ಎಂಬತ್ತು ಸಾವಿರ ಕೋಟಿ ರೂಪಾಯಿ ಗ್ಯಾರಂಟಿ ಯೋಜನೆಗಳಿಗೆ ಕೊಡದೇ ಹೋಗಿದ್ದರೆ ಈಗ ಪೆಟ್ರೋಲ್ ಡೀಸೆಲ್ ದರ ಏರಿಕೆ ಮಾಡುವ ಪ್ರಮೇಯವೇ ಉದ್ಭವಿಸುತ್ತಿರಲಿಲ್ಲ. ಇದ್ಯಾವುದರ ಪರಿಜ್ಞಾನವೂ ಇಲ್ಲದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜ್ಞಾನದ ಮಟ್ಟ ಬಿಲ್ಕುಲ್ ಶೂನ್ಯ ಎಂದು ವಿರೋಧ ಪಕ್ಷ ನಾಯಕ ಆರ್.ಅಶೋಕ್ ಲೇವಡಿ ಮಾಡಿದರು.
ನಗರದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅಶೋಕ್, ‘ಅಶೋಕ್ ಪೆದ್ದ. ಆತನಿಗೆ ಬುದ್ದಿ ಇಲ್ಲ ಎನ್ನುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಒಂದು ವರ್ಷದಲ್ಲಿ ಏನೆಲ್ಲಾ ಬರುತ್ತದೆ? ಎಂಬುದರ ಬಗ್ಗೆ ಏನೇನೂ ಗೊತ್ತಿಲ್ಲ. ಹೀಗಿರುವಾಗ ನೀವು 15 ಬಜೆಟ್ ಮಂಡನೆ ಮಾಡಿದ್ದರೂ ನಿಮ್ಮ ನಾಲೇಡ್ಜ್ ಇಷ್ಟೇನಾ?’ ಎಂದು ಪ್ರಶ್ನಿಸಿದರು.
‘ಪೆಟ್ರೋಲ್ ಡೀಸೆಲ್ ದರ ಹೆಚ್ಚಳ ಮಾಡಿ ಬರುವ ಹಣವನ್ನು ಗ್ಯಾರೆಂಟಿ ಯೋಜನೆಗಳಿಗೆ ಬಳಸಿಕೊಳ್ಳುವುದಿಲ್ಲ. ಅಶೋಕ್ ಸ್ವಲ್ಪ ದಡ್ಡ. ಆತನಿಗೆ ಏನೂ ಗೊತ್ತಾಗಲ್ಲ’ ಎಂದಿರುವ ಸಿಎಂ ಹೇಳಿಕೆಗೆ ತಿರುಗೇಟು ನೀಡಿದ ಅಶೋಕ್, ‘ನೀನು 15 ಬಜೆಟ್ ಮಂಡನೆ ಮಾಡಿದ್ದೀಯಲ್ಲಪ್ಪಾ…? ಇದೇನಾ ನಿನ್ನ ನಾಲೇಡ್ಜ್?’ ಎಂದು ಏಕವಚನದಲ್ಲಿ ಕುಟುಕಿದರು.