ಬೆಂಗಳೂರು: ರಾಜಕೀಯಕ್ಕಾಗಿ ಕಾಂಗ್ರೆಸ್ ಪಕ್ಷ ದಲಿತ ಕಾರ್ಡ್ ಪ್ಲೇ ಮಾಡುತ್ತಿದೆ ಎಂದು ವಿಧಾನ್ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಹೇಳಿಕೆ ನೀಡಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ದಲಿತ ಸಿಎಂ ಕೂಗು ವಿಚಾರವಾಗಿ ಮಾತನಾಡಿದ ಅವರು, ಕಾಂಗ್ರೆಸ್ನಲ್ಲಿ ಕೆಲವರು ದಲಿತ ಸಿಎಂ ಆಗಲಿ ಎಂದಿದ್ದು, ಅಲ್ಲಿಗೆ ಸಿಎಂ ಬದಲಾವಣೆ ಖಚಿತವಾಗಿದೆ. ರಾಜಕೀಯಕ್ಕಾಗಿ ಕಾಂಗ್ರೆಸ್ (Congress) ಪಕ್ಷ ದಲಿತ ಕಾರ್ಡ್ ಪ್ಲೇ ಮಾಡುತ್ತಿದೆ. ಆದರೆ ದಲಿತರಿಗೆ ಅನ್ಯಾಯ ಆದಾಗ ಸುಮ್ಮನಿರುತ್ತದೆ. ಇವತ್ತು ದಲಿತ ಸಿಎಂ ಕೊಡೋದು ಅನಿವಾರ್ಯವಾಗಿದೆ. ಅದಕ್ಕಾಗಿ ಪರಮೇಶ್ವರ್ ಎದುರು ಸತೀಶ್ ಜಾರಕಿಹೊಳಿಯವರನ್ನು ಎತ್ತಿ ಕಟ್ಟುತ್ತಿದ್ದಾರೆ. ಇದುವರೆಗೆ ಪರಮೇಶ್ವರ್ ಹೆಸರಿತ್ತು. ಈಗ ಸತೀಶ್ ಜಾರಕಿಹೊಳಿಯವರ (Satish Jarkiholi) ಹೆಸರು ಮುನ್ನೆಲೆಗೆ ತಂದಿದ್ದಾರೆ. ಅವರಿಬ್ಬರು ದಲಿತರೇ, ದಲಿತರ ನಡುವೆ ಕಚ್ಚಾಟ ತಂದು ತಮಾಷೆ ನೋಡುವ ಕೆಲಸ ಮಾಡುತ್ತಿರುವವರು ಯಾರು? ಅದಕ್ಕಾಗಿ ಕಾಂಗ್ರೆಸ್ನ್ನು ದಲಿತ ವಿರೋಧಿ ಎಂದು ಕರೆಯಲಾಗುತ್ತದೆ ಎಂದರು
ವಾಲ್ಮೀಕಿ ಹಗರಣಕ್ಕೆ ವಿಚಾರ:
ನಾಗೇಂದ್ರ ವಿರುದ್ಧ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಇಡಿಯಿಂದ ಪ್ರಾಸಿಕ್ಯೂಷನ್ ದೂರು ವಿಚಾರವಾಗಿ ಮಾತನಾಡಿ, ಇಡಿ ವರದಿಯಲ್ಲಿ ವಾಲ್ಮೀಕಿ ಹಗರಣಕ್ಕೆ (Valmiki Scam) ನಾಗೇಂದ್ರ ಕಾರಣ ಎಂದು ಇದೆ. ಅವರೇ ಮಾಸ್ಟರ್ ಮೈಂಡ್ ಅಂತಿದೆ. ಇಷ್ಟು ದಿನ ನಾಗೇಂದ್ರ ತಪ್ಪು ಮಾಡಿಲ್ಲ ಎಂದು ಸಿಎಂ ಸಮರ್ಥನೆ ಮಾಡುತ್ತಿದ್ದರು. ಜೊತೆಗೆ ಸಿಎಂ ಖುದ್ದು ಆರ್ಥಿಕ ಸಚಿವರು, ಇವರ ಸೂಚನೆ ಇಲ್ಲದೇ ಏನೂ ಆಗ್ತಿರಲಿಲ್ಲ ಅಂತನೂ ಇದೆ. ಸಿಎಂ ಅಕ್ರಮ ಮುಚ್ಚಿ ಹಾಕಲು ಪ್ರಕರಣ ಎಸ್ಐಟಿಗೆ ಕೊಟ್ಟಿದ್ದಾರೆ. ಈಗ ಇಡಿಯ ಈ ವರದಿಯಿಂದ ಎಸ್ಐಟಿ ರಚಿಸಿದ್ದು ಕ್ಲೀನ್ಚಿಟ್ ಪಡೆಯಲು ಎಂದು ಸಾಬೀತಾಗಿದೆ ಎಂದು ತಿಳಿಸಿದರು.