ತಿರುಪತಿ ವಿಶೇಷ ದರ್ಶನದ (Tirupati Special Darshan) ಹೆಸರಿನಲ್ಲಿ ಟೀಂ ಇಂಡಿಯಾದ (Team India) ಮಾಜಿ ನಾಯಕ ಎಂಎಸ್ ಧೋನಿ (MS Dhoni) ಅವರ ಮ್ಯಾನೇಜರ್ ಅವರಿಗೆ ವಂಚನೆ ನಡೆಸಿದ ವಿಚಾರ ತಡವಾಗಿ ಬೆಳಕಿಗೆ ಬಂದಿದೆ.
ಕಳೆದ ವರ್ಷ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರ ಪಿಎ ಹೆಸರು ಹೇಳಿಕೊಂಡು ವಂಚನೆ ನಡೆಸಿದ್ದು ಈ ಸಂಬಂಧ ಮ್ಯಾನೇಜರ್ ಸ್ವಾಮಿನಾಥನ್ ಶಂಕರ್ ಅವರು ಹೆಚ್ಎಸ್ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಎಫ್ಐಆರ್ ದಾಖಲಾಗಿದೆ.
ದೂರಿನಲ್ಲಿ ಏನಿದೆ?
ಕಳೆದ ವರ್ಷದ ಅಕ್ಟೋಬರ್ನಲ್ಲಿ ಅಪರಿಚಿತ ವ್ಯಕ್ತಿಯೊಬ್ಬರು ತನ್ನ ಮೊಬೈಲಿಗೆ ಕರೆ ಮಾಡಿ ನಾನು ನಕುಲ್, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಆಪ್ತ ಸಹಾಯಕ ಎಂದು ಪರಿಚಯ ಮಾಡಿ ನ್ಯಾಯಾಧೀಶ ಕೆಸಿ ಭಾನು ಅವರ ಮಗ ಸಂದೀಪ್ ಅವರು ಧೋನಿ ಅವರನ್ನು ಭೇಟಿ ಮಾಡಬೇಕು ಕೇಳಿದ್ದರು. ನಂತರ ಅಕ್ಟೋಬರ್ 29 ರಂದು ಸಂದೀಪ್ ಅವರು ಬಂಗಾಳದ ಹೋಟೆಲಿನಲ್ಲಿ ನಮ್ಮನ್ನು ಭೇಟಿಯಾಗಿದ್ದರು.
ಈ ಭೇಟಿಯ ವೇಳೆ ನೀವು ಯಾವಾಗ ಕೇಳಿದರೂ ನು ತಿರುಪತಿ ವಿಶೇಷ ದರ್ಶನಕ್ಕೆ ವ್ಯವಸ್ಥೆ ಮಾಡುವುದಾಗಿ ಹೇಳಿದ್ದರು. ನವೆಂಬರ್ 30 ರಂದು ನನಗೆ ಕರೆ ಮಾಡಿ 12 ಮಂದಿಗೆ ವಿಶೇಷ ದರ್ಶನದ ಪಾಸ್ ನೀಡಲಾಗುವುದು ಎಂದು ತಿಳಿಸಿದ್ದರು. ಈ ಸಂದರ್ಭದಲ್ಲಿ ನಾನು ದುಬೈನಲ್ಲಿ ಇದ್ದೇನೆ. ಬೇರೆಯವರಿಗೆ ಕೊಡಿ ಎಂದಾಗ ನೀವೇ ಯಾರಿಗಾದರೂ ಪ್ರೊಟೋಕಾಲ್ ಲೆಟರ್ ನೀಡಿ ಎಂದು ಹೇಳಿದ್ದರು. ಹೀಗಾಗಿ ನಾನು ಕೂಡ್ಲುಗೇಟ್ನಲ್ಲಿ ಶಾಲೆ ನಡೆಸುತ್ತಿದ್ದ ಸ್ನೇಹಿತನಾದ ವಿನೀತ್ ಚಂದ್ರಶೇಖರ್ಗೆ ಕರೆ ಮಾಡಿ ತಿಳಿಸಿದ್ದೆ