ರಾಂಚಿ: ಜಾರ್ಖಂಡ್ ನೂತನ ಮುಖ್ಯಮಂತ್ರಿ ಚಂಪೈ ಸೊರೇನ್ (Champai Soren) ಸೋಮವಾರ ವಿಧಾನಸಭೆಯಲ್ಲಿ ವಿಶ್ವಾಸ ಮತದ ಪರೀಕ್ಷೆಯಲ್ಲಿ ಗೆದ್ದಿದ್ದಾರೆ. 81 ಶಾಸಕರ ಪೈಕಿ 47 ಶಾಸಕರ ಬೆಂಬಲ ಪಡೆಯುವ ಮೂಲಕ ಅವರು ಯಶಸ್ವಿಯಾಗಿ ಬಹುಮತ ಸಾಬೀತುಪಡಿಸಿದ್ದಾರೆ. ಹೊಸ ಸರ್ಕಾರಕ್ಕೆ ಬಹುಮತವಿದೆ ಎಂದು ರಾಜ್ಯಪಾಲ ಸಿಪಿ ರಾಧಾಕೃಷ್ಣನ್ ಘೋಷಿಸಿದ ಬೆನ್ನಲ್ಲೇ ಶಾಸಕರು ಹರ್ಷೋದ್ಗಾರಗಳೊಂದಿಗೆ ಮುಖ್ಯಮಂತ್ರಿಯನ್ನು ಅಭಿನಂದಿಸಿದರು.
ಜಾರ್ಖಂಡ್ (Jharkhand) ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ಮುಖ್ಯಮಂತ್ರಿ ಚಂಪೈ ಸೊರೇನ್ ಮೊದಲು ವಿಶ್ವಾಸಮತ ಯಾಚನೆ ಮಂಡಿಸಿದರು. ಬಳಿಕ ಮಾತನಾಡಿದ ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಬಿಜೆಪಿ ಚುನಾಯಿತ ರಾಜ್ಯ ಸರ್ಕಾರವನ್ನು “ಅಸ್ಥಿರಗೊಳಿಸಲು” ಪ್ರಯತ್ನಿಸಿದೆ ಎಂದು ಹೇಳಿದರು. ಈ ಮೂಲಕ ಅವರು ಬಂಧಿತ ಮತ್ತು ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರಿಗೆ ಕ್ಲೀನ್ ಚಿಟ್ ನೀಡಿದರು.
ಹೇಮಂತ್ ಸೂರೇನ್ ಅವರು ಮಾಡದ ಅಪರಾಧಕ್ಕಾಗಿ ಅವರನ್ನು ಎಳೆಯಲಾಗುತ್ತಿದೆ. ಹೇಮಂತ್ ಸೊರೇನ್ (Hemant Soren) ಅವರನ್ನು ಸುಳ್ಳು ಪ್ರಕರಣಗಳಲ್ಲಿ ಸಿಲುಕಿಸಲು ಬಿಜೆಪಿ ಕೇಂದ್ರೀಯ ಸಂಸ್ಥೆಗಳನ್ನು ಬಳಸಿಕೊಂಡಿದೆ ಎಂದು ಚಂಪೈ ಸೊರೇನ್ ಅವರು ವಿಶ್ವಾಸಮತ ಯಾಚನೆ ವೇಳೆ ಆರೋಪಿಸಿದರು.