ಚಿತ್ರದುರ್ಗ: ಕಾಂಗ್ರೆಸ್ ಪಕ್ಷ ಚುನಾವಣಾ ಪ್ರನಾಳಿಕೆಯಲ್ಲಿ ಘೋಷಣೆ ಮಾಡಿದಂತೆ,ಹಾಗೂ ಸುಪ್ರೀಂ ಕೋರ್ಟ್ ಆದೇಶದಂತೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಒಳ ಮೀಸಲಾತಿ ಜಾರಿಗೊಳಿಸಿ, ಸರ್ಕಾರಿ ನೇಮಕಾತಿ ಮತ್ತು ಬಡ್ತಿಗಳನ್ನು ತಡೆ ಹಿಡಿಯಬೇಕು ಎಂದು ಕರ್ನಾಟಕ ಅನುಸೂಚಿತ ಜಾತಿ ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿ ಅಧ್ಯಕ್ಷರಾದ ನರೇಂದ್ರಸ್ವಾಮಿ ಯವರಿಗೆ ಚಿತ್ರದುರ್ಗ ಜಿಲ್ಲಾ ಮಾದಿಗ ಮಹಾಸಭಾವತಿಯಿಂದ ಸಮುದಾಯದ ಮುಖಂಡರು ಮನವಿ ಪತ್ರ ನೀಡಿದರು.
ಇಂದು ಮಳವಳ್ಳಿ ಶಾಸಕ ನರೇಂದ್ರ ಸ್ವಾಮಿ ಚಿತ್ರದುರ್ಗಕ್ಕೆ ಆಗಮಿಸಿದ್ದ ವೇಳೆ ಜಿಲ್ಲಾ ಪಂಚಾಯತಿ ಕಚೇರಿ ಬಳಿ ಮನವಿ ಪತ್ರ ಸಲ್ಲಿಸಿ,
ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಡಾ ಜಿ.ಪರಮೇಶ್ವರ್ ರವರು,ಪ್ರನಾಳಿಕೆಯಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಮೊದಲ ಅಧಿವೇಶನದಲ್ಲಿ ಒಳಮೀಸಲಾತಿ ಜಾರಿ ಮಾಡುತ್ತೇವೆಂದು ಎಸ್.ಸಿ. ಎಸ್.ಟಿ ಸಮಾವೇಶದಲ್ಲಿ ಘೋಷಣೆ ಮಾಡಿದ್ದರು. ಅದರಂತೆ,ಮಾದಿಗ ಸಮುದಾಯದ ಜನರು ಕಾಂಗ್ರೆಸ್ ಪಕ್ಷಕ್ಕೆ ಶೇ 90% ರಷ್ಟು ಮತಗಳನ್ನು ಹಾಕಿ, ಸರ್ಕಾರ ರಚನೆಯಾಗಲು ಕಾರಣರಾಗಿದ್ದಾರೆ.
ಡಾ. ಬಿ. ಆರ್. ಅಂಬೇಡ್ಕರ್ರವರ ಸಮ ಸಮಾಜದ ನೆಲಗಟ್ಟಿನಲ್ಲಿ ಸಂವಿಧಾನದ ಪರಿಚ್ಚೇದ 15(4), 16(4) ರಲ್ಲಿ ಹೇಳಿರುವಂತೆ ಜಾತಿ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿಯನ್ನು ನೀಡಬೇಕೆಂದು ಸುಪ್ರೀಂ ಕೋರ್ಟ್ ಸಂವಿಧಾನಿಕ ಪೀಠ
ಒಳ ಮೀಸಲಾತಿಯನ್ನು ಜಾರಿ ಮಾಡುವ ಹಕ್ಕು ರಾಜ್ಯ ಸರ್ಕಾರಕ್ಕೆ ಇದೆ ಎಂದು ತೀರ್ಪು ನೀಡಿದ್ದು, ನಂತರ,
ಪುನರ್ ಪರಿಶೀಲನಾ ಅರ್ಜಿಯನ್ನು ವಜಾಗೊಳಿಸಿದೆ. ಆದ್ದರಿಂದ, ಸರ್ಕಾರ ಅಸ್ಪೃಶ್ಯ ಸಮಾಜದ ಕಟ್ಟ ಕಡೆಯ ಮಾದಿಗ ಸಮಾಜಕ್ಕೆ ಸಾಮಾಜಿಕ ನ್ಯಾಯ ನೀಡುವ ಜವಾಬ್ದಾರಿ ಸರ್ಕಾರದ ಮೇಲೆ ಇದೆ. ಇಂತಹ ಅವಕಾಶವನ್ನು ಮುಖ್ಯಮಂತ್ರಿಗಳು ಬಳಸಿಕೊಂಡು ಒಳ ಮೀಸಲಾತಿ ಜಾರಿ ಮಾಡಿದರೆ ಸಿದ್ಧರಾಮಯ್ಯನವರು ಮಾದಿಗ ಸಮಾಜದ ಮನೆ ಮನಗಳಲ್ಲಿ ಸಾಮಾಜಿಕ ನ್ಯಾಯದ ಹರಿಕಾರರಾಗಿ
ಉಳಿದುಕೊಳ್ಳುತ್ತಾರೆ. ಇಲ್ಲವಾದರೆ, ಬಹುದೊಡ್ಡ ಮಾದಿಗ ಸಮುದಾಯ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷದ ವಿರುದ್ಧವಾಗಿ ರಾಜ್ಯಾದ್ಯಂತ ರಾಜಕೀಯ ಚಳುವಳಿಯನ್ನು ಪ್ರಾರಂಭಿಸಿ, ಕಾಂಗ್ರೆಸ್ ಪಕ್ಷವನ್ನು ಸೋಲಿಸಲು ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಹೀಗಾಗಿ, ನರೇಂದ್ರ ಸ್ವಾಮಿಯವರು ಸಹ, ಅಸ್ಪಶ್ಯ ಸಮಾಜದಲ್ಲಿ ಹುಟ್ಟಿ ಅಸ್ಪೃಶ್ಯರ ಹಸಿವು, ಅವಮಾನ, ಬಡತನ, ನಿರುದ್ಯೋಗ ಸೇರಿದಂತೆ, ಎಲ್ಲವನ್ನು ಅನುಭವಿಸಿದವರಾಗಿದ್ದು, ಜೊತೆಗೆ ನ್ಯಾಯ ಕೊಡಿಸುವ ಜವಾಬ್ದಾರಿಯೂ ನಿಮ್ಮ ಮೇಲೆ ಇರುವುದರಿಂದ ಒಳ ಮೀಸಲಾತಿ
ಪರವಾಗಿ ಧ್ವನಿ ಎತ್ತಬೇಕು ಮತ್ತು ತಕ್ಷಣ ಸರ್ಕಾರಿ ನೇಮಕಾತಿ ಮತ್ತು ಬಡ್ತಿಗಳನ್ನು ತಡೆಹಿಡಿಯಲು ಸಂಬಂಧಿಸಿದ ಇಲಾಖೆಗಳಿಗೆ ಆದೇಶ ನೀಡಬೇಕೆಂದು ಒತ್ತಾಯಿಸಿ, ನರೇಂದ್ರ ಸ್ವಾಮಿಯವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಇದೆ ವೇಳೆ, ಮಾದಿಗ ಸಮುದಾಯದ ಮುಖಂಡರು ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ,ಜಿಲ್ಲೆಯ ಎಲ್ಲಾ ಶಾಸಕರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ವಿರುದ್ಧ ದಿಕ್ಕಾರ ಕೂಗಿ, ಸರ್ಕಾರದ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ,ಮಾದಿಗ ಮಹಾಸಭಾ ಮುಖಂಡರಾದ ಹನುಮಂತಪ್ಪ ದುರ್ಗ, ಸಮುದಾಯದ ಮುಖಂಡರಾದ ಕೆ ಟಿ ಶಿವಕುಮಾರ್, ದಲಿತ ಮುಖಂಡರಾದ,ಬಿರಾವರ ಪ್ರಕಾಶ್, ರಾಜಣ್ಣ,ಹುಲ್ಲೂರ್ ಕುಮಾರಸ್ವಾಮಿ,ಏಕಾಂತಪ್ಪ, ದುರುಗೇಶ್ ಬಂಗಾರಪ್ಪ ಸೇರಿದಂತೆ, ಹಲವಾರು ಮುಖಂಡರು ಭಾಗವಹಿಸಿದ್ದರು.