ನವದೆಹಲಿ: ದೇಶದಲ್ಲಿ ಜಾರಿಯಾಗಿರುವ ಮೂರು ಹೊಸ ಕ್ರಿಮಿನಲ್ ಕಾನೂನುಗಳು ಬ್ರಿಟಿಷ್ ಕಾನೂನುಗಳ ಯುಗವನ್ನು ಕೊನೆಗೊಳಿಸಿವೆ. ಅಪರಾಧ ಮತ್ತು ನ್ಯಾಯ ವ್ಯವಸ್ಥೆಯನ್ನು ಸಂಪೂರ್ಣವಾಗಿ ʻಸ್ವದೇಶಿʼ ಆಗಿ ಪರಿವರ್ತಿಸಿವೆ. ಈ ಕಾನೂನುಗಳು ಸಂವಿಧಾನ ಆಶಯಕ್ಕೆ ಅನುಗುಣವಾಗಿ ಕೆಲಸ ಮಾಡುತ್ತವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಶ್ಲಾಘಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೂರು ಹೊಸ ಕಾನೂನುಗಳ ಜಾರಿ ಕುರಿತು ಸ್ಪಷ್ಟನೆ ನೀಡಿದ್ದಾರೆ. ಸ್ವಾತಂತ್ರ್ಯ ಬಂದ ನಂತರ 77 ವರ್ಷಗಳ ಬಳಿಕ ನಮ್ಮ ಕ್ರಿಮಿನಲ್ ನ್ಯಾಯ ವ್ಯವಸ್ಥೆಯು ಸಂಪೂರ್ಣವಾಗಿ ಸ್ವದೇಶಿ ಆಗಿದೆ. ಇದನ್ನು ಸಾಧ್ಯವಾಗಿಸಲು ಸಹಕಾರ ನೀಡಿದ ದೇಶದ ಜನರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದು ನುಡಿದಿದ್ದಾರೆ.
ದಂಡದ ಬದಲಿಗೆ ನ್ಯಾಯ:
ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಅನೇಕ ಸಮುದಾಯಗಳಿಗೆ ಹೊಸ ಕಾನೂನು ಪ್ರಯೋಜನ ಒದಗಿಸುತ್ತದೆ. ದಂಡ ಕಟ್ಟಿ ತಪ್ಪಿಸಿಕೊಳ್ಳುತ್ತಿದ್ದವರಿಗೆ ಶಿಕ್ಷೆಯಾಗಲಿದೆ, ತ್ವರಿತ ವಿಚಾರಣೆಯೊಂದಿಗೆ ಜನರಿಗೆ ತ್ವರಿತವಾಗಿ ನ್ಯಾಯ ಸಿಗಲಿದೆ. ಮೊದಲು ಪೊಲೀಸರ ಹಕ್ಕುಗಳನ್ನು ರಕ್ಷಿಸಲಾಗುತ್ತಿತ್ತು. ಈಗ ಸಂತ್ರಸ್ತರು ಹಾಗೂ ದೂರುದಾರರ ಹಕ್ಕುಗಳನ್ನು ಸಹ ರಕ್ಷಿಸಲಾಗುತ್ತದೆ. ಹೊಸ ಕಾನೂನಿನಲ್ಲಿ ಸಂವಿಧಾನ ಆಶಯಕ್ಕೆ ಅನುಗುಣವಾಗಿ ಹಲವು ವಿಭಾಗಗಳು ಮತ್ತು ಅಧ್ಯಾಯಗಳನ್ನು ವರ್ಗೀಕರಿಸಿದ್ದೇವೆ ಎಂದು ಅಮಿತ್ ಶಾ ತಿಳಿಸಿದ್ದಾರೆ.
![](https://ainlivenews.com/wp-content/uploads/2024/01/Ad-Banner-copy-scaled.jpg)