿಷಯದಲ್ಲಿ 100 ಕ್ಕೆ 100 ಅಂಕ ಗಳಿಸಲು ವಿದ್ಯಾರ್ಥಿಗಳು ಹರಸಾಹಸಪಡಬೇಕಾಗಿದೆ.
ಅಲ್ಲದೇ ಇದರಿಂದ 10ನೇ ತರಗತಿಯಲ್ಲೇ ಅನುತ್ತೀರ್ಣರಾದ ವಿದ್ಯಾರ್ಥಿಗಳ ಶಿಕ್ಷಣ ಕುಂಠಿತವಾಗುವುದು ನೋವಿನ ಸಂಗತಿಯಾಗಿದೆ. ಇನ್ನುಮೇಲೆ ಏನಾದರೂ ಬದಲಾವಣೆ ಮಾಡುವುದಾದರೆ ಎಸ್.ಎಸ್.ಎಲ್.ಸಿ ಯಂತಹ ‘ಫಲಿತಾಂಶ’ ದ ಹಂತದಲ್ಲಿ ಪ್ರಯೋಗ ಮಾಡುವುದರ ಬದಲು ಪೂರ್ವ ಸಿದ್ಧತೆಯಾಗಿ 6 ರಿಂದ 8ನೇ ತರಗತಿಗಳಿಂದ ಇಂತಹ ಉನ್ನತ ಉದ್ದೇಶದ ಹಂತಗಳನ್ನು ಅಳವಡಿಸುವುದು ಸೂಕ್ತ. ಕೂಡಲೇ ಮಂಡಳಿಯು ಎಚ್ಚೆತ್ತುಕೊಂಡು ವಿಜ್ಞಾನ ಪ್ರಶ್ನೆಪತ್ರಿಕೆಯನ್ನು ಸರಳೀಕರಣಗೊಳಸಲು ಕ್ರಮ ಕೈಗೊಳ್ಳಿ” ಎಂದು ಪಶ್ಚಿಮಪದವೀಧರ ಕ್ಷೇತ್ರದ ವಿಧಾನ ಪರಿಷತ್ತು ಸದಸ್ಯರಾದ ಪ್ರೊ.ಎಸ್.ವಿ.ಸಂಕನೂರ ಅವರು ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯಾಂಕನ ಮಂಡಳಿ ನಿರ್ದೇಶಕರಾದ ಗೋಪಾಲಕೃಷ್ಣ ಅವರಲ್ಲಿ ಒತ್ತಾಯ ಮಾಡಿದರು.
Stop Eating Rice: ಒಂದು ತಿಂಗಳು ಅನ್ನ ಸೇವಿಸದಿದ್ದರೆ ದೇಹದಲ್ಲಾಗುವ ಬದಲಾವಣೆ ಏನು ಗೊತ್ತಾ..?
ಕಶಾಪಮಮೌ ಮಂಡಳಿಯಲ್ಲಿ ಅಖಿಲ ಕರ್ನಾಟಕ ಪ್ರೌಢಶಾಲಾ ವಿಜ್ಞಾನ ಶಿಕ್ಷಕರ ವೇದಿಕೆಯೊಂದಿಗೆ ವಿಧಾನ ಪರಿಷತ್ತು ಸದಸ್ಯರಾದ ಪ್ರೊ.ಎಸ್.ವಿ.ಸಂಕನೂರ ಅವರ ನೇತೃತ್ವದಲ್ಲಿ ನಿರ್ದೇಶಕರೊಂದಿಗೆ ಎನ್ ಎನ್ ಎಲ್ ಸಿ ವಿಜ್ಞಾನ ಪ್ರಶ್ನೆಪತ್ರಿಕೆ ವಿನ್ಯಾಸವನ್ನು ಸಮಗ್ರ ರಾಜ್ಯದ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ರಚಿಸಲು ನಡೆಸಿದ ದುಂಡು ಮೇಜಿನ ಸಭೆಯಲ್ಲಿ ವಿವಿಧ ಆಯಾಮಗಳನ್ನು ಕುರಿತು ಚರ್ಚಿಸಲಾಯಿತು.
ಇದೇ ಸಂದರ್ಭದಲ್ಲಿ ಮಂಡಳಿಯ ನಿರ್ದೇಶಕರಾದ ಎಚ್. ಎನ್. ಗೋಪಾಲಕೃಷ್ಣ ಅವರು ಶಾಸಕರಾದ ಎಸ್.ವಿ. ಸಂಕನೂರ ಅವರ ನಿಯೋಗಕ್ಕೆ ಸದರಿ ವಿಜ್ಞಾನ ಪ್ರಶ್ನೆಪತ್ರಿಕೆಯನ್ನು ರಾಜ್ಯದ ಎಲ್ಲ ಭಾಗಗಳ ಮಕ್ಕಳ ಮನೋಮಟ್ಟಕ್ಕೆ ತಕ್ಕಂತೆ ತಯಾರಿಸಲು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದ ವಿಧಾನ ಪರಿಷತ್ತು ಸದಸ್ಯರಾದ ಹನುಮಂತ ನಿರಾಣಿಯವರು ಮಾತನಾಡಿ, ಮಕ್ಕಳ ಭವಿಷ್ಯದ ದೃಷ್ಟಿಯಿಂದ ರೂಪಣಾತ್ಮಕ ಮೌಲ್ಯ ಮಾಪನದ ಅಂದರೆ ಆಂತರಿಕ ಅಂಕಗಳನ್ನು ನಹಿತ ಉತ್ತೀರ್ಣತೆಗೆ ಪರಿಗಣಿಸಬೇಕು, ಹಾಗೂ ಪ್ರಶ್ನೆ ಪತ್ರಿಕೆಯ ಕಠಿಣತೆಯ ಮಟ್ಟವು ಸರಾಸರಿಗಿಂತ ಕಡಿಮೆ ಇರುವವರಿಗೆ 50%. ಸರಾಸರಿಯವರಿಗೆ 30% ಹಾಗೂ ಸರಾಸರಿಗಿಂತ ಅಧಿಕ ಇರುವವರಿಗೆ 20% ಇದ್ದರೆ ಸೂಕ್ತ’ ಎಂದು ನಿರ್ದೇಶಕರಿಗೆ ಕೋರಿದರು.
ನಿಯೋಗದಲ್ಲಿ ವಿಜ್ಞಾನ ಶಿಕ್ಷಕರ ವೇದಿಕೆಯ ರಾಜ್ಯ ಅಧ್ಯಕ್ಷರಾದ ಶ್ರೀಧರ ಪಾಟೀಲಕುಲಕರ್ಣಿ ಮಾತನಾಡಿ, ‘ಇದೊಂದು ರಾಜ್ಯದ ಮಕ್ಕಳಲ್ಲಿ ಧೈರ್ಯ ತುಂಬುವ ಮತ್ತು ರಾಜ್ಯಾದ್ಯಂತ ವಿಜ್ಞಾನ ಬೋಧಕರ ನೈತಿಕತೆ ಕುಸಿಯದಂತೆ ತಡೆಯುವ ಮನವಿಯಾಗಿದೆ’ ಎಂದು ವಿನಂತಿಸಿದರು. ನಿಯೋಗದಲ್ಲಿ ವಿ.ಎಸ್.ಹುದ್ದಾರ. ಡಿ.ಬಿ.ದೊಡ್ಡಮನಿ, ವಿ.ಎನ್.ರೇಶ್ಮಿ ರಾಮಚಂದ್ರ ಭಟ್, ಸಂಜೀವಕುಮಾರ ಭೂಶೆಟ್ಟಿ. ರಾಜಶೇಖರ, ಬಸವರಾಜ ಮೈಸೂರು, ರಾಘವೇಂದ್ರ ಮಯ್ಯ ವಿಷಯ ಮಂಡನೆ ಮಾಡಿದರು. ರಾಜ್ಯದ ಬೆಳಗಾವಿ. ಕಲಬುರ್ಗಿ, ಬೆಂಗಳೂರು ಹಾಗೂ ಮೈಸೂರು ವಿಭಾಗಗಳಿಂದ ಪದಾಧಿಕಾರಿಗಳೆಲ್ಲರೂ ಚರ್ಚೆಯಲ್ಲಿ ಪಾಲ್ಗೊಂಡು ಅಗತ್ಯ ಬದಲಾವಣೆಗಳ ಕುರಿತು ಚರ್ಚಿಸಿದರು