ಬೆಂಗಳೂರು:- ಬಾಕಿ ಬಿಲ್ ಗಾಗಿ ಗುತ್ತಿಗೆದಾರರು ಪ್ರತಿಭಟನೆ ಮಾಡುತ್ತಿದ್ದು, ಇದು ಕಾಮಗಾರಿಗಳ ಮೇಲೆ ಪರಿಣಾಮವಾಗಲ್ಲ ಎಂದು ಕಮಿಷನರ್ ತುಷಾರ್ ಗಿರಿನಾಥ್ ಹೇಳಿದ್ದಾರೆ.
ಬೆಂಗಳೂರಿನ ಕಾಮಗಾರಿಗಳಿಗೆ ಜೀವ ನೀಡುದ್ದ ಬಿಬಿಎಂಪಿ ಗುತ್ತಿಗೆದಾರರು ಇದೀಗ ಪಾಲಿಕೆ ವಿರುದ್ಧವೇ ತಿರುಗಿಬಿದ್ದಿದ್ದಾರೆ. ಗುತ್ತಿಗೆದಾರರು ಮಾಡಿದ್ದ ಕಾಮಗಾರಿಗಳಿಗೆ ಶೇಕಡ 75 ರಷ್ಟು ಬಿಲ್ ಕೊಟ್ಟಿರೋ ಪಾಲಿಕೆ, ಉಳಿದ ಶೇ 25 ಬಾಕಿ ಉಳಿಸಿಕೊಂಡಿರುವುದನ್ನ ವಿರೋಧಿಸಿ ಗುತ್ತಿಗೆದಾರರು ಸೋಮವಾರದಿಂದ ಪಾಲಿಕೆಯ ಕೆಲಸಗಳಿಗೆ ಬ್ರೇಕ್ ಹಾಕಿದ್ದಾರೆ. ಬಾಕಿ ಬಿಲ್ಗೆ ಡಿಸಿಎಂ ಬಳಿಯೂ ಮನವಿ ಮಾಡಿ ಸುಸ್ತಾದ ಗುತ್ತಿಗೆದಾರರು ಇಂದು ಬಿಬಿಎಂಪಿ ಕೇಂದ್ರ ಕಚೇರಿಯ ಮುಂದೆ ಪ್ರತಿಭಟಿಸಿ ಆಕ್ರೋಶ ಹೊರಹಾಕಿದ್ದಾರೆ
ಬಿಲ್ ಬಾಕಿ ಬಿಡುಗಡೆಯಾಗುವ ತನಕ ಯಾವುದೇ ಕಾಮಗಾರಿ ಮಾಡಲ್ಲ, ನಾವು ಬಿಬಿಎಂಪಿಗಾಗಿ ದುಡಿದಿದ್ದೇವೆ, ಇಲ್ಲೇ ಪ್ರತಿಭಟಿಸ್ತೀವೆ ಎಂದಿರುವ ಗುತ್ತಿಗೆದಾರರು ಬಾಕಿ ಬಿಲ್ ಕೊಡೋ ತನಕ ಅನಿರ್ಧಿಷ್ಟಾವಧಿ ಪ್ರತಿಭಟನೆ ನಡೆಸಲು ಸಜ್ಜಾಗಿದ್ದಾರೆ.
ಇತ್ತ ಗುತ್ತಿಗೆದಾರರ ಪ್ರತಿಭಟನೆಯನ್ನು ಸರಳವಾಗಿಯೇ ತೆಗೆದುಕೊಂಡಿರುವ ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಸರ್ಕಾರದ ಸೂಚನೆಯಂತೆ, ನಾಗಮೋಹನ್ ದಾಸ್ ವರದಿಯಂತೆ ಶೇ 25 ಬಿಲ್ ತಡೆಹಿಡಿದಿದ್ದೇವೆ. ಸದ್ಯ ಗುತ್ತಿಗೆದಾರರ ಮನವಿಯನ್ನ ಸರ್ಕಾರಕ್ಕೆ ಸಲ್ಲಿಸಿದ್ದೇವೆ, ಬಾಕಿ ಬಿಡುಗಡೆ ವಿಚಾರ ಸರ್ಕಾರಕ್ಕೆ ಬಿಟ್ಟಿದ್ದೇವೆ ಎಂದಿದ್ದಾರೆ. ಅಲ್ಲದೇ ಗುತ್ತಿಗೆದಾರರ ಪ್ರತಿಭಟನೆಯು ಕಾಮಗಾರಿಗೆ ಏನೂ ಪರಿಣಾಮ ಬೀರುವುದಿಲ್ಲ. ಇರುವ ಸಂಪನ್ಮೂಲ ಬಳಸಿಕೊಂಡು ಕೆಲಸ ಮಾಡಿಸುತ್ತೇವೆ ಎಂದಿದ್ದಾರೆ.