ಚಿತ್ರದುರ್ಗ, ಜು.02- ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ದೇಶದಾದ್ಯಂತ ಕಂಪ್ಯೂಟರೈಸೇಷನ್ ಅಳವಡಿಕೆ ಕಾರ್ಯ ನಡೆಯುತ್ತಿದೆ ಎಂದು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಇಲ್ಯಾಸ್ ಉಲ್ಲಾ ಷರೀಫ್ ಹೇಳಿದರು. ನಗರದ ಕೆಳಗೋಟೆಯ ಬಿ.ಎಲ್.ಗೌಡ ಲೇಔಟ್ನ ಸಹಕಾರ ಭವನದಲ್ಲಿ ಸಹಕಾರ ಇಲಾಖೆ, ರಾಜ್ಯ ಸಹಕಾರ ಮಹಾಮಂಡಳ ಹಾಗೂ ಜಿಲ್ಲಾ ಸಹಕಾರ ಯೂನಿಯನ್ ವತಿಯಿಂದ ಚಿತ್ರದುರ್ಗ, ಹೊಳಲ್ಕೆರೆ ಹಾಗೂ ಹೊಸದುರ್ಗ ತಾಲ್ಲೂಕುಗಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಒಂದು ದಿನದ ವಿಶೇಷ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿ,
ಚಿತ್ರದುರ್ಗ ಜಿಲ್ಲೆಯಲ್ಲಿ 158 ಸಹಕಾರ ಸಂಘಗಳಲ್ಲಿ 148 ಪಿಎಸಿಎಸ್ ಸಹಕಾರ ಸಂಘಗಳಿಗೆ ಕಂಪ್ಯೂಟರೈಸೇಷನ್ ಅಳವಡಿಕೆ ಕೆಲಸ ನಡೆಯುತ್ತಿದೆ.ಇದರಿಂದ ಜನರಿಗೆ ನಂಬಿಕೆ ಮತ್ತು ವಿಶ್ವಾಸ ಬರುತ್ತದೆ ಎಂದರು. ಸಹಕಾರ ಸಂಘಗಳ ಚುನಾವಣೆ ಜರುಗಿಸುವ ವಿಧಿವಿಧಾನಗಳ ಕುರಿತು ಚಿತ್ರದುರ್ಗ ಜಿಲ್ಲಾ ಸಹಕಾರ ಯೂನಿಯನ್ ವತಿಯಿಂದ ಇಂದು ತರಬೇತಿ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಸಹಕಾರ ಚುನಾವಣೆ ದಿನಾಂಕದ 5 ವರ್ಷಗಳಲ್ಲಿ 2 ವಾರ್ಷಿಕ ಮಹಾಸಭೆಗೆ ಹಾಜರಾದಲ್ಲಿ ಚುನಾವಣೆ ಮತದಾನಕ್ಕೆ ಅರ್ಹರಾಗಿರುತ್ತಾರೆ.
![Demo](https://ainlivenews.com/wp-content/uploads/2023/12/spoorthi-1.jpg)
ಪ್ರಜಾಪ್ರಭುತ್ವದಲ್ಲಿ ಚುನಾವಣೆಗೆ ಬಹಳ ಮಹತ್ವವಿದೆ. ಚುನಾವಣೆ ಸುಗುಮವಾಗಿ ನಡೆಯಲು ಸಹಕಾರ ಸಂಘಗಳ ಕಾರ್ಯನಿರ್ವಾಹಕರ ಜವಾಬ್ದಾರಿ ಬಹಳ ಮುಖ್ಯ. ಕಾನೂನು ಏನು ಹೇಳುತ್ತದೆ ಅದನ್ನು ಅರ್ಥಮಾಡಿಕೊಂಡು ಕೆಲಸ ಮಾಡಬೇಕು. ಚುನಾವಣೆ ಕುರಿತು ನೀಡುವ ಇಂತಹ ಉಪನ್ಯಾಸವನ್ನು ಸಂಘದ ಪ್ರತಿನಿಧಿಗಳು ಸದುಪಯೋಗಪಡಿಸಿ ಕೊಳ್ಳಬೇಕು ಎಂದು ತಿಳಿಸಿದರು. ಕಾರ್ಯಕ್ರಮ ಉದ್ಘಾಟಿಸಿದ ಸಹಕಾರರತ್ನ ಪುರಸ್ಕøತರು ಹಾಗೂ ರಾಜ್ಯ ಸಹಕಾರ ಮಹಾಮಂಡಳ ನಿರ್ದೇಶಕ ಆರ್.ರಾಮರೆಡ್ಡಿ ಮಾತನಾಡಿ, ರಾಜ್ಯ ಸಹಕಾರ ಮಹಾಮಂಡಳದ ವತಿಯಿಂದ ಇನ್ನು ಹೆಚ್ಚಿನ ಒಳ್ಳೆಯ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು.
ಸಂಬಂಧಿಸಿದವರು ಚುನಾವಣೆ ನಡೆಸುವ ಬಗ್ಗೆ ತರಬೇತಿಯ ಉಪನ್ಯಾಸಕರಿಂದ ಮಾಹಿತಿಯನ್ನು ಪಡೆದುಕೊಳ್ಳಬೇಕು. ಇದೇ ರೀತಿ ಇಂತಹ ಕಾರ್ಯಕ್ರಮಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಇದರ ಸದುಪಯೋಗ ಪಡೆದುಕೊಳ್ಳಬೇಕು. ಇದೇ ರೀತಿಯ ಸಹಕಾರ ದೊರೆತಲ್ಲಿ ಸಹಕಾರ ಮಹಾಮಂಡಳದಿಂದ ಇನ್ನಷ್ಟು ತರಬೇತಿಗಳನ್ನು ನೀಡಲು ನಾವು ಸಿದ್ದರಿದ್ದೇವೆ ಎಂದು ಹೇಳಿದರು.
ಸಹಕಾರ ಸಂಘಗಳ ಚುನಾವಣೆ ಜರುಗಿಸುವ ವಿಧಿ-ವಿಧಾನಗಳ ಕುರಿತು ಚಿಕ್ಕಮಗಳೂರಿನ ಸಹಕಾರ ಸಂಘಗಳ ಸಹಾಯಕ ನಿಬಂಧಕ (ನಿವೃತ್ತ) ಎಸ್.ವಿ.ಬಸವರಾಜ್ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಯೂನಿಯನ್ ನಿರ್ದೇಶಕ ಜೆ.ಶಿವಪ್ರಕಾಶ್, ಜಿಲ್ಲಾ ಸಹಕಾರ ಯೂನಿಯನ್ ಉಪಾಧ್ಯಕ್ಷ ರಾದ ಮಾತೃಶ್ರೀ ಮಂಜುನಾಥ್, ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಸಹಾಯಕ ನಿರ್ದೇಶಕ ಪಿ.ಅಂಜನಮೂರ್ತಿ, ಸಹಕಾರ ಸಂಘಗಳ ನಿರೀಕ್ಷಕ ಎಸ್. ಸಂಜಯ್ರಾಮ್, ರಾಮು, ಡಿಸಿಸಿ ಬ್ಯಾಂಕ್ ಮೇಲ್ವಿಚಾರಕರಾದ ಶಂಕರಮೂರ್ತಿ, ಹಿಮಂತರಾಜ್ ಹಾಗೂ ಚಿತ್ರದುರ್ಗ, ಹೊಸದುರ್ಗ ಮತ್ತು ಹೊಳಲ್ಕೆರೆ ತಾಲ್ಲೂಕಿನ ಕೃಷಿ ಪತ್ತಿನ ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಾಹಕರು ಇದ್ದರು.
![](https://ainlivenews.com/wp-content/uploads/2024/01/Ad-Banner-copy-scaled.jpg)