ಹುಬ್ಬಳ್ಳಿ:- ಕಾಂಗ್ರೆಸ್ ದಲಿತ ದ್ರೋಹಿ ಪಕ್ಷ ಎಂದು ಪ್ರಹ್ಲಾದ್ ಜೋಶಿ ವಾಗ್ದಾಳಿ ಮಾಡಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಎಸ್ಸಿ, ಎಸ್ಟಿ ಜನಾಂಗಕ್ಕೆ ಅವಕಾಶವೇ ಸಿಗಲಾರದಂತಹ ಪರಿಸ್ಥಿತಿ ಸೃಷ್ಟಿಸಿದ ದಲಿತ-ದ್ರೋಹಿ ಪಕ್ಷ ಕಾಂಗ್ರೆಸ್ ಎಂದರು.
ಜಮ್ಮು, ಕಾಶ್ಮೀರದಂತಹ ಪ್ರಮುಖ ರಾಜ್ಯದಲ್ಲಿ ಎಸ್ಸಿ, ಎಸ್ಟಿಗಳಿಗೆ ಮನ್ನಣೆಯೇ ಇಲ್ಲದಂತಹ ಪರಿಸ್ಥಿತಿಗೆ ನೂಕಿತ್ತು ಕಾಂಗ್ರೆಸ್ ಪಕ್ಷ ಎಂದು ಆರೋಪಿಸಿದರು
ಆ ರಾಜ್ಯದಲ್ಲಿ ಇದೀಗ ಎಲ್ಲವನ್ನೂ ಸರಿ ಮಾಡಿದ್ದೇವೆ. ಎಸ್ಸಿ, ಎಸ್ಟಿಗಳಿಗೆ ಮತ್ತು ಒಬಿಸಿಗಳಿಗೆ ಆರಕ್ಷಣೆ ಒದಗಿಸಿದೆ. ಸ್ವಲ್ಪ ತಡವಾದರೂ ಪರಿಣಾಮಕಾರಿ ಆಗಿ ಕಾನೂನು ಮತ್ತು ಸಂವಿಧಾನಾತ್ಮಕ ಕ್ರಮಗಳನ್ನು ನಮ್ಮ ಸರ್ಕಾರ ಕೈಗೊಂಡಿದೆ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಬಲಾಢ್ಯ ಭಾರತವನ್ನು ಕಟ್ಟುವ ಸಂಕಲ್ಪವನ್ನು ಬಿಜೆಪಿ ಹೊಂದಿದೆ. ಕೇಂದ್ರ ಸರ್ಕಾರ ಆ ನಿಟ್ಟಿನಲ್ಲಿ ಅನೇಕ ಯೋಜನೆಗಳನ್ನು ಜಾರಿಗೊಳಿಸಿದೆ ಎಂದು ಪ್ರತಿಪಾದಿಸಿದರು.
ಡಾ. ಭೀಮರಾವ್ ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸಲೆಂದು ಅವರ ಜನ್ಮಸ್ಥಳ, ಶಿಕ್ಷಣ ಸ್ಥಳ, ಪರಿನಿಬ್ಬಾಣ ಸ್ಥಳ, ದೀಕ್ಷಾ ಭೂಮಿ, ಚೈತ್ಯ ಭೂಮಿಗಳನ್ನು ಪಂಚತೀರ್ಥಗಳನ್ನಾಗಿ ಗುರುತಿಸಿ ಬಿಜೆಪಿ ಅಭಿವೃದ್ಧಿಪಡಿಸುತ್ತಿದೆ ಎಂದು ಹೇಳಿದರು.
ಅಂಬೇಡ್ಕರ್ ಅವರ ಧ್ಯೇಯಕ್ಕೆ ಅನುಗುಣವಾಗಿ ಸಮಾಜದಲ್ಲಿ ಏಕತೆ ನೆಲೆಸಲೆಂದು, ಸಮಾಜದ ಪ್ರತಿ ವರ್ಗಕ್ಕೂ ಸಮಾನ ಹಕ್ಕುಗಳು ಮತ್ತು ಅವಕಾಶಗಳು ದೊರಕಲೆಂದು ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ನಿರಂತರವಾಗಿ ಶ್ರಮಿಸುತ್ತಿದ್ದು, ಅವರು ದೇಶಕ್ಕೆ ಅರ್ಪಿಸಿರುವ ಹಲವಾರು ಜನಪರ ಯೋಜನೆಗಳು ಇದಕ್ಕೆ ನಿದರ್ಶನವಾಗಿವೆ ಎಂದು ಸಚಿವ ಜೋಶಿ ಪ್ರತಿಪಾದಿಸಿದರು