ಚಿತ್ರದುರ್ಗ, ಫೆ.10- ಗ್ಯಾರಂಟಿ ಯೋಜನೆಗಳ ಜಾರಿ ಬಗ್ಗೆ ರಾಜ್ಯದ ಶೇ.76 ರಷ್ಟು ಜನರು ಸಂತೃಪ್ತ ಭಾವ ವ್ಯಕ್ತಪಡಿಸಿರುವುದು ಸಮೀಕ್ಷೆಗಳಿಂದ ತಿಳಿದು ಬಂದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದಿಲ್ಲ ಎಂದು ಈಗಾಗಲೆ ಸ್ಪಷ್ಟಪಡಿಸಿದ್ದಾರೆ. ಮುಂದಿನ 5 ವರ್ಷಗಳೂ ಕೂಡ ಗ್ಯಾರಂಟಿ ಯೋಜನೆಗಳು ಮುಂದುವರಿಯಲಿವೆ ಎಂದು ಯೋಜನೆ ಮತ್ತು ಸಾಂಖ್ಯಿಕ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು. ಹಿರಿಯೂರು ನಗರದ ನೆಹರು ಮೈದಾನ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ “ಹಿರಿಯೂರು ತಾಲ್ಲೂಕು ಹಾಗೂ ಹೋಬಳಿ ಮಟ್ಟದ ಪಂಚ ಗ್ಯಾರಂಟಿಗಳ ಈಡೇರಿಸಿದ ಸಾರ್ಥಕ ಸಮಾವೇಶ” ಉದ್ಘಾಟಿಸಿ ಅವರು ಮಾತನಾಡಿದರು.
ಚುನಾವಣೆ ಸಂದರ್ಭದಲ್ಲಿ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುತ್ತೇವೆ ಎಂದು ಭರವಸೆ ನೀಡಿದ್ದೆವು, ಆಗ ವಿರೋಧ ಪಕ್ಷದವರು ಇವನ್ನೆಲ್ಲ ಜಾರಿಗೊಳಿಸಲು ಆಗಲ್ಲ, ಇವರು ಸುಳ್ಳು ಹೇಳುತ್ತಿದ್ದಾರೆ ಎಂಬುದಾಗಿ ಅಪಪ್ರಚಾರ ಮಾಡಿದರು. ಆದರೆ ಜನ ಇಂತಹ ಅಪಪ್ರಚಾರವನ್ನು ಲೆಕ್ಕಿಸದೆ ನಮ್ಮನ್ನು ಆಯ್ಕೆ ಮಾಡಿದರು. ನಮ್ಮ ಸರ್ಕಾರ ಚುನಾವಣೆಗೂ ಮುನ್ನ ಜನರಿಗೆ ನೀಡಿದ ಆಶ್ವಾಸನೆಯಂತೆ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವ ಮೂಲಕ ನುಡಿದಂತೆ ನಡೆದಿದ್ದೇವೆ. ಅಧಿಕಾರಕ್ಕೆ ಬಂದ ತಿಂಗಳ ಒಳಗಾಗಿಯೇ 200 ಯುನಿಟ್ ವರೆಗೆ ಉಚಿತ ವಿದ್ಯುತ್ ನೀಡುವ “ಗೃಹಜ್ಯೋತಿ” ಹಾಗೂ ಮಹಿಳೆಯರ ಉಚಿತ ಪ್ರಯಾಣದ “ಶಕ್ತಿ “ಯೋಜನೆಗೆ ಚಾಲನೆ ನೀಡಲಾಯಿತು.
ಹಂತ ಹಂತವಾಗಿ ಮನೆ ಯಜಮಾನಿಗೆ ತಿಂಗಳಿಗೆ ರೂ.2000 ನೀಡುವ “ಗೃಹಲಕ್ಷ್ಮೀ”, 10 ಕೆ.ಜಿ. ಅಕ್ಕಿ ನೀಡುವ “ಅನ್ನಭಾಗ್ಯ ಯೋಜನೆ”, ಪದವೀಧರ, ಡಿಪೆÇ್ಲಮಾ ಉತ್ತೀರ್ಣರಾದವರಿಗೆ ಎರಡು ವರ್ಷಗಳವರೆಗೆ ನಿರುದ್ಯೋಗ ಭತ್ಯೆ ನೀಡುವ “ಯುವನಿಧಿ” ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ನಮ್ಮದು ಕೆಲಸ ಮಾಡುವ ಹಾಗೂ ನೀಡಿದ ಭರವಸೆಯನ್ನು ಈಡೇರಿಸುವ ಸರ್ಕಾರವಾಗಿದೆ. ಗ್ಯಾರಂಟಿ ಯೋಜನೆಗಳಿಂದ ಕುಟುಂಬದಲ್ಲಿ ಆರ್ಥಿಕ ಬಲ ಬಂದಿದ್ದು, ಜೀವನ ಮಟ್ಟ ಸುಧಾರಣೆ ಹಾಗೂ ನಿರ್ವಹಣೆ ಸುಲಭವಾಗಿದೆ. ಗ್ಯಾರಂಟಿ ಯೋಜನೆಗಳಿಂದ ಬಡವರು, ಮಧ್ಯಮ ವರ್ಗದವರಿಗೆ ಬಹಳ ಅನುಕೂಲವಾಗಿದೆ ಎಂದರು.
ಮುಂದಿನ ವರ್ಷದ ವೇಳೆಗೆ ಹಿರಿಯೂರಿನ ತಾಲ್ಲೂಕಿನ ಎಲ್ಲಾ ಹಳ್ಳಿಗಳಿಗೆ ವಿ.ವಿ. ಸಾಗರ ಜಲಾಶಯದಿಂದ ಕುಡಿಯುವ ನೀರು ಹರಿಸಲಾಗುವುದು. ಈಗಾಗಲೇ ಹರ್ತಿಕೋಟೆ ಭಾಗದ 40 ಹಳ್ಳಿ, ಧರ್ಮಪುರ, ಐಮಂಗಲ ಹಾಗೂ ಜವಗೊಂಡನಳ್ಳಿ ಸೇರಿ 170 ಹಳ್ಳಿಗಳಿಗೆ ಕುಡಿಯುವ ನೀರಿನ ಕಾಮಗಾರಿಗೆ ಟೆಂಡರ್ ಕರೆಯಲಾಗಿದೆ. ಶೀಘ್ರದಲ್ಲಿ ಗುದ್ದಲಿ ಪೂಜೆ ನೆರವೇರಿಸಲಾಗುವುದು ಎಂದರು. ಈಗಾಗಲೇ ಪೂರ್ಣಗೊಂಡಿರುವ ಐಮಂಗಲ ಹೋಬಳಿಯ 39 ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆ ಯೋಜನೆಗೆ ಚಾಲನೆ ಮುಂದಿನ ವಾರದಲ್ಲಿ ಚಾಲನೆ ನೀಡಲಾಗುವುದು ಎಂದು ಸಚಿವ ಡಿ.ಸುಧಾಕರ್ ಹೇಳಿದರು.
ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಸಮರ್ಪಕ ಅನುμÁ್ಠನ ಹಾಗೂ ಅರ್ಹ ಫಲಾನುಭವಿಗಳಿಗೆ ಅದು ತಲುಪಿದೆಯೇ ಎಂಬುದನ್ನು ಪರಿಶೀಲಿಸಲು ತಾಲ್ಲೂಕು ಮತ್ತು ಹೋಬಳಿ ಮಟ್ಟದಲ್ಲಿ ಸಮಾವೇಶ ಹಮ್ಮಿಕೊಳ್ಳಲಾಗುತ್ತಿದೆ. ಸರ್ಕಾರದ ಯೋಜನೆಗಳ ಕಟ್ಟಕಡೆಯ ವ್ಯಕ್ತಿಗೂ ತಲುಪುವುದು ಮುಖ್ಯ. ಅರ್ಹ ಫಲಾನುಭವಿಗಳು ಯೋಜನೆಗಳಿಂದ ವಂಚಿತರಾಗಬಾರದು. ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಅರ್ಹ ಫಲಾನುಭವಿಗಳು ಸದ್ಭಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಹಿರಿಯೂರು ತಹಶೀಲ್ದಾರ್ ರಾಜೇಶ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಸರ್ಕಾರ ಐದು ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದೆ. ಹಿರಿಯೂರು ತಾಲ್ಲೂಕಿನಲ್ಲಿ ಅನ್ನಭಾಗ್ಯ ಯೋಜನೆಯಡಿ 65,019 ಕುಟುಂಬಗಳು, ಗೃಹಲಕ್ಷ್ಮೀ ಯೋಜನೆಯಡಿ 66,014 ಫಲಾನುಭವಿಗಳು, ಗೃಹಜ್ಯೋತಿ ಯೋಜನೆಯಡಿ 64,778 ಕುಟುಂಬಗಳು ಪ್ರಯೋಜನ ಪಡೆದಿವೆ. ಶಕ್ತಿ ಯೋಜನೆಯಡಿ ಮಹಿಳೆಯರು ಸರ್ಕಾರದ ಸಾರಿಗೆ ಬಸ್ಗಳಲ್ಲಿ ಉಚಿತವಾಗಿ ಪ್ರಯಾಣ ಮಾಡುತ್ತಿದ್ದಾರೆ. ಹಿರಿಯೂರು ತಾಲ್ಲೂಕಿನಲ್ಲಿ ಯುವನಿಧಿ ಯೋಜನೆಯಡಿ 517 ಫಲಾನುಭವಿಗಳು ನೋಂದಣಿಯಾಗಿದ್ದಾರೆ ಎಂದು ಮಾಹಿತಿ ನೀಡಿದರು.
ಪಂಚ ಗ್ಯಾರೆಂಟಿ ಯೋಜನೆಗಳ ಬಗ್ಗೆ ಕುಂದುಕೊರತೆಗಳು ಇದ್ದಲ್ಲಿ ತೆರೆಯಲಾಗಿರುವ ಸೇವಾಸಿಂಧು ಕೌಂಟರ್ನಲ್ಲಿ ದೂರು ಸಲ್ಲಿಸಿದರೆ ಸಂಬಂಧಪಟ್ಟ ತಾಲ್ಲೂಕು ಮಟ್ಟದ ಅಧಿಕಾರಿಗಳು ತಕ್ಷಣ ನೋಡಿ ತಾಂತ್ರಿಕ ಸಮಸ್ಯೆ ಇದ್ದಲ್ಲಿ ಬಗೆಹರಿಸಿಕೊಡುವರು ಎಂದರು.
ಕಾರ್ಯಕ್ರಮಕ್ಕೆ ಆಗಮಿಸಿದ್ದ ಫಲಾನುಭವಿ ಹಿರಿಯೂರಿನ ಸುಜಾತ ತನ್ನ ಅನಿಸಿಕೆ ವ್ಯಕ್ತಪಡಿಸಿ, ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಸಂತಸ ತಂದಿದೆ. ಅನ್ನಭಾಗ್ಯ ಯೋಜನೆಯಡಿ 5 ಕೆ.ಜಿ ಅಕ್ಕಿ ನೀಡುತ್ತಿದ್ದು, 5 ಕೆ.ಜಿ ಅಕ್ಕಿಯ ಬದಲು ಹಣ ನೀಡಲಾಗುತ್ತಿದೆ. ಇದರಲ್ಲಿ ಮನೆಗೆ ಬೇಕಾದ ಇತರೆ ದವಸ ಧಾನ್ಯಗಳನ್ನು ಖರೀದಿ ಮಾಡುತ್ತಿದ್ದೇನೆ. ನೂರಿನ್ನೂರು ರೂ. ಹಣಕ್ಕೂ ಇತರರಲ್ಲಿ ಕೈಚಾಚುವ ಅಗತ್ಯ ಈಗಿಲ್ಲ. ಗೃಹಲಕ್ಷ್ಮೀ ಯೋಜನೆಯಡಿ ರೂ.2000 ಹಣ ನನ್ನ ಖಾತೆಗೆ ಜಮೆಯಾಗುತ್ತಿದೆ. 5 ತಿಂಗಳ ಹಣ ರೂ.10,000 ಹಾಗೂ ನನ್ನ ವೈಯಕ್ತಿಕ ಹಣ 4 ಸಾವಿರ ಜೋಡಿಸಿ, ಹಿರಿಯೂರು ನಗರದ ಖಾಸಗಿ ಶಾಲೆಯಲ್ಲಿ ಓದುತ್ತಿರುವ ನನ್ನ ಮಗಳ ವಾರ್ಷಿಕ ಶಾಲಾ ಶುಲ್ಕ ತುಂಬಿದ್ದೇನೆ. ಇದರಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಕಾರಿಯಾಗಿದೆ.
Raw Milk: ನಿಮಗೆ ಗೊತ್ತೇ.? ಹಸಿ ಹಾಲು ಕುಡಿಯುವುದು ಆರೋಗ್ಯಕ್ಕೆ ಸಖತ್ ಡೇಂಜರ್..!
ಈ ಹಣವನ್ನು ನಾವು ವ್ಯರ್ಥವಾಗಿ ಖರ್ಚು ಮಾಡುತ್ತಿಲ್ಲ. ಶಕ್ತಿ ಯೋಜನೆಯು ಮಹಿಳೆಯರಿಗೆ ತುಂಬಾ ಅನುಕೂಲವಾಗಿದೆ. ನನ್ನ ತಾಯಿ ಅವರಿಗೆ ಆರೋಗ್ಯದಲ್ಲಿ ಏರುಪೇರು ಆದಾಗ ದಾವಣಗೆರೆ ಹೋಗಿ ಬರಬೇಕಾದ ಸಂದರ್ಭ ಒದಗಿಬಂದಿತು. ಹಿರಿಯೂರಿನಿಂದ ದಾವಣಗೆರೆಗೆ ಹೋಗಲು 150 ಹಾಗೂ ಮರಳಿ ಬರಲು 150 ಬೇಕು. ಬೇರೆ ಸಂದರ್ಭವಾಗಿದ್ದರೆ ನಾನು ತಾಯಿಯನ್ನು ನೋಡಲು ಹೋಗುವುದು ದುಸ್ತರವಾಗುತಿತ್ತು. ಆದರೆ ಇದೀಗ ಆಧಾರ್ ಕಾರ್ಡ್ ಇಟ್ಟುಕೊಂಡು ಉಚಿತವಾಗಿ ಬಸ್ ಪ್ರಯಾಣಿಸಬಹುದು. ಗೃಹಜ್ಯೋತಿ ಯೋಜನೆಯಡಿ 200 ಯುನಿಟ್ವರೆಗೂ ಉಚಿತ ವಿದ್ಯುತ್ ನೀಡಲಾಗಿದೆ. ಈ ಮೊದಲು ತಿಂಗಳ ವಿದ್ಯುತ್ ಬಿಲ್ ಬಂದಾಗ ಶಾಕ್ ಆಗುತ್ತಿತ್ತು. ಬಿಲ್ ಪಾವತಿ ಬಗ್ಗೆ ಚಿಂತಿಸುತ್ತಿದ್ದೆ. ಗ್ಯಾರಂಟಿ ಯೋಜನೆಗಳು ಬಡವರಿಗೆ ತುಂಬಾ ಅನುಕೂಲವಾಗಿದೆ.
ನಮ್ಮಂತಹ ಬಡ ಜನರ ಏಳಿಗೆಗಾಗಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಇಲ್ಲಿಂದಲೇ ನಮಸ್ಕಾರ ಮಾಡ್ತೇನೆ. ಸಾಧ್ಯವಾದರೆ ಬೆಂಗಳೂರಿಗೆ ತೆರಳಿ, ಅವರನ್ನು ಭೇಟಿ ಮಾಡಿ ಧನ್ಯವಾದ ತಿಳಿಸುವ ಆಸೆ ಇದೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಮೊತ್ತೋರ್ವ ಫಲಾನುಭವಿ ಸುಜಾತ ಕೂಡ ತಮ್ಮ ಅನಿಸಿಕೆಯನ್ನು ವೇದಿಕೆಯ ಮೇಲೆ ಹಂಚಿಕೊಂಡರು. ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸತೀಶ್ ಕುಮಾರ್ ಸ್ವಾಗತಿಸಿದರು.
ಜಿ.ಪಂ. ಮಾಜಿ ಅಧ್ಯಕ್ಷೆ ಶಶಿಕಲಾ ಸುರೇಶ್ಬಾಬು, ಮಾಜಿ ಸದಸ್ಯರಾದ ಗೀತಾ, ನಾಗೇಂದ್ರನಾಯ್ಕ್, ತಾ.ಪಂ. ಮಾಜಿ ಅಧ್ಯಕ್ಷೆ ಸುಜಾತಾ, ಹಿರಿಯೂರು ನಗರ ಸಭೆ ಪೌರಾಯುಕ್ತ ಮಹಾಂತೇಶ್, ನಗರ ಸಭೆ ಸದಸ್ಯರಾದ ಮಹೇಶ್, ತಿಪ್ಪೇಸ್ವಾಮಿ, ಶಿವರಂಜನಿ, ಸಮೀವುಲ್ಲಾ, ದಾದಪೀರ್, ಗಣೇಶ್, ಅಪೂರ್ವ, ಅಂಬಾಬಾಯಿ ಸೇರಿದಂತೆ ಇತರೆ ಸದಸ್ಯರು, ಹಿರಿಯೂರು ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು, ಫಲಾನುಭವಿಗಳು ಇದ್ದರು. ಚಿತ್ರದುರ್ಗದ ಐಸಿರಿ ಕಲಾತಂಡದ ಕಲಾವಿದರು ವೇದಿಕೆ ಕಾರ್ಯಕ್ರಮ ಪ್ರಾರಂಭಕ್ಕೂ ಮುನ್ನಾ ಗೀತ ಗಾಯನ ಪ್ರಸ್ತುಪಡಿಸಿದರು.