ಬೆಂಗಳೂರು:- DCM ಡಿಕೆಶಿ ಸೊಕ್ಕು ಮುರಿಯಲು ಕಾಂಗ್ರೆಸ್ ನಿಂದಲೇ ಪ್ಲ್ಯಾನ್ ನಡೆದಿದೆ ಎಂದು ಬಿವೈ ವಿಜಯೇಂದ್ರ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಕಾಂಗ್ರೆಸ್ಗೆ ತಾವು ಅಲ್ಪಸಂಖ್ಯಾತರ ಮತಗಳಿಂದಲೇ ಅಧಿಕಾರಕ್ಕೆ ಬಂದಿದ್ದೇವೆ ಎಂಬ ಭಾವನೆ ಇದೆ. ಇದಕ್ಕಾಗಿ ರೈತರೂ ಸೇರಿದಂತೆ ಎಲ್ಲಾ ವರ್ಗಗಳನ್ನೂ ಕಡೆಗಣಿಸುತ್ತಿದೆ. ಅಲ್ಪಸಂಖ್ಯಾತರ ಅಭಿವೃದ್ಧಿಗೆ 10 ಸಾವಿರ ಕೋಟಿ ರೂ. ನೀಡುತ್ತೇವೆ ಎನ್ನುವುದರೊಂದಿಗೆ ಡಿಜೆ ಹಳ್ಳಿ/ಕೆಜೆ ಹಳ್ಳಿ ಗುಂಪು ಗಲಭೆ ಪ್ರಕರಣದಲ್ಲಿ ಭಾಗಿಯಾಗಿದ್ದ ದೇಶದ್ರೋಹಿಗಳನ್ನು ಅಮಾಯಕರು ಎಂದು ಬಿಂಬಿಸುವ ಪ್ರಯತ್ನಗಳಾಗುತ್ತಿವೆ ಎಂದು ಅವರು ದೂರಿದರು.
ಒಂದು ವೇಳೆ ಕೆಜೆ ಹಳ್ಳಿ/ಡಿಜೆ ಹಳ್ಳಿ ಪ್ರಕರಣದಲ್ಲಿನ ಆರೋಪಿಗಳನ್ನು ಬಿಡುಗಡೆ ಮಾಡಿದರೆ ಅದು ಇನ್ನಿತರ ದೇಶದ್ರೋಹಿಗಳಿಗೆ ಕುಮ್ಮಕ್ಕು ನೀಡಿದಂತಾಗುತ್ತದೆ. ಪೊಲೀಸ್ ಠಾಣೆಗಳಿಗೆ ಬೆಂಕಿ ಇಟ್ಟವರನ್ನು ಬಿಡುಗಡೆ ಮಾಡಿದ್ದಾರೆ ಎಂಬ ಧೋರಣೆಯಿಂದ ಇತರರು ಅದೇ ರೀತಿಯ ಕೃತ್ಯಗಳಲ್ಲಿ ತೊಡಗುವ ಆತಂಕವಿದೆ ಎಂದು ಹೇಳಿದರು.
ಬಿಜೆಪಿ ಅಲ್ಪಸಂಖ್ಯಾತರ ವಿರೋಧಿಯಲ್ಲ. ಅವರ ಅಭಿವೃದ್ಧಿಗೆ ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸಿದ್ದೇವೆ. ಪ್ರಧಾನಿ ನರೇಂದ್ರ ಮೋದಿಯವರು ತ್ರಿಬ್ಬಲ್ ತಲಾಕ್ ನಿಷೇಧ ಜಾರಿಗೆ ತಂದಿದ್ದಾರೆ. ಆದರೆ ದುಷ್ಕøತ್ಯಗಳಲ್ಲಿ ಭಾಗಿಯಾದವರನ್ನು ರಕ್ಷಿಸುವುದು ಅಕ್ಷಮ್ಯ ಅಪರಾಧ ಎಂದರು.
ಕಾಂಗ್ರೆಸ್ನಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಬಗ್ಗು ಬಡಿಯಬೇಕು, ಸೊಕ್ಕು ಮುರಿಯಬೇಕು ಎಂದು ಅವರದೇ ಪಕ್ಷದ ಮಹಾನ್ ನಾಯಕರು ಯೋಜನೆ ರೂಪಿಸಿದ್ದಾರೆ. ಅದಕ್ಕಾಗಿ 3 ಹೆಚ್ಚುವರಿ ಉಪಮುಖ್ಯಮಂತ್ರಿಗಳ ಹುದ್ದೆ ಸೃಷ್ಟಿ ಕುರಿತು ಚರ್ಚೆಗಳಾಗುತ್ತಿವೆ. ಅವರಿಗೆ ಯಶಸ್ಸು ದೊರೆಯಲಿ ಎಂದು ಹಾರೈಸಿದರು.