ಚಿಕ್ಕಬಳ್ಳಾಪುರ:– ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ವಡ್ರೆಪಾಳ್ಯಾ ಗ್ರಾಮದಲ್ಲಿ ಜರುಗಿದೆ.
ಶ್ರೀಕಾಂತ್ ಎನ್ನುವ 26 ವರ್ಷದ ಯುವಕ ನೇಣಿಗೆ ಶರಣಾಗಿದ್ದಾನೆ. ಚಿಕ್ಕಬಳ್ಳಾಪುರ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪದವಿ ಮುಗಿಸಿದ್ದ ಶ್ರೀಕಾಂತ್, ಇತ್ತೀಚೆಗೆ ಯುವತಿಯೊಬ್ಬಳನ್ನು ಪ್ರೀತಿಸಿದ್ದನಂತೆ. ಆದ್ರೆ, ತನ್ನ ಪ್ರೀತಿಗೆ ಆಕೆಯಿಂದ ಸಮ್ಮತಿ ದೊರೆಯದ ಕಾರಣ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಇನ್ನು ಮೃತ ಶ್ರೀಕಾಂತ್, ತಂದೆ-ತಾಯಿಯನ್ನು ಕಳೆದುಕೊಂಡಿದ್ದನಂತೆ. ವಿದ್ಯಾಭ್ಯಾಸದಲ್ಲಿ ಪ್ರತಿಭಾವಂತನಾಗಿದ್ದ ಇತ, ಪದವಿ ನಂತರ ಅಭಿನಯ ಕೋರ್ಸ್ ಕಲಿತಿದ್ದ. ತಾನು ಪ್ರೀತಿಸುತ್ತಿದ್ದಾಕೆಯ ಮೇಲೆ ಕವಿತೆಗಳನ್ನು ಬರೆದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾನೆ. ಆದ್ರೆ, ಶ್ರೀಕಾಂತ್ ಯಾರನ್ನು ಪ್ರೀತಿ ಮಾಡುತ್ತಿದ್ದ ಎನ್ನುವುದನ್ನು ಮಾತ್ರ ಆತನ ಮನೆಯಲ್ಲಿಯಾಗಲಿ ಅಥವಾ ಆತನ ಸ್ನೇಹಿತರ ಬಳಿ ಹೇಳಿಕೊಂಡಿರಲಿಲ್ಲ. ಯುವಕ ಶ್ರೀಕಾಂತ್ನ ಸಾವಿನಿಂದ ವಂಡ್ರೆಪಾಳ್ಯಾ ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದ್ದು, ಮೃತನ ಸಹೋದರ ಸುರೇಶ್ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.