ಹಾಸನ:- ಮುಖ್ಯಮಂತ್ರಿಗಳ ಬದಲಾವಣೆ ಕೇವಲ ಊಹಾಪೋಹ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು, ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಇಲ್ಲ ಎಂದು ಸ್ವತಃ ಹೈಕಮಾಂಡ್ ಹೇಳಿದ್ದು, ಸಿದ್ದರಾಮಯ್ಯ ಅವರ ಬದಲಾವಣೆ ಯಾವುದೇ ಕಾರಣಕ್ಕೂ ಇಲ್ಲ. ಅದು ಕೇವಲ ಊಹಾಪೋಹ. ಸಿಎಂ ಬದಲಾವಣೆ ಚರ್ಚೆ ಏನೇ ಇದ್ದರೂ, ಅದು ಸದ್ಯಕ್ಕೆ ಇಲ್ಲ ಎಂದು ತಿಳಿಸಿದರು.
ಯಾರು ಏನೇ ಹೇಳಿದರೂ ಸಿಎಂ ಬದಲಾವಣೆ ಚರ್ಚೆ ಪಕ್ಷದೊಳಗೆ ನಡೆದಿಲ್ಲ. ಹಾಗಾಗಿ ಆ ಪ್ರಶ್ನೆ ಉದ್ಭವಿಸದು. ಸಿಎಂ ಹಾಲಿ ಇದ್ದಾರೆ. ನಾನು 2028ಕ್ಕೆ ಸಿಎಂ ಆಗಬೇಕೆಂಬ ಬಯಕೆ ಹೊಂದಿದ್ದೇನೆ. ಅದೇ ಕಾರಣಕ್ಕೆ ನನ್ನ ಮಗಳೂ ಕೂಡ ಅಭಿಪ್ರಾಯ ವ್ಯಕ್ತಪಡಿಸಿರಬಹುದು. ಅಲ್ಲಯವರೆಗೂ ಕಾಯೋಣ ಎಂದರು.
ಮುಂದಿನ ಸಿಎಂ ಸತೀಶ್ ಜಾರಕಿಹೊಳಿ ಎಂಬ ಹೊರಗಿನ ಚರ್ಚೆಗೆ ನಾನು ಉತ್ತರಿಸುವುದಿಲ್ಲ. ನನ್ನ ಹಲವು ಹಿತೈಷಿಗಳು ನಾನೇ ಸಿಎಂ ಎಂದು ಹೇಳಿದ್ದರೂ, ಅದು ಸಿಎಂ ಸಿದ್ದರಾಮಯ್ಯ ಅವರ ಅವಧಿ ಮುಗಿದ ಮೇಲೆ ಅಷ್ಟೇ. ನಾನು ಮುಂದೆ ಸಿಎಂ ಆದರೆ ಅದು ಸಿದ್ದರಾಮಯ್ಯ ಅವರ ಸಹಕಾರದಿಂದಲೇ ಆಗುತ್ತೇನೆ. ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡುವ ವಿಚಾರವಾಗಿ ಕೆಬಿ ಕೋಳಿವಾಡ ಅವರು ನೀಡಿರುವ ಹೇಳಿಕೆ ಅವರ ವೈಯಕ್ತಿಕ ಎಂದು ತಿಳಿಸಿದರು.
ಮೈಸೂರು ಲೋಕಾಯುಕ್ತದಲ್ಲಿ ನಡೆಯುತ್ತಿರುವ ತನಿಖೆಗೆ ಸಿಎಂ ಅವರು ಎಲ್ಲಾ ರೀತಿಯ ಸಹಕಾರ ನೀಡಲಿದ್ದಾರೆ. ಅದರಲ್ಲಿ ಯಾವುದೇ ಮುಜುಗರದ ಪ್ರಶ್ನೆ ಇಲ್ಲ. ಸಿಎಂ ರಾಜೀನಾಮೆ ಕೊಡುತ್ತಾರಾ ಎಂದು ರಾಜೀನಾಮೆಗೆ ಒತ್ತಾಯಿಸುತ್ತಿರುವ ಬಿಜೆಪಿಯ ಹಲವು ನಾಯಕರ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಆರೋಪ ಇದೆ ಎಂದು ಹೇಳಿದರು.