ಧಾರವಾಡ: ಸರ್.ಎಂ.ವಿಶ್ವೇಶ್ವರಯ್ಯ ಅವರ ವಿನ್ಯಾಸದಲ್ಲಿ ನಿರ್ಮಾಣವಾದ ಧಾರವಾಡದ ಕೆಲಗೇರಿ ಕೆರೆ ಸದಾ ಒಂದಿಲ್ಲೊಂದು ಸುದ್ದಿಯಲ್ಲಿ ಇದ್ದೇ ಇರುತ್ತದೆ. ಇದರ ನಿರ್ವಹಣಾ ಜವಾಬ್ದಾರಿ ಕೃಷಿ ವಿಶ್ವವಿದ್ಯಾಲಯದ ಮೇಲಿದೆ. ಕೃಷಿ ವಿಶ್ವವಿದ್ಯಾಲಯವು ಕೆಲಗೇರಿ ಕೆರೆಯನ್ನು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ ಎಂಬ ಆರೋಪ ಆಗಾಗ ಕೇಳಿ ಬರುತ್ತಲೇ ಇರುತ್ತವೆ. ಇದಕ್ಕೆ ಸಾಕ್ಷಿ ಎಂಬಂತೆ ಕೆರೆಯಲ್ಲಿನ ಮೀನುಗಳು ಸತ್ತು ದಡ ಸೇರುತ್ತಿವೆ.
ಹೌದು! ಧಾರವಾಡದ ಪ್ರತಿಷ್ಠಿತ ಈ ಕೆಲಗೇರಿ ಕೆರೆಗೆ ಕಲುಷಿತ ನೀರು ಹಾಗೂ ರಾಸಾಯನಿಕಯುಕ್ತ ನೀರು ಸೇರುತ್ತಿದೆ ಎಂಬ ಆರೋಪವನ್ನು ಅಲ್ಲಿ ವಾಯು ವಿಹಾರಕ್ಕೆ ಬರುವ ಜನ ಹಾಗೂ ಸ್ಥಳೀಯ ಕೆಲಗೇರಿ ಜನರೇ ಮಾಡುತ್ತಿದ್ದಾರೆ. ಇಂತಹ ಕಲುಷಿತ ನೀರು ಕೆರೆ ಸೇರುತ್ತಿರುವುದರಿಂದ ಕೆರೆಯಲ್ಲಿನ ಮೀನುಗಳು ಹಾಗೂ ಇತರ ಜಲಚರ ಜೀವಿಗಳು ಮರಣ ಹೊಂದುತ್ತಿವೆ. ಈ ರೀತಿ ಮೀನುಗಳು ಸತ್ತು ದಡಕ್ಕೆ ಬರುತ್ತಿರುವುದರಿಂದ ಸುತ್ತಮುತ್ತ ಕೆಟ್ಟ ವಾಸನೆ ಸಹ ಬರುತ್ತಿದೆ.
ಸದ್ಯ ಕೆಲಗೇರಿ ಕೆರೆಗೆ ಕಲುಷಿತ ನೀರು ಮಿಶ್ರಣವಾಗುತ್ತಿರುವುದರಿಂದ ಕೆರೆಯಲ್ಲಿನ ಜಲಚರ ಜೀವಿಗಳು ಪ್ರಾಣ ಬಿಡುತ್ತಿವೆ. ಇದರ ಜೊತೆಗೆ ಸುತ್ತಮುತ್ತ ಕೆಟ್ಟ ವಾಸನೆ ಹರಡುತ್ತಿದ್ದು, ಕೂಡಲೇ ಈ ಕೆರೆ ನಿರ್ವಹಣೆ ಜವಾಬ್ದಾರಿ ಹೊತ್ತಿರುವ ಕೃಷಿ ವಿಶ್ವವಿದ್ಯಾಲಯವಾಗಿ ಅಥವಾ ಮಹಾನಗರ ಪಾಲಿಕೆಯಾಗಲಿ ಇದರತ್ತ ಕೊಂಚ ಗಮನಹರಿಸಬೇಕಿದೆ.